ಬಸವ–ಭೀಮ ಸಂಗಮ’ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ: ಬಸವಣ್ಣನವರ ಚಿಂತನೆ, ವಚನ ಸಾಹಿತ್ಯ ಹಾಗೂ ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಆಶಯಗಳನ್ನು ಇತಿಹಾಸದಿಂದ ಮರೆಮಾಚುವ ಯಾವುದೇ ಪ್ರಯತ್ನವನ್ನು ಸಹಿಸಬಾರದು. ಇಂತಹ ಷಡ್ಯಂತ್ರಗಳ ವಿರುದ್ಧ ಸಮಾಜ ಜಾಗೃತವಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಗೊಠೆ ಗ್ರಾಮದಲ್ಲಿ ಸತ್ಯಶೋಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ಜಾತ್ಯತೀತ, ಬಹುತ್ವ ಕರ್ನಾಟಕ ಸಂಕಲ್ಪದ ಸರ್ವಜಾತಿ–ಸರ್ವಧರ್ಮ ಸಹೋದರತ್ವ ಸಮಾವೇಶ ಹಾಗೂ ಬಸವ–ಭೀಮ ಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ವಿಚಾರಧಾರೆ ಜನಸಾಮಾನ್ಯರಿಗೆ ತಲುಪಬಾರದು ಎಂಬ ಉದ್ದೇಶದಿಂದ ಅವರ ವಚನಗಳನ್ನು ನಾಶಪಡಿಸುವ ಪ್ರಯತ್ನಗಳು ನಡೆದಿವೆ. ತಾಳಿಕೋಟೆ ಹಾಗೂ ಬಹಮನಿ ಸುಲ್ತಾನರ ಕಾಲಘಟ್ಟದ ಇತಿಹಾಸದ ವಿವಿಧ ಘಟನೆಗಳ ನಡುವೆಯೂ ಬಸವಣ್ಣನವರ ಚಿಂತನೆಗಳು ಉಳಿದುಕೊಂಡಿವೆ. ಜ್ಯೋತಿಬಾ ಫುಲೆ ಅವರು ಶಿವಾಜಿ ಮಹಾರಾಜರ ಇತಿಹಾಸವನ್ನು ಜನರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅದೇ ರೀತಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯಗಳನ್ನು ಮರೆಮಾಚುವ ಪ್ರಯತ್ನಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು ಎಂದರು.
“ಇತಿಹಾಸ ಓದದೆ ಇತಿಹಾಸ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇತಿಹಾಸವನ್ನು ಅರಿತುಕೊಂಡಾಗ ಮಾತ್ರ ನಮ್ಮ ಮೇಲೆ ನಡೆದಿರುವ ಅನ್ಯಾಯ, ಅವಮಾನ ಹಾಗೂ ಶೋಷಣೆಯ ಸ್ವರೂಪ ಅರ್ಥವಾಗುತ್ತದೆ. ಈ ಅರಿವು ಕೇವಲ ಪಠ್ಯಪುಸ್ತಕ ಅಥವಾ ಕಂಪ್ಯೂಟರ್ನಿಂದ ಸಿಗುವುದಿಲ್ಲ; ಸಮಾಜದ ಇತಿಹಾಸವನ್ನು ನಾವು ಹುಡುಕಿ ಓದಬೇಕು” ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ಸಮಾಜದಲ್ಲಿ ಇನ್ನೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕೊರತೆ ಇದೆ. ಬಸವಣ್ಣನವರಂತೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು. ಸ್ವಾತಂತ್ರ್ಯ ಪಡೆದು 80 ವರ್ಷಗಳು ಕಳೆದರೂ ಸಂಪೂರ್ಣ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಸಮಾನತೆಯ ತಳಹದಿಯ ಮೇಲೆ ಸಮಾಜ ಕಟ್ಟಬೇಕಿದ್ದು, ವೈಯಕ್ತಿಕ ಸ್ವಾರ್ಥಕ್ಕಾಗಿ ಇಡೀ ಸಮಾಜವನ್ನು ಬಲಿಕೊಡಬಾರದು ಎಂದರು.
ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸಿ, ಆಚರಣೆಯಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿ, ಲಿಂಗಾಯತ ಎಂಬುದು ಕೇವಲ ಜಾತಿಯ ಗುರುತಲ್ಲ; ಬಸವಣ್ಣನವರು ಪ್ರತಿಪಾದಿಸಿದ ಮಾನವೀಯತೆ, ಸಮಾನತೆ ಹಾಗೂ ಅಸ್ಪೃಶ್ಯತೆ ವಿರೋಧಿ ಚಿಂತನೆಗಳ ಸಾಮಾಜಿಕ ಚಳವಳಿಯಾಗಿದೆ ಎಂದರು.
ಗಂಗಾ ಅನಂತಪೂರ ಮಾತನಾಡಿದರು. ವೇದಿಕೆಯಲ್ಲಿ ಬಿ.ಎಸ್. ಸಿಂಧೂರ, ನಜೀರ ಕಂಗನೊಳ್ಳಿ, ಸಿದ್ದು ಕೊಣ್ಣೂರ, ಸುಶೀಲಕುಮಾರ ಬೆಳಗಲಿ, ಸಮೀರ ಕಂಗನೊಳ್ಳಿ, ಬಿ.ಜಿ. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂತೋಷ ತಳಕೇರಿ ಸ್ವಾಗತಿಸಿ ನಿರೂಪಿಸಿದರು.

