ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯದಲ್ಲಿ ಯುವ ಸಮುದಾಯ ಸಾಕಷ್ಟಿದೆ. ಅವರಿಗೆ ಉದ್ಯೋಗವಕಾಶಗಳಿಲ್ಲ. ಕಾರಣ ಸೌಹಾರ್ದ ಸಹಕಾರಿ ಸಂಘಗಳು ಕೇವಲ ಠೇವಣಿ ಸಂಗ್ರಹಣೆ ಮತ್ತು ಸಾಲ ಕೊಡುವದರಲ್ಲಿ ನಿರತರಾಗದೇ ವಿವಿಧ ಉದ್ಯೋಗಗಳಲ್ಲಿಯ ತಜ್ಞರನ್ನು ಕರೆಸಿ, ಯುವಕರಿಗೆ ತರಬೇತಿ ನೀಡಿ ಸ್ವಂತ ಉದ್ಯೋಗಗಳನ್ನು ಮಾಡುವ ಬಗ್ಗೆ ಆಸಕ್ತಿ ಬೆಳೆಸಿ, ರಾಜ್ಯದ ಆದಾಯ ಹೆಚ್ಚಿಸುವಲ್ಲಿ ಸಹಕಾರ ನೀಡಬೇಕೆಂದು ಸಿದ್ದಸಿರಿ ಮಲ್ಟಿ ಪರ್ಪೋಸ್ ಕೋ ಆಫರೇಟಿವ್ ಸೋಸೈಯಿಟಿ ಅಧ್ಯಕ್ಷ ರಾಮನಗೌಡ ಪಾಟೀಲ ಕರೆ ನೀಡಿದರು.
ಅವರು ಭಾನುವಾರ ಇಂಡಿ ನಗರದಲ್ಲಿ ಕ್ಷತ್ರೀಯ ಸೌಹಾರ್ಧ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಸೌಹಾರ್ಧ ಸಂಘಗಳು ಹೆಚ್ಚಿನ ಅವಕಾಶ ನೀಡಿ ವಿವಿಧ ಉದ್ಯೋಗಗಳಲ್ಲಿ ತೊಡಗುವಂತೆ ಮಾಡಬೇಕು. ಯುವಕ-ಯುವತಿಯರು ಮನಸ್ಸು ಮಾಡಿದ್ದಾದರೆ ಬೇಕಾದದ್ದನ್ನು ಸಾಧಿಸಬಲ್ಲರು. ಅವರಿಗೆ ಸರಿಯಾದ ಮಾರ್ಗ ತೋರಿಸುವ ಕೆಲಸವಾಗಬೇಕಿದೆ. ಆ ಕೆಲಸ ಸೌಹಾರ್ಧ ಸಂಘಗಳು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಹಕಾರಿ ಸಂಘಗಳ ನಿರೀಕ್ಷಕ ವಿಜಯಕುಮಾರ ನಾಯಕ ಮಾತನಾಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಿಂದ ಯುವಕರಿಗೆ ಸಿಗುವ ಸಹಾಯ ಸೌಲಭ್ಯಗಳ ಬಗ್ಗೆ ತರಬೇತಿ ನೀಡುವದರೊಂದಿಗೆ ಇಲಾಖೆಯಿಂದ ಸಹಾಯ ನೀಡುವದಾಗಿ ಭರವಸೆ ನೀಡಿದರು.
ಕ್ಷತ್ರೀಯ ಸೌಹಾರ್ದ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ವಿಲಾಸಕುಮಾರ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾನಿಧ್ಯತೆ ವಹಿಸಿದ್ದ ಕಟಬು ಸಿಳ್ಳೇಕ್ಯಾತ ಸಮಾಜದ ಕುಲಗುರು ಕಲ್ಲಿನಾಥ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು. ಕ್ಷತ್ರೀಯ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕ್ಷತ್ರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಟಬು, ಕಟಬರ ಸಮಾಜದ ರಾಜ್ಯಾಧ್ಯಕ್ಷ ಜಗದೀಶ ಕ್ಷತ್ರಿ, ಉದ್ದಿಮೆದಾರ ರಮೇಶ ಗುತ್ತೇದಾರ, ಸ್ವತಂತ್ರ ಶಿಂಧೆ, ಹಿರಿಯ ಪತ್ರಕರ್ತ ಎ.ಸಿ. ಪಾಟೀಲ ಇದ್ದರು.
ಇದೇ ಸಂದರ್ಭದಲ್ಲಿ ಸೌಹಾರ್ಧ ಸಂಘದ ನಿರ್ದೇಶಕರಿಗೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು.
ಸ್ವತಂತ್ರ ಶಿಂಧೆ ಸ್ವಾಗತಿಸಿದರು. ನಾರಾಯಣ ಶಿಂಧೆ ವಂದಿಸಿದರು.

