ಲೇಖನ
– ವೀಣಾ ಹೇಮಂತಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಓರ್ವ ರೈತ ತನ್ನ ಹೊಲವನ್ನು ಉತ್ತು, ಹದ ಮಾಡಿ, ಬೀಜವನ್ನು ಬಿತ್ತಿ, ತಾನು ಮಾಡಿದ ಎಲ್ಲಾ ಕೆಲಸಗಳಿಗೆ ಪ್ರತಿಫಲವಾಗಿ ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿ ತೊಡಗುತ್ತಾನೆ. ಆತನ ಪಾಲಿಗೆ ಬೀಜದಲ್ಲಿಯೇ ಬ್ರಹ್ಮಾಂಡವಿದೆ.ಅಂತೆಯೇ ಮಕ್ಕಳು ಕೂಡ ಬ್ರಹ್ಮಾಂಡ ಶಕ್ತಿಯ ಆಗರವಿದ್ದಂತೆ. ಮಕ್ಕಳ ಮೆದುಳು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ವಿಷಯಗಳ ಕುರಿತು ಎಲ್ಲವನ್ನು ಸಮಾನ ಆಸಕ್ತಿಯಿಂದ ಕಲಿತು ತನ್ನಲ್ಲಿ ಅಡಕಗೊಳಿಸಿಕೊಳ್ಳಬೇಕು.ಅಂತೆಯೇ ಪರೀಕ್ಷೆ
ಎಂಬ ವಿಷಯ ಮಕ್ಕಳಿಗೆ ರಕ್ಷೆಯಾಗಿ ಭಾಸವಾಗಬೇಕು.
ಮಕ್ಕಳು ಪರೀಕ್ಷೆಯ ವಿಷಯದಲ್ಲಿ ಯಾವುದೇ ರೀತಿಯ ಆತಂಕವನ್ನು ಹೊಂದಿರದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ಮನೆಯೇ ಮೊದಲ ರಕ್ಷೆಯಾಗಬೇಕು.
“ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ನಾವೇ ಧನ್ಯರು” ಎಂಬ ಮಾತಿನಂತೆ ತಾಯಿಯು ಮಗುವಿನಲ್ಲಿ ಧೈರ್ಯ, ಭರವಸೆ ಮತ್ತು ಆತ್ಮವಿಶ್ವಾಸಗಳನ್ನು ಉದ್ದೀಪಿಸಬಲ್ಲಳು.
ಪಾಲಕರಾಗಲಿ ಶಿಕ್ಷಕರಾಗಲಿ ಮಕ್ಕಳಿಗೆ ಕುಳಿತರೆ ನಿಂತರೆ ಊಟ ಮಾಡುತ್ತಿರಲಿ, ಆಟ ಆಡುತ್ತಿರಲಿ ಪದೇ ಪದೇ ಪರೀಕ್ಷೆಯ ವಿಷಯವನ್ನು ನೆನಪಿಸಿ ಭೀತಿಯನ್ನು ಹುಟ್ಟಿಸಬಾರದು. ಪರೀಕ್ಷೆ ಎಂಬುದು ಅವರ ಇದುವರೆಗಿನ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಕ್ರಿಯೆ ಎಂಬಂತೆ ಮಕ್ಕಳಿಗೆ ಭಾಸವಾಗಬೇಕು. ಪರೀಕ್ಷೆಯ ಸಮಯದಲ್ಲಿ ನಿರಾಳ ಭಾವ ಮಕ್ಕಳಲ್ಲಿರಬೇಕು. ಇನ್ನೇನು ಪರೀಕ್ಷೆ ನಾಳೆಗೆ ಆರಂಭವಾಗುತ್ತದೆ ಎಂದರೆ ಮಕ್ಕಳು ಪರೀಕ್ಷೆಗೆ ಓದುವ ಕೆಲಸವನ್ನು ನಿಲ್ಲಿಸಿ ಆರಾಮದಾಯಕ ಮನಸ್ಥಿತಿಯನ್ನು ಹೊಂದಬೇಕು. ಪರೀಕ್ಷೆಗೆ ಬೇಕಾದ ಹಾಲ್ ಟಿಕೆಟ್, ಪೆನ್ನುಗಳು, ಜಾಮಿಟ್ರಿ ಬಾಕ್ಸ್ ಮುಂತಾದ ಪರಿಕರಗಳನ್ನು ಹಿಂದಿನ ದಿನ ಮಧ್ಯಾಹ್ನದ ನಂತರ ಹೊಂದಿಸಿಟ್ಟುಕೊಳ್ಳಬೇಕು. ಅತ್ಯಂತ ನಿರಾಳ ಭಾವದಿಂದ ಆಹಾರವನ್ನು ಸೇವಿಸಿ ಒಂದೊಳ್ಳೆಯ ಹರಟೆಯನ್ನು ಪಾಲಕರೊಂದಿಗೆ ಪೂರೈಸಿ ಬೇಗನೆ ನಿದ್ರಿಸಲು ಅನುವಾಗಬೇಕು. ಒಂದೊಳ್ಳೆಯ ನಿದ್ರೆ ಮಗುವಿನ ಮೆದುಳಿನಲ್ಲಿರುವ ನ್ಯೂರೋ ಟ್ರಾನ್ಸ ಮಿಟರ್ಗಳನ್ನು ಜಾಗೃತವಾಗಿಸಿ ಸಂಯೋಜಿಸಲ್ಪಡುತ್ತವೆ. ಮರುದಿನ ಮುಂಜಾನೆ ಸ್ವಸ್ಥ ಚಿತ್ತರಾಗಿ ಏಳುವ ಮಕ್ಕಳು ದೈನಂದಿನ ಕರ್ಮಗಳನ್ನು ಪೂರೈಸಿ ತಮ್ಮ ಆಯ್ಕೆಯ ತಿಂಡಿಯನ್ನು ಸೇವಿಸಿದಾಗ ಅವರಲ್ಲಿ ಸಂತೃಪ್ತಿ ಮನೆ ಮಾಡುತ್ತದೆ. ಇಂತಹ ಸಂತೃಪ್ತ ಮನಸ್ಥಿತಿಯಲ್ಲಿ ಮಕ್ಕಳು ಪರೀಕ್ಷೆಯ ಹಾಲ್ಗೆ ತೆರಳಿದಾಗ

ಒಳ್ಳೆಯ ಮನಸ್ಥಿತಿಯು ಅವರಿಗೆ ಪರೀಕ್ಷೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಮಕ್ಕಳು ಪರೀಕ್ಷೆಯ ಸಮಯದಲ್ಲಿ ಇದುವರೆಗೂ ಮಾಡಿಕೊಂಡು ಬಂದಿರುವ ಕೆಲಸಗಳಿಂದ ಅವರಿಗೆ ವಿನಾಯಿತಿ ನೀಡಬೇಕು. ಒತ್ತಡ ರಹಿತರಾಗಿ ಮಕ್ಕಳು ಓದಿಕೊಳ್ಳಲು ಇದು ತುಸುಮಟ್ಟಿಗೆ ಒಳ್ಳೆಯದು. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಆತಂಕ ರಹಿತರಾಗಿರುವುದು ಹೆಚ್ಚು ಲಾಭದಾಯಕ. ಪಾಲಕರೊಂದಿಗೆ ಮಾತನಾಡುತ್ತಾ, ಒಡನಾಡುತ್ತಾ ಮಕ್ಕಳು ತಮ್ಮ ಪರೀಕ್ಷಾ ಪರಿಕರಗಳನ್ನು ಹೊಂದಿಸಿಕೊಂಡು ಅಲ್ಲಿ ಹಾಲ್ ಟಿಕೆಟ್ ನಂಬರ್ ಎಂಟ್ರಿ ಮಾಡುವುದರಿಂದ ಹಿಡಿದು ಹೇಗೆ ಬರೆಯಬೇಕು ಎಂಬುದರ ಕುರಿತು ಸೂಕ್ಷ್ಮವಾಗಿ ಪಾಲಕರೊಂದಿಗೆ ಮಾತನಾಡುವುದು ಮರುದಿನದ ತಯಾರಿಗೆ ಒಳ್ಳೆಯ ಆರಂಭವನ್ನು ಕೊಡುತ್ತದೆ. ಪಾಲಕರ ವ್ಯಂಗ್ಯ ಮಾತುಗಳು ಮಗುವಿನಲ್ಲಿ ನಿರಾಶೆಯನ್ನು, ಹತಾಶೆಯನ್ನು ಮೂಡಿಸಬಹುದು ಯಾವಾಗಲೂ ಪಾಲಕರು ಮುಂದಿನ ಯೋಜನೆಯ ಕುರಿತು ಮಾತನಾಡಬೇಕು. ಮಕ್ಕಳ ವಿಚಾರಗಳನ್ನು ನಿಯಂತ್ರಿಸುವುದಲ್ಲ, ಪ್ರೋತ್ಸಾಹಿಸುವುದರ ಮೂಲಕ
ಅವರಿಗೆ ಉತ್ತೇಜಿಸಬೇಕು.


