ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಠ ಮಾನ್ಯಗಳ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಉತ್ತಮ ನಡೆ ಮತ್ತು ಬಸವಾದಿ ಶರಣರ ದಾಸೋಹ ತತ್ವ ಎಲ್ಲೆಡೆ ನೆಲೆಗೊಳ್ಳುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ರಾತ್ರಿ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ವಜ್ರಮಹೋತ್ಸವ ಹಾಗೂ ಉತ್ತರಾಧಿಕಾರಿ ಪೂಜ್ಯ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಅಂಗವಾಗಿ ‘ತಿರಂಗಾ ಬುತ್ತಿ ಯಾತ್ರೆ’ಯನ್ನು ಮಠದ ಮಹಾದ್ವಾರದಲ್ಲಿ ಸ್ವಾಗತಿಸಿ, ನಂತರ ನಡೆದ ಭವ್ಯ ಪ್ರವಚನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
12ನೇ ಶತಮಾನವೇ ಬಬಲೇಶ್ವರ ಮಠದ ಕಾರ್ಯಕ್ರಮದಲ್ಲಿ ಮರುಕಳಿಸಿದಂತೆ ಗೋಚರಿಸುತ್ತಿದೆ. ತಾಯಂದಿರು ಬುತ್ತಿ ಉತ್ಸವವನ್ನು ಭಕ್ತಿ, ಶ್ರದ್ಧೆಯಿಂದ ಮಾಡಿದ್ದಾರೆ. ಈ ಸೇವೆಯಲ್ಲಿ ತಮ್ಮದೂ ಒಂದು ಅಗುಳಿನ ಪಾತ್ರವಿದೆ, ಅದೇನೆಂದರೆ ಇಲ್ಲಿಗೆ ನೀರು ಹರಿಸಿದ ತೃಪ್ತಿ ತಮ್ಮದು. ಸಮೃದ್ಧ ಬೆಳೆ ಬೆಳೆದು ಎಲ್ಲರೂ ಸುಖಿಯಾಗುತ್ತಿದ್ದಾರೆ. ಅಂಥ ಮನೆಗಳಿಂದ ಬಂದ ರೊಟ್ಟಿಗೆ ನೀರು ದೊರೆತ ನೆಮ್ಮದಿ ಇದೆ. ಸಿದ್ದೇಶ್ವರ ಶ್ರೀಗಳ ಆಶಯದಂತೆ ಬರದ ನಾಡಿನ ಹಣೆಪಟ್ಟಿ ತೆಗೆಯಲು ಶ್ರಮಿಸಿದ್ದೇನೆ ಎಂದು ಅವರು ಹೇಳಿದರು.
ವಿಜಯಪುರ ಭೀಕರ ಬರಗಾಲ ಪ್ರದೇಶವಾಗಿತ್ತು. ಜಿಲ್ಲೆಯಲ್ಲಿ ಭೂಮಿ ಕಳೆದುಕೊಂಡ ಅರ್ಧ ಭಾಗವೂ ನೀರಾವರಿ ಆಗಿರಲಿಲ್ಲ. ಬಬಲೇಶ್ವರ, ತಿಕೋಟಾಗಳಿಗೆ ಶಕ್ತಿ ಮೀರಿ ನೀರು ನೀಡಿದ್ದೇವೆ. ಇದಕ್ಕೆ ನಾವು ಮಾಜಿ ಸಿಎಂ ಸಿದ್ದರಾಮಯ್ಯರನ್ನು ನೆನೆಸಬೇಕು. ಈಗ ಬರಗಾಲವಿದ್ದರೂ ಇಲ್ಲಿ ಅದರ ಪರಿಣಾಮ ಕಡಿಮೆ. ಕೆರೆ, ಹಳ್ಳಗಳಿಗೆ ನೀರು ಸಿಕ್ಕಿವೆ. ಪ್ರಾಧಿಕಾರದ ಗೆಜೆಟ್ ನೋಟಿಫಿಕೇಷನ್ಗೂ ಮೊದಲೇ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸಿದ್ದು ಈಗ ಇತಿಹಾಸ. ಶ್ರೀ ಸಿದ್ದೇಶ್ವರ ಶ್ರೀಗಳ ನಂತರ ಮಣಕವಾಡಿ ಶ್ರೀಗಳ ಪ್ರವಚನ ಜನಮಾನಸ ಮುಟ್ಟುತ್ತಿದೆ. ಶ್ರೀಗಳು ಬಸವಾದಿ ಶರಣರ ವಿಚಾರಗಳನ್ನು ಎಲ್ಲೆಡೆ ತಲುಪಿಸುತ್ತಿದ್ದಾರೆ. ಅವರು ಮಣಕವಾಡಿಯಲ್ಲಿ ಆರಂಭಿಸಿರುವ ಆಧುನಿಕ ಶಾಲೆ ಅವರ ಶಕ್ತಿ, ಸಾಹಸವನ್ನು ಬಿಂಬಿಸುತ್ತದೆ ಎಂದು ಸಚಿವರು ಹೇಳಿದರು.
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶಿವಯೋಗಿ, ಶಾಂತವೀರ ಶ್ರೀಗಳು ಈ ಭಾಗದ ರತ್ನಗಳು. ಈಗಿನ ಮಹಾದೇವ ಶ್ರೀಗಳದ್ದು ಮಗುವಿನ ಮನಸ್ಸು. ಮಠಮಾನ್ಯಗಳಿಗೆ ತಮ್ಮ
ಸೇವೆ, ಸಹಕಾರ ನಿರಂತರ ಇರಲಿದೆ ಎಂದು ಅವರು ಭರವಸೆ ನೀಡಿದರು.
ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು,
ಪ್ರವಚನ ನೀಡಿದ ಮಣಕವಾಡದ ಮೃತ್ಯುಂಜಯ ಶ್ರೀಗಳು, ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಆಕಾಶದಿಂದ ಬಿದ್ದ ನೀರನ್ನು ರೈತರಿಗೆ ನೀಡಿದ ಸಾಧಕ. ಬರಡು ಭೂಮಿಯಲ್ಲಿ ಬಂಗಾರ ಬೆಳೆವಂತಾಗಿದೆ ಎಂದು ರೈತರು ಇವರನ್ನು ಸ್ಮರಿಸುತ್ತಾರೆ. ಬೆಳೆವ ಸನ್ಯಾಸಿಗಳ ಹಿಂದೆಯೂ ಇವರಿದ್ದಾರೆ. ಶರಣ ಪರಂಪರೆ ಮುಂದುವರಿಸಿದ್ದಾರೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಡಾ. ಮಹಾದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮನಗೂಳಿಯ ಶ್ರೀ ಅಭಿನವಸಂಗನಬಸವ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು, ಮೈಸೂರಿನ ನಿರಂಜನ ದೇವರು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಉಪಸ್ಥಿತರಿದ್ದರು.

