ಇಂಡಿ ತಾಲೂಕಿನ ಸಾವಳಸಂಗದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ | ಸಚಿವ ರಾಮಲಿಂಗಾರೆಡ್ಡಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡರು ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಅಭಿವೃಧ್ಧಿಯ ಯಾವುದೇ ಕೆಲಸ ತಂದರೂ ಅದನ್ನು ಕೂಡಲೆ ಮಾಡಿಕೊಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ವಿಜಯಪುರದ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಇಂಡಿ ಸಾಮಾಜಿಕ ಅರಣ್ಯ ವಲಯದ ಜಂಟಿ ಸಹಯೋಗದಲ್ಲಿ ಇಂಡಿ ತಾಲೂಕಿನ ಸಾವಳಸಂಗದಲ್ಲಿ ನಿರ್ಮಿಸಲಾಗಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನವನ್ನು ಭಾನುವಾರ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿಜಯಪೂರ ಜಿಲ್ಲೆಯಲ್ಲಿ ಕೇವಲ ೨ ಪ್ರತಿಶತದಷ್ಟು ಮಾತ್ರ ಅರಣ್ಯೀಕರಣವಿದೆ. ಈ ಭಾಗದಲ್ಲಿ ಇನ್ನೂ ಅರಣ್ಯ ಪ್ರದೇಶ ಹೆಚ್ಚಾಗಬೇಕು. ಅಂದಾಗ ಮಾತ್ರ ಇಲ್ಲಿ ಉತ್ತಮ ಮಳೆ, ಬೆಳೆ ಬರಲು ಸಾಧ್ಯವಾಗುತ್ತದೆ. ಮತ್ತು ಜನರು ಆರೋಗ್ಯವಂತರಾಗಿ ಬಾಳಲು ಅನುಕೂಲವಾಗುತ್ತದೆ ಎಂದರು.
ಸಾವಳಸಂಗ ಭಾಗದಲ್ಲಿ ಅರಣ್ಯ ಇಲಾಖೆಯವರು ಹಸಿರೀಕರಣ ಹೆಚ್ಚಿಸಲು ಕೈಗೊಂಡಿರುವ ಈ ಕಾರ್ಯವನ್ನು ಪ್ರಶಂಸಿಸಿದ ಸಚಿವರು, ಕೇವಲ ೨.೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಇಷ್ಟೊಂದು ಅದ್ಭುತವಾಗಿ ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂಡಿ ನಗರದಲ್ಲಿ ಟ್ರೀ ಪಾರ್ಕ್ ಹಾಗೂ ಕೃಷ್ಣಮೃಗ ಮೀಸಲು ಪ್ರದೇಶವನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೃಕ್ಷೋದ್ಯಾನಕ್ಕೆ ನಡೆದಾಡುವ ದೇವರು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರನ್ನಿರಿಸಿರುವುದು ಶ್ರೇಷ್ಠ ಎಂದ ಅವರು, ಪ್ರತಿಯೊಬ್ಬರ ಹೃದಯದಲ್ಲೂ ಸರಳತೆ, ಜ್ಞಾನ ಹಾಗೂ ಪರಿಸರ ಪ್ರೀತಿಯನ್ನು ಮೂಡಿಸುವಂತಿದೆ. ಅವರ ದಿವ್ಯ ಸಾನ್ನಿಧ್ಯ ಮತ್ತು ಪ್ರೇರಣೆಯಿಂದ ನಿರ್ಮಾಣಗೊಂಡಿರುವ ಈ ಆಕರ್ಷಕ ತಾಣವು ಜನರಲ್ಲಿ ಪ್ರಕೃತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡುತ್ತದೆ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ನಾಗರಿಕರು ಸಸಿ ನೆಡುವ ಮೂಲಕ ಇದನ್ನು ತಮ್ಮ ಸ್ವಂತ ಆಸ್ತಿಯಂತೆ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಶಾಸಕರ ಶ್ರಮವನ್ನು ಇದೇ ವೇಳೆ ಕ್ಷೇತ್ರದಲ್ಲಿ ಕೊಂಡಾಡಿದ ಸಚಿವರು, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ಈ ಭಾಗದ ಜನರಿಗೆ ಮತ್ತು ಕೃಷಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಧ್ಯಕ್ಷತೆ ವಹಿಸಿ, ನಿಸರ್ಗ ಪ್ರಿಯ ಹಾಗೂ ಸರಳ ಬದುಕಿನ ಚಿಂತಕರಾಗಿದ್ದ ಸಿದ್ದೇಶ್ವರ ಶ್ರೀಗಳ ತತ್ತ್ವಗಳು ಮುಂದಿನ ಜನಾಂಗಕ್ಕೆ ಸ್ವಚ್ಛತೆ, ಸರಳತೆ ಹಾಗೂ ನಿಷ್ಠೆಯ ಹಾದಿ ತೋರಿಸಲಿವೆ ಎಂದರು.
ಆಲಮಟ್ಟಿ ಜಲಾಶಯಕ್ಕಾಗಿ ಭೂಮಿ ತ್ಯಾಗ ಮಾಡಿದ ಪುಣ್ಯಾತ್ಮರ ಬಲದಿಂದಲೇ ಇಂದು ಈ ಭಾಗ ಉಸಿರಾಡುತ್ತಿದೆ ಎಂದು ಸ್ಮರಿಸಿದ ಶಾಸಕರು, ಬರದಿಂದ ತತ್ತರಿಸಿದ್ದ ಈ ಕ್ಷೇತ್ರದಲ್ಲಿ ನೀರಿನ ಅಭಾವ ನೀಗಿಸಲು ರೂಪಿಸಲಾದ ನೀರಾವರಿ ಯೋಜನೆಗಳಿವೆ ಎಂದು ವಿವಿಧ ಯೋಜನೆಗಳ ಪ್ರಗತಿಯನ್ನು ಹಂಚಿಕೊಂಡರು.
ಕ್ಷೇತ್ರದಲ್ಲಿ ಈಗಾಗಲೇ ೧೯ ಕೆರೆಗಳನ್ನು ತುಂಬಿಸಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳಗೊಂಡಿದೆ. ಆ ಮೂಲಕ ಈ ಭಾಗದ ರೈತರಿಗೆ ಅನುಕೂಲವಾಗಿದೆ ಎಂದರು.
ಮಳೆಯಾಗದೇ ಬೆಳೆ ಕಳೆದುಕೊಂಡಿರುವ ರೈತರ ಹಿತ ಕಾಯಲು ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತರಿಗೆ ಶೀಘ್ರವೇ ಪರಿಹಾರ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದರು. ಹಾಗೆಯೇ ಇಂಡಿ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಈಗಾಗಲೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಸತತ ಪರಿಶ್ರಮ ಹಾಗೂ ತಾವು ನೀಡಿದ ೯೦ ಲಕ್ಷ ರೂಪಾಯಿ ಅನುದಾನ ಸೇರಿದಂತೆ ಅನೇಕರ ಸಹಕಾರದಿಂದ ಈ ವೃಕ್ಷೋದ್ಯಾನ ರೂಪುಗೊಂಡಿದೆ. ಇದನ್ನು ಪ್ರತಿಯೊಬ್ಬರೂ ತಮ್ಮ ಸ್ವಂತ ಆಸ್ತಿಯಂತೆ ಭಾವಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಸಾರ್ವಜನಿಕರು ಸಸಿ ನೆಡುವ ಮೂಲಕ ಹಸಿರೀಕರಣ ಬೆಳವಣಿಗೆಗೆ ಪೂರಕವಾಗಿ ಪ್ರೇರಣೆ ನೀಡಬೇಕು ಎಂದರು.
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ನಿಸರ್ಗದಲ್ಲಿ ಬೆರೆತಿದ್ದಾರೆ. ಸ್ವಾಮೀಜಿಯವರು ನಿಸರ್ಗ ಪ್ರಿಯರಾರಾಗಿದ್ದರಿಂದ ಅವರ ಹೆಸರನ್ನೇ ಈ ವೃಕ್ಷೋದ್ಯಾನಕ್ಕೆ ನಾಮಕರಣ ಮಾಡಿದ್ದೇವೆ ಎಂದ ಅವರು, ಅಂತಹ ಮಹಾ ಮೇಧಾವಿಗಳ ಪವಿತ್ರವಾದ ಹೃದಯಕ್ಕೆ ಈ ವೃಕ್ಷೋದ್ಯಾನ ಅರ್ಪಿಸಲಾಗುತ್ತಿದೆ ಎಂದರು.
ಸಿದ್ದೇಶ್ವರ ಸ್ವಾಮೀಜಿ ಅವರ ಆಶಯದಂತೆ ಈ ವೃಕ್ಷೋದ್ಯಾನ ನಿರ್ಮಾಣವಾಗಿದೆ. ಸರ್ಕಾರದ ಜೊತೆ ನಾಗರಿಕರ ಸಹಭಾಗಿತ್ವ ಬಹು ಮುಖ್ಯವಾಗಿದೆ. ಇಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಈ ಪ್ರದೇಶ ಸ್ವಚ್ಛವಾಗಿಡೋಣ. ನಿಸರ್ಗವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ನಮ್ಮ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಗಾಗುವಲ್ಲಿ ಸಸಿ ನೆಡಿ, ಅರಣ್ಯೀಕರಣ ಬೆಳೆಸುವ ಪ್ರಯತ್ನ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಹಸರೀಕರಣವಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.
ಭೀಮಾ ಸಿರಿಯಾಗಿಸುವೆ:
ತಮ್ಮ ಶ್ರಮದ ಫಲವಾಗಿ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿ ಜಿಐ ಟ್ಯಾಗ್ ದೊರೆತಿದ್ದರಿಂದ ಇಂಡಿಯ ಲಿಂಬೆ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಭೀಮಾ ತೀರವನ್ನು ಭೀಮಾ ಸಿರಿಯಾಗಿಸುವ ನಿಟ್ಟಿನಲ್ಲಿ ಕೆಲಸ ಸಾಗುತ್ತಿದ್ದು, ಸರ್ಕಾರದ ಜೊತೆಗೆ ನಾಗರಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.
ಕ್ಷೇತ್ರ ಅಭಿವೃದ್ಧಿಪಡಿಸಲು ಹಾಗೂ ಈ ಭಾಗದ ರೈತರ ಸಂಕಟಗಳಿಗೆ ಸ್ಪಂದಿಸಲು ತಾವು ಬದ್ಧವಾಗಿದ್ದು, ಮುಖ್ಯಮಂತ್ರಿಗಳು ಕೂಡ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಭರವಸೆ ನೀಡಿದ್ದಾರೆ ಎಂದು ಶಾಸಕರು ಹೇಳಿದರು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಶ್ರೀ ಅಮೃತನಾಂದ ಮಹಾಸ್ವಾಮಿಜಿ ಅವರು ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾಣ, ವೈ.ವಿ.ಪಿ ಫೌಂಢೇಶನ್ ಗೌರವಾಧ್ಯೆಕ್ಷೆ ಶಿವಲೀಲಾ ಪಾಟೀಲ ಮಾತನಾಡಿದರು.
ವೃಕ್ಷೆÆÃಧ್ಯಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಂಜುನಾಥ ಧೂಳೆ ಅವರಿಗೆ ಸಚಿವರು, ಶಾಸಕರು ಸತ್ಕರಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಅಮೋಘ ಸಿದ್ದೇಶ್ವರ ಸ್ವಾಮೀಜಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಣಿ ಮಂಡಳಿಯ ಅಧ್ಯಕ್ಷರಾದ ಬಿ.ಎಸ್. ಕವಲಗಿ, ತಾಲೂಕಾ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಪ್ರಶಾಂತ ಕಾಳೆ, ಇಂಡಿ ಉಪವಿಭಾಗಾಧಿಕಾರಿಗಳಾದ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ನಾಗೇಂದ್ರ ಕೋಳಶೇಟ್ಟಿ, ಡಿಸಿಎಫ್ ಬಾಗಲಕೋಟೆ ವಲಯ ಅರಣ್ಯಾಧಿಕಾರಿಗಳಾದ ಸ್ವಪ್ನಿಲ್, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಇಓ ಮಹಾದೇವಪ್ಪ ಏವೂರ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲಿನಾಥ ಕುಸನಾಳ, ಆರ್ ಎಫ್ ಒ ಶಿವರುದ್ರಪ್ಪ ಕಬಾಡಗಿ, ಎಂ. ಆರ್. ಪಾಟೀಲ ಮತ್ತು ವಿವಿಧ ಮಠಾಧೀಶರು, ಪರಿಸರ ಪ್ರೇಮಿಗಳು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

