ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಅಶ್ವದೀಪ ಎನ್ನುವುದು ಒಂದು ಪುರಾತನ ಕೈಮಗ್ಗ ಸಂಸ್ಥೆಯಾಗಿತ್ತು. ಹಲವು ವಿಧದ ಸೀರೆಗಳು ಮತ್ತು ದೇಸೀ ಬಟ್ಟೆಗಳನ್ನು ಇಲ್ಲಿ ವಿಶ್ವದರ್ಜೆಯ ಮಟ್ಟದಲ್ಲಿ ನೇಯಲಾಗುತ್ತಿತ್ತು. ಈ ಸಂಸ್ಥೆಯಲ್ಲಿ ಸಾವಿರಾರು ಮಂದಿ ನೇಕಾರರು ನೇಯ್ಗೆಯ ಕೆಲಸವನ್ನು ಮಾಡುತ್ತಿದ್ದರು. ಈ ಸಂಸ್ಥೆಯ ಮಾಲೀಕನಾದ ಸೋಹನ್ ಲಾಲ್ ತನ್ನ ಸಂಸ್ಥೆಯ ಉದ್ಯೋಗಿಗಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದ. ಅಲ್ಲಿನ ಕೆಲಸಗಾರರೂ ತಮ್ಮ ಸಂಸ್ಥೆ ಮತ್ತು ಮಾಲೀಕನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಈ ಸಂಸ್ಥೆಯ ಸಾವಿರಾರು ಕೆಲಸಗಾರರ ಪೈಕಿ ಸೋಹನ್ಲಾಲ್ಗೆ ನಮನ್ ಎನ್ನುವಾತ ಆತನ ಕೆಲಸದ ಮೇಲಿನ ಬದ್ಧತೆ, ಶ್ರದ್ಧೆ ಮತ್ತು ಕಠಿಣ ಪರಿಶ್ರಮದ ಕಾರಣದಿಂದ ಅತ್ಯಂತ ಅಚ್ಚುಮೆಚ್ಚಿನ ಕೆಲಸಗಾರ ಆಗಿದ್ದ.

ಒಂದು ದಿನ ಸೋಹನ್ ಲಾಲ್ ತನ್ನ ನಿಷ್ಟಾವಂತ ಕೆಲಸಗಾರನಾದ ನಮನ್ಗೆ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿದ. ಈ ಸೈಕಲ್ ಆಗಿನ ಕಾಲದ ಅತ್ಯಂತ ದುಬಾರಿ ಸೈಕಲ್ ಆಗಿದ್ದುದಲ್ಲದೇ ನೋಡಲೂ ಸುಂದರವಾಗಿತ್ತು. ಆದರೆ ಆ ಸೈಕಲ್ ಹಿಂಭಾಗದಲ್ಲಿ ಕ್ಯಾರಿಯರ್ ಇರಲಿಲ್ಲ. ಇದನ್ನು ಗಮನಿಸಿ ನಮನ್ ಸೈಕಲ್ ಹಿಂಭಾಗದಲ್ಲಿ ಕ್ಯಾರಿಯರ್ ಇರಬೇಕು ಎಂದು ಕ್ಯಾರಿಯರ್ನ್ನು ಅಳವಡಿಸಿ ಕೊಡುವಂತೆ ಸಂಸ್ಥೆಯ ಮಾಲೀಕ ಸೋಹನ್ಲಾಲ್ಗೆ ವಿನಂತಿಯನ್ನು ಮಾಡಿದನು. ನಮನ್ನ ವಿನಂತಿಯ ಪ್ರಕಾರ ಕ್ಯಾರಿಯರನ್ನು ಮಾಲೀಕ ಅಳವಡಿಸಿ ಕೊಟ್ಟ, ಆದರೆ ಈ ಬಾರಿ ಸೈಕಲ್ನ ಸ್ಟ್ಯಾಂಡನ್ನು ಕಳಚಿ ನಮನ್ಗೆ ಕೊಟ್ಟನು. ಸ್ಟ್ಯಾಂಡ್ ಇಲ್ಲದೇ ಇರುವುದನ್ನು ಗಮನಿಸಿದ ನಮನ್ ತನ್ನ ಮಾಲೀಕನಲ್ಲಿ ಆಗ ಸೈಕಲ್ನಲ್ಲಿ ‘ಕ್ಯಾರಿಯರ್’ ಇರಲಿಲ್ಲ, ಈಗ ‘ಸ್ಟ್ಯಾಂಡ್’ ಇಲ್ಲ ಹೀಗೇಕೆ? ಎಂದು ಕೇಳಿದನು.
ಆಗ ಸೋಹನ್ಲಾಲ್ ನಗುತ್ತಾ, ಯಾವುದೇ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯೊಬ್ಬನಿಗೆ ಉದ್ಯೋಗದಲ್ಲಿ ಆತನ ‘ಭವಿಷ್ಯ’ (ಕ್ಯಾರಿಯರ್) ಅಥವಾ ಸಂಸ್ಥೆಯಲ್ಲಿ ‘ನೆಲೆಯೂರುವಿಕೆ’ (ಸ್ಟ್ಯಾಂಡ್)ಗಳ ಪೈಕಿ ಯಾವುದಾದರೂ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ನೀನು ಉದ್ಯೋಗದಲ್ಲಿ ‘ನೆಲೆಯೂರುವಿಕೆ’ (ಸ್ಟ್ಯಾಂಡ್) ಯನ್ನು ಆಯ್ಕೆ ಮಾಡಿಕೊಂಡರೆ ನಿನ್ನ ವೃತ್ತಿ ಭವಿಷ್ಯ ಕೊನೆಗೊಳ್ಳುತ್ತದೆ. ಒಂದು ವೇಳೆ ನೀನು ವೃತ್ತಿಯಲ್ಲಿ ‘ಭವಿಷ್ಯ’ವನ್ನು (ಕ್ಯಾರಿಯರ್) ಕಟ್ಟಿಕೊಳ್ಳಲು ಬಯಸಿದರೆ ಯಾವತ್ತೂ ಸಂಸ್ಥೆಯಲ್ಲಿ ಒಂದೆಡೆ ‘ನೆಲೆಯೂರುವ’ (ಸ್ಟ್ಯಾಂಡ್) ಯೋಚನೆಯನ್ನು ಮಾಡಬೇಡ ಎಂದು ಹೇಳಿದರು. ಇದನ್ನು ಕೇಳಿದ ನಮನ್ಗೆ ಹೊಸ ವಿಚಾರದ ಅರಿವಾಗಿ ತನ್ನ ಮಾಲೀಕ ಉಡುಗೊರೆಯಾಗಿ ನೀಡಿದ ಸೈಕಲನ್ನು ಸ್ಟ್ಯಾಂಡ್ ರಹಿತವಾಗಿ ಪಡೆದುಕೊಳ್ಳಲು ಒಪ್ಪಿದ.
ಬಹುತೇಕ ಉದ್ಯೋಗಿಗಳು ಇದು ನನ್ನೂರು, ನಾನಿಲ್ಲೇ ಇರಬೇಕು, ನನಗೆ ಹಲವಾರು ಸಮಸ್ಯೆಗಳಿವೆ ಎಂದು ತನ್ನ ಊರಿನಲ್ಲೇ ‘ನೆಲೆಯೂರಲು’ (ಸ್ಟ್ಯಾಂಡ್) ಬಯಸುತ್ತಾರೆ. ಇಂತವರು ತಮ್ಮ ವೃತ್ತಿಯಲ್ಲಿ ‘ಭವಿಷ್ಯ’ವನ್ನು (ಕ್ಯಾರಿಯರ್) ಕಾಣಲು ಮತ್ತು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಯಾರು ತನಗೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾ ವಿವಿಧ ಹುದೆಗಳನ್ನು ಅಲಂಕರಿಸುತ್ತಾರೋ ಅವರು ತಮ್ಮ ‘ಭವಿಷ್ಯ’ವನ್ನು (ಕ್ಯಾರಿಯರ್) ಕಟ್ಟಿಕೊಳ್ಳುತ್ತಾರೆ. ಪ್ರತಿಯೊಂದು ಸಂಸ್ಥೆಯಲ್ಲೂ ಸಿಬ್ಬಂದಿಗಳನ್ನು ಕಾಲ ಕಾಲಕ್ಕೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡುವುದು ಹಾಗೂ ಅರ್ಹತೆ ಇದ್ದಾಗ ಭಡ್ತಿ ನೀಡಿ ಅವಶ್ಯಕತೆ ಇರುವ ಬೇರೆಡೆ ಕಳುಹಿಸುವುದು ಸಾಮಾನ್ಯ ಎನ್ನುವುದನ್ನು ಅರಿತಾಗ ಸಿಬ್ಬಂದಿಯೊಬ್ಬನ ವೃತ್ತಿ ಭವಿಷ್ಯ ಉಜ್ವಲವಾಗಿ ಹೊಸ ಹುದ್ದೆಗಳನ್ನು ಅಲಂಕರಿಸುತ್ತಾನೆ.


