ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕ ರಾಜ್ಯಕ್ಕೆ ಮೈಸೂರ ಪ್ರಾಂತವೆಂಬ ಹೆಸರನ್ನು ತೆಗೆದು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದ ರೂವಾರಿ ಹಿಂದುಳಿದ ವರ್ಗಗಳ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರವರು ಎಂದು ಪ್ರಾಧ್ಯಾಪಕ ರವಿಕುಮಾರ ಅರಳಿ ಹೇಳಿದರು.
ತಾಲೂಕಾ ಆಡಳಿತ ತಾಪಂ ಮತ್ತು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದ ಗುರುಭವನದಲ್ಲಿ ನಡೆದ ದೇವರಾಜ ಅರಸರವರ ೧೧೧ ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹಾವನೂರ ಆಯೋಗ ಜಾರಿಗೆ ತಂದು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರಿಗೆ ಸವಲತ್ತು ನೀಡಿದವರು ಮತ್ತು ರಾಜ್ಯದಲ್ಲಿ ಬಡ ಪರಿಶಿಷ್ಠ ಜಾತಿ ಪಂಗಡ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ವಸತಿ ನಿಲಯ ತೆಗೆದು ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಿದ ಧೀಮಂತ ನಾಯಕರು ಎಂದರು.
ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ಉಳುವವನೇ ಭೂಮಿಯ ಒಡೆಯಕಾಯ್ದೆ ತಂದರು. ಎಲ್ಲ ವರ್ಗದವರು ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರು. ಭಾಗ್ಯಜ್ಯೋತಿ ಯೋಜನೆ ತಂದು ಬಡವರಿಗೆ ಉಚಿತ ವಿದ್ಯುತ ನೀಡಿದರು. ಸಮಾನತೆಯ ಹರಿಕಾರರು ಬಡವರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದವರು ಎಂದರು.
ತಹಸೀಲ್ದಾರ ನಾಂಗೇದ್ರ ಕೋಳಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್.ಗದ್ಯಾಳ,ಎಸ.ಎಸ್.ಜಟಗೊಂಡ, ಪಿ.ಬಿ.ತಳವಾರ ಮಾತನಾಡಿದರು.
ವೇದಿಕೆಯ ಮೇಲೆ ಡಿ.ವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ ತಾಪಂ ಇಒ ಮಹಾದೇವಪ್ಪ ಏವೂರ, ಬಿ.ಎಸ್.ಕವಲಗಿ, ಉಮೇಶ ಲಮಾಣಿ, ಮಂಜುನಾಥ ಧುಳೆ, ಎಸ್.ಜಿ.ಸಂಗಾಲಕ,ಅಲೆಮಾರಿ ಜನಾಂಗ ಒಕ್ಕೂಟದ ಅಧ್ಯಕ್ಷ ವೇಂಕಟೇಶ ಭೈರಾಮಡಗಿ, ಉಪಾಧ್ಯಕ್ಷ ದೀಪಕ ಮಾನೆ, ಆರ್.ವಿ.ಪಾಟೀಲ ಮತ್ತಿತರಿದ್ದರು.

