ವಿಜಯಪುರ: ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಅಥವಾ ಬಸವ ಜಿಲ್ಲೆ ಎಂದು ಸರ್ಕಾರ ನಾಮಕರಣ ಮಾಡಲು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿರುವದು ಸ್ವಾಗತಾರ್ಹ. ಇದಕ್ಕೆ ಬದಲಾಗಿ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಕೇಂದ್ರ ಸ್ಥಾನ ಮಾಡಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕೆಂದು ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಕೇಂದ್ರ ಸ್ಥಾನ ಮಾಡಿ ದೇವರಹಿಪ್ಪರಗಿ, ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ ತಾಲೂಕು ಒಳಗೊಂಡಂತೆ ನೂತನ ಬಸವೇಶ್ವರ ಜಿಲ್ಲೆ ಸರ್ಕಾರ ರಚನೆಗೆ ಮುಂದಾಗಬೇಕು. ನೂತನ ಬಸವೇಶ್ವರ ಜಿಲ್ಲೆ ರಚನೆಯಾದರೆ ವಿಶ್ವಗುರು ಬಸವೇಶ್ವರರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಬಸವನಬಾಗೇವಾಡಿಯು ಈ ಐದು ತಾಲೂಕುಗಳಿಗೆ ಮಧ್ಯ ಸ್ಥಾನದಲ್ಲಿ ಇರುವದರಿಂದ ಈ ತಾಲೂಕಿನ ಜನತೆಗೆ ಜಿಲ್ಲಾ ಕೇಂದ್ರಕ್ಕೆ ಬರಲು ಅನುಕೂಲ ಆಗುತ್ತದೆ.
ನೂತನ ಬಸವೇಶ್ವರ ಜಿಲ್ಲೆ ರಚನೆಯಾದರೆ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಸರ್ವಾಂಗೀಣ ಅಭಿವೃದ್ಧಿಯಾಗುವ ಜೊತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಗುರುತಿಸುವಂತಾಗಿ ಪ್ರವಾಸಿ ತಾಣ ಆಗುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ. ನೂತನ ಬಸವೇಶ್ವರ ಜಿಲ್ಲೆ ರಚನೆ ಸರ್ಕಾರ ರಚನೆ ಮಾಡಿದರೆ ಬಸವಾಭಿಮಾನಿಗಳು ತುಂಬಾ ಹರ್ಷ ಪಡುವದರಲ್ಲಿ ಸಂದೇಹವಿಲ್ಲ. ಕೂಡಲೇ ಸರ್ಕಾರ ನೂತನ ಬಸವೇಶ್ವರ ಜಿಲ್ಲೆ ರಚನೆಗೆ ಮುಂದಾಗಬೇಕೆಂದು ಡಾ. ಎಪಿಜೆ ಅಬ್ದುಲ್ ಕಲಾಂ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

