ಹೆಚ್ ಡಿ ಕೋಟೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಡಿಪಿಒ ದೀಪಾ ಬೇಸರ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯರು ಸಾಧನೆ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಕೆಲಸಮಾಡುತ್ತಿದ್ದಾರೆ. ಆದರೂ ಮಹಿಳೆಯರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಇವರ ಸಹಯೋಗದೊಂದಿಗೆ ಮಹಿಳೆಯರಿಗೆ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮತ್ತು ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಶೋಷಣೆಯ ವಿರುದ್ಧ ಹೋರಾಡಲು ಎಚ್ಚರಗೊಳ್ಳುವಂತೆ ಮಾಡುವುದಕ್ಕೆ ಇಲಾಖೆಯ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಮಾಡುತ್ತೇವೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಷ್ಟೇ ಸಮಾನವಾಗಿದ್ದರೆ. ಈ ದೇಶದ ಪ್ರಥಮ ಪ್ರಜೆ ಮಹಿಳೆ, ಭಾರತದ ಪ್ರಥಮ ಪ್ರಧಾನಿ ಮಹಿಳೆ. ಒಂದು ಕುಟುಂಬದ ಆರೋಗ್ಯ, ಶಿಕ್ಷಣ, ಮನೆಯ ಜವಾಬ್ದಾರಿ ಹಾಗೂ ಕುಟುಂಬಕ್ಕೆ ಸಹಾಯ ಮಾಡುವುದು ಒಂದು ರೀತಿಯ ಸಾಧನೆಯೇ ಸರಿ ಎಂದು ದೀಪಾ ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಾಮರಾಜು ಮಾತನಾಡಿ, ದೇವರನ್ನು ನಾವು ನೋಡಿಲ್ಲ ಆದರೆ ಮಹಿಳೆಯರೇ ದೇವರು ಮತ್ತು ಸೃಷ್ಟಿಕರ್ತರು. ನನ್ನನ್ನು ಎತ್ತು ಸಾಕಿ ಓದಿಸಿ ವೇದಿಕೆಯಲ್ಲಿ ನಿಂತು ಮಾತನಾಡುವಂತೆ ಮಾಡಿದ್ದು ನನ್ನ ತಾಯಿ. ಇವತ್ತು ಗ್ರಾಮಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಮಹಿಳೆಯರು ಇದ್ದಾರೆ. ಇದಕ್ಕೆ ಮೂಲ ಕಾರಣ ಮೀಸಲಾತಿ ಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಅವರು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ನಮ್ಮ ಸರ್ಕಾರ ಇರುವರೆಗೂ ಪಂಚ ಗ್ಯಾರೆಂಟಿ ಯೋಜನೆಗಳು ಮುಂದುವರೆಯುತ್ತವೆ ಎಂದು ಹೇಳಿದರು.
ತೋಟಗಾರಿಕೆ ನಿರ್ದೇಶಕಿ ನೇತ್ರಾವತಿ, ತಾಲೂಕು ಯೋಜನಾಧಿಕಾರಿ ಜಯಂತಿ, ಕಾಂಗ್ರೆಸ್ ಮಹಿಳಾ ಘಟಕದ ಸರಗೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಲುವರಾಜು, ಮಹಿಳಾ ಆಪ್ತ ಸಮಾಲೋಚಕಿ ಜಶೀಲಾ, ಪೋಷಣ್ ಅಭಿಯಾನ ಯೋಜನೆಯ ತಾಲೂಕು ಸಂಯೋಜಕ ರಾಕೇಶ್, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಹಾಯಕ ಅವಿನಾಶ್, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶೈಲಾ ಸುಧಾಮಣಿ, ಬ್ಲಾಕ್ ಸೊಸೈಟಿ ನಿರ್ದೇಶಕಿ (ಪ್ರತಿಭೆ ಸಂಸ್ಥೆ) ಕೆ.ಎಂ.ಸುಶೀಲಾ, ಸಚಿನ್ ಬಿ.ಬಿ ಸೇರಿದಂತೆ ನೂರಾರು ಮಹಿಳೆಯರು ಇದ್ದರು.
“ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಿಂದ ಇವತ್ತು ಮಹಿಳೆಯರು ತಮ್ಮ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಇದರ ಸದುಪಯೋಗ ಪಡೆಯುತ್ತಿರುವ ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಇವತ್ತು ನಾವು ವೇದಿಕೆ ಮೇಲೆ ನಿಂತುಕೊಂಡು ಮಾತನಾಡುವುದಕ್ಕೆ ಮುಖ್ಯ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ಅವರು. ಹೀಗಾಗಿ ಮನೆಯಲ್ಲಿ ದೇವರ ಫೋಟೋ ಜೊತೆಗೆ ಅಂಬೇಡ್ಕರ್ ಅವರ ಫೋಟೋ ಇಟ್ಟು ಪೂಜಿಸಬೇಕು.”
– ಸೌಮ್ಯ ಮಂಜುನಾಥ್
ತಾಲೂಕು ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ

