ಪುರಾಣ ಮಹಾಮಂಗಲ | ಧರ್ಮಸಭೆ | ಕೃತಿ ಬಿಡುಗಡೆ | ಪ್ರಶಸ್ತಿ ಪ್ರಧಾನ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗುರು ತೋರಿದ ದಾರಿಯಲ್ಲಿ ಅಚಲ ಶ್ರದ್ಧಾ ಭಕ್ತಿಯನ್ನಿಟ್ಟು ನಡೆದರೆ ಶಿಷ್ಯನಾದವನು ತಾನೇ ಗುರುವಾಗಲು ಸಾಧ್ಯ ಎಂಬುದನ್ನು ಕಲಕೇರಿ ಗುರುಮರುಳಾರಾಧ್ಯರಿಂದ ಲಿಂಗದೀಕ್ಷೆ ಪಡೆದ ಕಲಬುರಗಿ ಶರಣಬಸವೇಶ್ವರರು ಇಂದು ನಾಡಿನಾದ್ಯಂತ ದಾಸೋಹಮೂರ್ತಿಯಾಗಿ ಪೂಜಿಸಲ್ಪಡುತ್ತಿದ್ದು, ಅದು ಒಬ್ಬ ಶ್ರೇಷ್ಟ ಗುರುವಿನಲ್ಲಿರುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶಿರ್ವಚನದಲ್ಲಿ ಹೇಳಿದರು.
ಗ್ರಾಮದ ಗುರುಮರುಳಾರಾಧ್ಯರ ಸಂಸ್ಥಾನ ಹಿರೇಮಠದಲ್ಲಿ ಲಿಂ.ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ೨೩ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಫೆ.೧೮ ರಿಂದ ಪ್ರಾರಂಭವಾದ ಉಪ್ಪಲದಿನ್ನಿಯ ಮುಗ್ಧ ಸಂಗಮೇಶ್ವರರ ಮಹಾಪುರಾಣ ಮಹಾಮಂಗಲದ ಪ್ರಯುಕ್ತ ನಡೆದ ಧರ್ಮಸಭೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಆಶಿರ್ವಚನ ನೀಡಿದರು.
ಜಗತ್ತಿನಲ್ಲಿ ಅತಿ ವೇಗವಾಗಿ ಚಲಿಸುವ ವಸ್ತು ಎಂದರೆ ಮನಸ್ಸು, ಅಂತಹ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಗುರುವಿನ ಮಾರ್ಗದರ್ಶನದಲ್ಲಿ ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ದೇವರ ಪ್ರಾರ್ಥನೆಯಲ್ಲಿ, ಪುರಾಣ, ಪ್ರವಚನಗಳಲ್ಲಿ ತೊಡಗಿಸಿಕೊಂಡರೆ ಒಳ್ಳೆಯ ಸದೃಡ, ಸುಶಿಕ್ಷಿತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಕೀಲರಾದ ಸುಭಾಸ ಛಾಯಾಗೋಳ, ಶಿಕ್ಷಣ ಕ್ಷೇತ್ರದ ನಾನಾಗೌಡ ಬ. ನಡುವಿನಮನಿ, ಜಾನಪದ ತಜ್ಞರಾದ ಎಂ.ಎಂ.ಪಡಶೆಟ್ಟಿ, ವೈದ್ಯರಾದ ಡಾ|| ಎಂ.ಬಿ.ಬಿರಾದಾರ, ಸಮಾಜ ಸೇವಕರಾದ ದೇವು ಎಸ್.ಪರಸನಳ್ಳಿ, ಪತ್ರಕರ್ತ ಈರಣ್ಣ ಎಂ.ಝಳಕಿ, ಪರಿಸರ ಪ್ರೇಮಿಗಳಾದ ಶರಣಬಸಪ್ಪ ಶಿ.ಗಡೇದ, ಸಂಗೀತಗಾರರಾದ ವೀರೇಶ ವಾಲಿ ಅವರಿಗೆ ಕಲಕೇರಿನ ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದಿಂದ ಕೊಡಮಾಡುವ ೨೦೨೬ನೇ ಸಾಲಿನ “ಶ್ರೀ ಗುರುಮರುಳಾರಾಧ್ಯ ಸಿರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶೇಷವಾಗಿ ಶ್ರೀಮತಿ ಮಮತಾ ಮುಳಸಾವಳಗಿ ಅವರು ಬರೆದ ಮಮತೆಯ ಮರುಳಾರಾಧ್ಯರ ಶತವಚನಗಳು ಎಂಬ ಗ್ರಂಥ ಬಿಡುಗಡೆ ನಡೆಯಿತು ಮತ್ತು ಶಿವದೀಕ್ಷೆ, ಅಯ್ಯಾಚಾರ ಕಾರ್ಯಕ್ರಮಗಳು ಶ್ರೀಗಳ ಸಾನಿಧ್ಯದಲ್ಲಿ ನಡೆದವು.
ಅಧ್ಯಕ್ಷತೆವಹಿಸಿದ ಗುರುಮರುಳಾರಾಧ್ಯರ ಹಿರೇಮಠದ ಪಟ್ಟಾಧ್ಯಕ್ಷರಾದ ಸಿದ್ಧರಾಮ ಶಿವಾಚಾರ್ಯರು, ಶಿವಮೊಗ್ಗದ ಮೇಜರ್ ಆನಂದ ಮತ್ತು ವಿಜಯಪುರ ಚಾಣಕ್ಯ ಕರಿಯರ್ನ ನಿಂಗನಗೌಡ ಮ. ಬಿರಾದಾರ ಮಾತನಾಡಿದರು.
ಇದೇ ವೇಳೆ ಶ್ರೀಮಠದ ನೂರಾರು ಸೇವಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಜವಳಕೋಟ ಕಟ್ಟೀಮಠ ಸಂಸ್ಥಾನದ ಶಿವಾನಂದ ಶಿವಾಚಾರ್ಯರು ಸಾನಿಧ್ಯವಹಿಸಿದ್ದು, ಹಲಕರ್ಟಿ ಕಟ್ಟೀಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರು, ಕೊಕಟನೂರದ ಮಡಿವಾಳೇಶ್ವರ ಶ್ರೀಗಳು, ದೇವರಹಿಪ್ಪರಗಿ ಪರದೇಶಿಮಠದ ಶಿವಯೋಗಿ ಶ್ರೀಗಳು, ದಂಡಗುಂಡ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಚಬನೂರ ಹಿರೇಮಠದ ರಾಮಲಿಂಗಯ್ಯ ಶ್ರೀಗಳು, ಕರಬಂಟನಾಳದ ಶಿವಕುಮಾರ ಶ್ರೀಗಳು, ಕಾಖಂಡಕಿಯ ನಿಜಲಿಂಗ ಶಾಸ್ತ್ರಿಗಳು, ನಗನೂರ ಶರಣರಮಠದ ಶರಣಪ್ಪ ಶರಣರು ಪ್ರವಚನಕಾರರಾದ ಪುಟ್ಟರಾಜ ಶಾಸ್ತ್ರಿಗಳು, ಸಂಗೀತಗಾರಾರ ಪ್ರಭುಕುಮಾರ ಮತ್ತು ಲಕ್ಷ್ಮೀಕಾಂತ ಕಲಬುರಗಿ, ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಪ್ರಭುಗೌಡ ಬ. ಪಾಟೀಲ, ಯಾದಗಿರಿ ಜಿ.ಪಂ ಮಾಜಿ ಅಧ್ಯಕ್ಷರಾದ ಬಸನಗೌಡ ಯಡ್ಯಾಪುರ, ಬಿಜೆಪಿ ಮುಖಂಡರಾದ ಪ್ರಭುಗೌಢ ಅಸ್ಕಿ, ಸಿದ್ದು ಬುಳ್ಳಾ, ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ಕಾಂಗ್ರೆಸ್ ಮುಖಂಡರಾದ ಸಂಗನಗೌಡ ಹರನಾಳ, ಕಸಾಪ ಜಿಲ್ಲಾ ಅಧ್ಯಕ್ಷರಾದ ಹಾಸೀಂಪೀರ ವಾಲೀಕಾರ ಸೇರಿದಂತೆ ಇತರರು ಇದ್ದರು.

