ಬಿಎಲ್ಡಿಇ ಸಂಸ್ಥೆಯ ಸಂಸ್ಥಾಪಕರಿಗೆ ಗೌರವ ನಮನ | ಪ್ರೊ.ತೋಳನೂರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪಕರಾದ ಬಿ.ಎಂ. ಪಾಟೀಲ ಅವರ ಪುಣ್ಯಸ್ಮರಣೆಯನ್ನು ತಿಕೋಟಾದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಅತ್ಯಂತ ಗೌರವ ಮತ್ತು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಶ್ರೀ ಪಿ. ಎಸ್. ತೋಳನೂರ ಅವರು ಬಿ. ಎಂ. ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ನಂತರ ಅವರು ಮಾತನಾಡಿ,
ಶಿಕ್ಷಣ ಮತ್ತು ಸಮಾಜಕ್ಕೆ ಬಿ.ಎಂ.ಪಾಟೀಲರು ನೀಡಿದ ಮಹತ್ತರ ಕೊಡುಗೆಗಳನ್ನು ಸ್ಮರಿಸಿದರು.
ಪಾಟೀಲರು ದೂರದೃಷ್ಟಿಯ ಶಿಕ್ಷಣತಜ್ಞ, ದಾನಿ ಮತ್ತು ಸಂಸ್ಥೆಗಳ ನಿರ್ಮಾತೃವಾಗಿದ್ದರು ಎಂದು ಬಣ್ಣಿಸಿದರು.
ತಲೆಮಾರುಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಮತ್ತು ಅವರನ್ನು ಸಬಲೀಕರಣಗೊಳಿಸುವುದು ಅವರ ಜೀವನದ ಮುಖ್ಯ ಉದ್ದೇಶವಾಗಿತ್ತು ಎಂದರು. ಬಿಎಲ್ಡಿಇ ಸಂಸ್ಥೆಗಳ ಇಂದಿನ ಭವ್ಯ ಬೆಳವಣಿಗೆಗೆ ಪಾಟೀಲರ ದೂರದೃಷ್ಟಿ, ಸಮರ್ಪಣಾ ಭಾವ ಮತ್ತು ನಿಸ್ವಾರ್ಥ ಸೇವೆಗೆ ಹೆಮ್ಮರವಾಗಿ ಬೆಳೆದ ಈ ಸಂಸ್ಥೆ ಜೀವಂತ ಸಾಕ್ಷಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಇದಕ್ಕೂ ಮುನ್ನ, ಡಾ. ಪಾಟೀಲರ ಜೀವನ ಸಾಧನೆಗಳ ಬಗೆಗೆ ಪ್ರಾಧ್ಯಾಪಕ ಡಾ.ರವೀಚಂದ್ರ ವಾಲೀಕಾರ ಅವರು ಮಾತನಾಡಿ, ಸ್ಪೂರ್ತಿದಾಯಕ ಜೀವನ, ಶೈಕ್ಷಣಿಕ ಉತ್ಕೃಷ್ಟತೆಗೆ ಬಿ.ಎಂ.ಪಾಟೀಲರ
ಬದ್ಧತೆ, ಮಾದರಿ ನಾಯಕತ್ವ ಮತ್ತು ಮಾನವೀಯ ಮೌಲ್ಯಗಳು ಇತರರಿಗೂ ಮಾದರಿಯಾಗಿವೆ ಎಂದರು.
ಪ್ರಾಧ್ಯಾಪಕ ಡಾ.ಸಂತೋಷ ಬಿ. ನವಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್.ತೋಳನೂರ, ಕಚೇರಿ ಅಧೀಕ್ಷಕ ಎಸ್.ಪಿ.ಪಾಟೀಲ, ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಗೌರವ ನಮನ ಸಲ್ಲಿಸಿದರು.

