ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಭ್ರಮದ ಯುವ ಸೌರಭ | ಜಿಲ್ಲಾಧಿಕಾರಿ ಡಾ. ಆನಂದ.ಕೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಿನ ಪಾರಂಪರಿಕ ಕಲೆ, ಜಾನಪದ ಹಾಗೂ ರಂಗಭೂಮಿ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಮಹತ್ತರವಾದದ್ದು. ‘ಯುವ ಸೌರಭ’ದಂತಹ ವೇದಿಕೆಗಳು ಗ್ರಾಮೀಣ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಲಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆಯು ದೇಶದ ಸಂಸ್ಕೃತಿ, ಕಲೆ ಮತ್ತು ಜಾನಪದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ವ್ಯಾಸಂಗದ ಜೊತೆಗೆ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ವಿದ್ಯಾರ್ಥಿಗಳ ಮೇಲೆ ಸಮಾಜ ಹಾಗೂ ಕುಟುಂಬದ ನಿರೀಕ್ಷೆಗಳು ಹೆಚ್ಚಿರುವುದರಿಂದ ಯಶಸ್ವಿ ಜೀವನಕ್ಕೆ ಗಮನ ಕೇಂದ್ರೀಕರಿಸುವುದು ಮತ್ತು ಒತ್ತಡ ನಿರ್ವಹಣೆ ಕಲಿಯುವುದು ಅತ್ಯಗತ್ಯ ಎಂದರು.
ಮೊಬೈಲ್ ಫೋನ್ ಅನ್ನು ಹಿತಮಿತವಾಗಿ ಬಳಸಿ, ದೈನಂದಿನ ಓದಿನಲ್ಲಿ ಧ್ಯಾನ ಮತ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹಕೆಲಸದ ಸಾಮರ್ಥ್ಯ ಹೆಚ್ಚುತ್ತದೆ. ಇದು ಸೃಜನಶೀಲತೆ ಬೆಳೆಸುತ್ತದೆ.
ವಿದ್ಯಾರ್ಥಿಗಳಿಗೆ ಯಾವುದೇ ಮಾನಸಿಕ ಒತ್ತಡವಿದ್ದರೆ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ‘ಟೆಲಿಮನಸ್’ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಇಲ್ಲಿ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ಕಿವಿಮಾತು ಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಕಲಾವಿದರು ನೀಡಿದ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.
ಕು. ಮಾಳವಿಕಾ ಮಹಿಪತಿ ಜೋಷಿ ಅವರಿಂದ ಸುಗಮ ಸಂಗೀತ ಮತ್ತು ಭಾವಗೀತೆ ಗಾಯನ, ಬಸವರಾಜ ನಾಟೀಕಾರ ಅವರಿಂದ ಜಾನಪದ ಗೀತೆಗಳು ಹಾಗೂ ಕು. ದೀಕ್ಷಾ ಬೀಸೆ ಮತ್ತು ತಂಡದವರಿಂದ ಆಕರ್ಷಕ ಸಮೂಹ ನೃತ್ಯ ಪ್ರದರ್ಶನಗೊಂಡವು.
ಅಂತೆಯೇ, ಕು. ಅಂಜನಾ ಸಂಕಣ್ಣವರ ಅಭಿನಯದ “ಹೆಣ್ಣು ಅಬಲೆ ಅಲ್ಲ ಸಬಲೆ” ನಾಟಕ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಬಬಲೇಶ್ವರ ತಾಲೂಕಿನ ಸಾರವಾಡದ ಮುಬಾರಕ ನದಾಫ ಅವರಿಂದ ‘ಗೊಂಬೆ ಕುಣಿತ’ ಹಾಗೂ ಆಲಮೇಲ ತಾಲೂಕಿನ ಗುಂದಗಿಯ ಮಲ್ಲಪ್ಪ ಸೋಮನಿಂಗ ದೊಡ್ಡಮನಿ ಮತ್ತು ತಂಡದವರಿಂದ ಅದ್ದೂರಿ ‘ಡೊಳ್ಳು ಕುಣಿತ’ ಪ್ರದರ್ಶನಗೊಂಡವು. ಇದರೊಂದಿಗೆ ವೀರಗಾಸೆ, ಕಂಸಾಳೆ ಮತ್ತು ಯಕ್ಷಗಾನ ರೂಪಕಗಳು ಕಾರ್ಯಕ್ರಮದ ಆಕರ್ಷಣೆಯನ್ನು ದ್ವಿಗುಣಗೊಳಿಸಿದವು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಯುವ ಕಲಾವಿದರು ಹಾಗೂ ಕಲಾತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಭಿನಂದನಾ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಿದಾನಂದ ಎಸ್. ಆನೂರ, ಲಲಿತ ಕಲಾ ಅಕಾಡೆಮಿಯ ಸದಸ್ಯರಾದ ರಾಜೇಶ್ವರಿ ಮೋಪಗಾರ, ಮೋಹನ ಕಟ್ಟಿಮನಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

