ಹಂಚಿನಾಳ ತಾಂಡಾದಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಂಚಿನಾಳ ತಾಂಡಾದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಿ, ಇಲ್ಲಿ ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಗುಣಮಟ್ಟದ ಕೆಲಸ ಇಲ್ಲಿ ನಡೆಯಬೇಕು ಎಂದು ಬೃಹತ್ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಡಾ. ಎಂ.ಬಿ. ಪಾಟೀಲ ಅವರು ಸೂಚಿಸಿದರು.
ಮಹಾನಗರ ಪಾಲಿಕೆ ವಾರ್ಡ್ ನಂ. ೪ರ ವ್ಯಾಪ್ತಿಯ ಹಂಚಿನಾಳ ತಾಂಡಾದಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ೨ನೇ ಹಂತದಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಂಚಿನಾಳ ತಾಂಡದಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ಈ ಕಾಮಗಾರಿಗೆ ಇಂದು ಭೂಮಿ ಪೂಜೆ ನಡೆದಿದೆ. ಆದರೆ ಈ ಕಾಮಗಾರಿಗೆ ಅನುದಾನದ ಕೊರತೆಯಾದರು ಅನುದಾನ ಒದಗಿಸಲಾಗುವುದು. ಆದರೆ ತಾಂಡಾ ಜನತೆಯ ಆಸೆಯಂತೆ ಗುಣಮಟ್ಟದ ಕೆಲಸ ನಿರ್ವಹಿಸಬೇಕು.
ಅನೇಕ ವರ್ಷಗಳಿಂದ ಹಂಚಿನಾಳ ತಾಂಡಾ-೧ ಮತ್ತು ೨ರಸ್ತೆ ಅಭಿವೃದ್ಧಿಯಾಗಿ ಇಲ್ಲಿನ ನಿವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ತಾಂಡಾ ಜನತೆಯ ಸಹನೆ ಹಾಗೂ ತಾಳ್ಮೆ ಮೆಚ್ಚುವಂಥದ್ದಾಗಿದೆ. ಉತ್ತಮ ರಸ್ತೆ ಇಲ್ಲಿ ನಿರ್ಮಾಣವಾಗಲಿದೆ ಎಂದರು.
ಜೊತೆಗೆ ಹಂಚಿನಾಳ ಕೆರೆ ಅಭಿವೃದ್ಧಿಗೆ ೧೦ ಕೋಟಿ ರೂ. ಒದಗಿಸಲಾಗಿದೆ. ಈ ಮೊತ್ತದಲ್ಲಿ ೬೧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳಲ್ಲಿ ಮಳೆ ನೀರು ಚರಂಡಿ, ಒಳಚರಂಡಿ ಜಾಲ, ಯುಟಿಲಿಟಿ ಡಕ್ಟ್ ಸೇರಿದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿವೆ. ಒಟ್ಟಾರೆ ನಗರದ ಮೂಲಸೌಕರ್ಯವನ್ನು ಬಲಪಡಿಸುವುದು, ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಸಮಸ್ಯೆಯನ್ನು ತಗ್ಗಿಸುವುದು ಹಾಗೂ ನಾಗರಿಕರಿಗೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಭಾಗದಲ್ಲಿ ಅಂತರ್ಜಲ ಬಹಳಷ್ಟು ಕುಸಿದಿತ್ತು. ಕೆರೆಯಲ್ಲಿ ಕಲುಷಿತ ನೀರು ಹರಿಯುತ್ತಿತ್ತು. ಈಗ ಕೆರೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಈಗ ಕೆರೆಯಲ್ಲಿ ಕಲುಷಿತ ನೀರು ಬರುವುದಿಲ್ಲ. ಬದಲಿಗೆ ಅಂತರ್ಜಲ ಹೆಚ್ಚಳದಿಂದಾಗಿ ನಿಮ್ಮ ಬೋರ್ ವೆಲ್ ಹಾಗೂ ಬಾವಿಗಳಿಗೆ ಮರುಪೂರಣಗೊಳ್ಳಲಿವೆ.
ಈ ತಾಂಡದಲ್ಲಿ ಸಿಸಿ ರಸ್ತೆಗೆ ೪೦ಲಕ್ಷ ರೂ. ಒದಗಿಸಲಾಗಿದೆ, ಕೆರೆ ಅಭಿವೃದ್ಧಿಯಾಗುತ್ತಿದ್ದಂತೆಯೇ ವಾಯು-ವಿಹಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ಜೊತೆಗೆ ಟೊಯೊಟಾ ಕಂಪನಿಯ ಸಿಎಸ್ಸಾರ್ ಅನುದಾನದಡಿ ೨೫ ಲಕ್ಷ ರೂ. ಹೈಟೆಕ್ ಜಿಮ್ ಹಾಕಿಕೊಡುವುದಾಗಿ ಸಚಿವರು ಇದೇ ವೇಳೆ ಘೋಷಿಸಿದರು.
ಕಾರ್ಯಕ್ರಮದಲ್ಲಿ ಮೇಯರ್ ಎಂ.ಎಸ್. ಕರಡಿ, ಸದಸ್ಯರಾದ ಚವ್ಹಾಣ, ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಪಾಲಿಕೆಯ ಸೂಪರಿಂಡೆAಟ್ ಎಂಜಿನೀಯರ್ ತಿಮ್ಮಪ್ಪ, ದಿಲೀಪ ರಾಠೋಡ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

