ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆˌ (ಜಮಖಂಡಿ): ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ನಿಲ್ಲಿಸಿದ್ದ ಮಹೀಂದ್ರ ಎಕ್ಸ್ಯುವಿ (XUV300) ಕಾರು ಏಕಾಏಕಿ ಭಾರೀ ಸ್ಫೋಟಗೊಂಡು ಸಂಪೂರ್ಣ ಛಿದ್ರಛಿದ್ರವಾದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರಿನ ಭಾಗಗಳು ಸುತ್ತಮುತ್ತಲಿನ ಪ್ರದೇಶಕ್ಕೆ ಚದುರಿಬಿದ್ದಿದ್ದು, ಎಂಜಿನ್ ಸಹ ತುಂಡು-ತುಂಡಾಗಿರುವುದು ಕಂಡುಬಂದಿದೆ. ಅದೃಷ್ಟವಶಾತ್ ಕಾರಿನ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಫೋಟಗೊಂಡ ವಾಹನವು ಹಿಪ್ಪರಗಿ ಗ್ರಾಮದ ಜಯಶ್ರೀ ಹಣಮಂತ ಅಥಣಿ ಅವರ ಹೆಸರಿನಲ್ಲಿರುವ XUV300 ಕಾರು ಎಂದು ತಿಳಿದುಬಂದಿದೆ. ಸುಮಾರು ಮೂರು ವರ್ಷಗಳ ಹಿಂದೆ ವೈನ್ ಶಾಪ್ ನಡೆಸುತ್ತಿರುವ ಹನುಮಂತ ಅಥಣಿ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಈ ವಾಹನವನ್ನು ಖರೀದಿಸಿದ್ದರು.
ಘಟನೆ ಕುರಿತು ಮಾಹಿತಿ ನೀಡಿದ ಕಾರಿನ ಮಾಲೀಕ ಹನುಮಂತ ಅಥಣಿ, “ನಮ್ಮ ಊರು ರಬಕವಿ. ಶನಿವಾರ ಸುಮಾರು 4.30 ಗಂಟೆಗೆ ಹಿಪ್ಪರಗಿಯ ಬಾರ್ ಬಳಿ ಕಾರು ನಿಲ್ಲಿಸಿದ್ದೆ. ರಾತ್ರಿ ಸುಮಾರು 10.45ರ ವೇಳೆಗೆ ಬಾರ್ನ ಲೆಕ್ಕಪತ್ರ ಹಾಗೂ ಹಣದ ವ್ಯವಹಾರ ಮುಗಿಸಿಕೊಂಡು ಹೊರಬರುತ್ತಿದ್ದಾಗ ಏಕಾಏಕಿ ಭಾರೀ ಸ್ಫೋಟದ ಶಬ್ದ ಕೇಳಿಸಿತು. ಓಡಿ ಹೋಗಿ ನೋಡಿದಾಗ ಕಾರು ಸಂಪೂರ್ಣವಾಗಿ ಛಿದ್ರಛಿದ್ರವಾಗಿತ್ತು. ಸ್ಫೋಟದ ತೀವ್ರತೆಗೆ ಕಾರಿನ ಕೆಲವು ಭಾಗಗಳು ಬಹಳ ದೂರಕ್ಕೆ ಹಾರಿ ಬಿದ್ದಿದ್ದವು. ಎಂಜಿನ್ ಕೂಡ ಪೀಸ್-ಪೀಸ್ ಆಗಿದೆ. ಈ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪೊಲೀಸರು ಸಮಗ್ರ ತನಿಖೆ ನಡೆಸಿ ಪತ್ತೆಹಚ್ಚಬೇಕು” ಎಂದು ಆಗ್ರಹಿಸಿದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಬಾಗಲಕೋಟೆ ಹಾಗೂ ಬೆಳಗಾವಿಯಿಂದ ಬಾಂಬ್ ನಿಷ್ಕ್ರಿಯ ದಳ (Bomb Detection and Disposal Squad) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನಿಖೆಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಸದ್ಯ ಕಾರು ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ಸ್ಫೋಟಕ ವಸ್ತು ಅಥವಾ ಇತರೆ ಯಾವುದೇ ಕಾರಣಗಳಿವೆಯೇ ಎಂಬ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಬಾಂಬ್ ನಿಷ್ಕ್ರಿಯ ದಳದ ಪರಿಶೀಲನೆ ಬಳಿಕವೇ ಸ್ಫೋಟದ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.
ಈ ಘಟನೆ ಹಿಪ್ಪರಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

