ಲೇಖನ
– ಅವಿನಾಶ ಸೆರೆಮನಿ
ಬೈಲಹೊಂಗಲ
ಉದಯರಶ್ಮಿ ದಿನಪತ್ರಿಕೆ
ಇಂದಿನ ಯುಗದಲ್ಲಿ ಪ್ರತಿಯೊಬ್ಬರಲ್ಲೂ ಒಂದು ವಿಚಿತ್ರ ಮನಸ್ಥಿತಿ ಬೆಳೆದುಬಿಟ್ಟಿದೆ. ಒಂದು ಬರಹ ಪ್ರಕಟವಾದ ತಕ್ಷಣ ಲೇಖಕನ ಕಣ್ಣು ಓದುಗರ ಮನಸ್ಸಿನತ್ತ ಹೋಗುವುದಿಲ್ಲ ಬದಲಾಗಿ ಎಷ್ಟು ಲೈಕ್ ಬಂದವು? ಎಷ್ಟು ಕಾಮೆಂಟ್ ಬಂದವು? ಎಷ್ಟು ಜನ ಹಂಚಿಕೊಂಡರು? ಎಂಬ ಅಂಕಿ-ಅಂಶಗಳತ್ತ ಓಡುತ್ತದೆ. ನಿಧಾನವಾಗಿ ಪ್ರತಿಕ್ರಿಯೆಗಳೇ ಬರಹದ ಗುಣಮಟ್ಟದ ಮಾನದಂಡ ಎಂಬ ತಪ್ಪು ಕಲ್ಪನೆ ಬೇರೂರುತ್ತಿದೆ.
ಆದರೆ ನಿಜಕ್ಕೂ ಪ್ರತಿಕ್ರಿಯೆಗಳೇ ಬರಹದ ಮೌಲ್ಯವನ್ನು ಅಳೆಯಬಹುದೇ?
ಒಂದು ಉತ್ತಮ ಬೀಜ ನೆಲದೊಳಗೆ ಬಿದ್ದ ತಕ್ಷಣ ಮರವಾಗುವುದಿಲ್ಲ. ಅದು ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಒಂದು ಉತ್ತಮ ಬರಹವೂ ಪ್ರಕಟವಾದ ಕ್ಷಣದಲ್ಲೇ ಎಲ್ಲರ ಮೆಚ್ಚುಗೆ ಗಳಿಸಬೇಕೆಂಬ ನಿಯಮವಿಲ್ಲ. ಕೆಲವು ಬರಹಗಳು ಓದುಗರ ಮನಸ್ಸಿನಲ್ಲಿ ವರ್ಷಗಳ ಕಾಲ ಮಲಗಿದ್ದು, ಸೂಕ್ತ ಸಂದರ್ಭ ಬಂದಾಗ ಎಚ್ಚರಗೊಂಡು ಜನ ಮಾನಸದಲ್ಲಿ ಹೊಸ ನೆಲೆಯನ್ನು ಸ್ಥಾಪಿಸುತ್ತವೆ.
ಇತಿಹಾಸವನ್ನು ನೋಡಿದರೆ ಅನೇಕ ಶ್ರೇಷ್ಠ ಕೃತಿಗಳು ತಮ್ಮ ಕಾಲದಲ್ಲಿ ನಿರೀಕ್ಷಿತ ಮೆಚ್ಚುಗೆ ಪಡೆಯಲಿಲ್ಲ. ಆದರೆ ಕಾಲವೇ ಅವುಗಳ ಶ್ರೇಷ್ಠತೆಯನ್ನು ಸಾಬೀತುಪಡಿಸಿತು. ಆದ್ದರಿಂದ ಕ್ಷಣಿಕ ಪ್ರತಿಕ್ರಿಯೆಗಿಂತ ಕಾಲದ ಪರೀಕ್ಷೆಯೇ ಬರಹದ ನಿಜವಾದ ಮಾನದಂಡ.
ಪ್ರತಿಯೊಬ್ಬ ಓದುಗರೂ ತಮ್ಮದೇ ಆದ ದೃಷ್ಟಿಕೋನ, ಅನುಭವ ಮತ್ತು ಮನಸ್ಥಿತಿಯನ್ನು ಹೊಂದಿರುತ್ತಾರೆ. ಎಲ್ಲರಿಗೂ ಒಂದೇ ರೀತಿಯ ಬರಹ ಇಷ್ಟವಾಗಬೇಕೆಂಬ ನಿಯಮವಿಲ್ಲ. ಕೆಲವರು ಮೌನವಾಗಿ ಓದಿ ಮನಸ್ಸಿನಲ್ಲೇ ಲೇಖಕನಿಗೆ ಅಭಿನಂದನೆ ಸಲ್ಲಿಸುತ್ತಾರೆ. ಅವರು ಕಾಮೆಂಟ್ ಮಾಡದೇ ಇರಬಹುದು, ಲೈಕ್ ಒತ್ತದೇ ಇರಬಹುದು. ಅದರಿಂದ ಬರಹದ ಮೌಲ್ಯ ಕಡಿಮೆಯಾಗುವುದಿಲ್ಲ.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕೆಲವೊಮ್ಮೆ ಹಾಸ್ಯ, ವ್ಯಂಗ್ಯ ಸಂಚಲನ ಮೂಡಿಸುವ ಬರಹಗಳಿಗೆ ಸಾವಿರಾರು ಪ್ರತಿಕ್ರಿಯೆಗಳು ಬರುತ್ತವೆ. ಆದರೆ ಜೀವನ ಮೌಲ್ಯಗಳನ್ನು ಬೋಧಿಸುವ, ಚಿಂತನೆಗೆ ಹಚ್ಚುವ ಬರಹಗಳು ಮೌನವಾಗಿ ಕೆಲವೇ ಜನರ ಹೃದಯವನ್ನು ತಲುಪುತ್ತವೆ.
ಒಬ್ಬ ನಿಜವಾದ ಲೇಖಕ ತನ್ನ ಬರಹವನ್ನು ಮೆಚ್ಚುಗೆಯ ಭಿಕ್ಷೆಗಾಗಿ ಬರೆಯುವುದಿಲ್ಲ. ತನ್ನ ಮನಸ್ಸಿನ ಸತ್ಯವನ್ನು ಸಮಾಜದ ಮುಂದೆ ಇಡುವ ಜವಾಬ್ದಾರಿಯಿಂದ ಬರೆಯುತ್ತಾನೆ. ಪ್ರತಿಕ್ರಿಯೆ ಸಿಕ್ಕರೆ ಸಂತೋಷಪಡುತ್ತಾನೆ ಸಿಗದಿದ್ದರೂ ತನ್ನ ಲೇಖನಿಯನ್ನು ನಿಲ್ಲಿಸುವುದಿಲ್ಲ. ಏಕೆಂದರೆ ಅವನ ಗುರಿ ಲೈಕ್ಗಳನ್ನು ಗಿಟ್ಟಿಸುವುದಲ್ಲ ಚಿಂತನೆಗೆ ಒಳಪಡಿಸುವುದು.

ಬರಹವೆಂದರೆ ಜನರನ್ನು ಸಂತೋಷಪಡಿಸುವ ಸಾಧನ ಮಾತ್ರವಲ್ಲ ಅದು ಸಮಾಜವನ್ನು ಎಚ್ಚರಿಸುವ ಕೈಗನ್ನಡಿಯೂ ಹೌದು ಕನ್ನಡಿ ನಮ್ಮ ಮುಖವನ್ನು ಹೇಗಿದೆಯೋ ಹಾಗೆಯೇ ತೋರಿಸುತ್ತದೆ. ಅದನ್ನು ನೋಡಿ ಕೆಲವರು ನಗಬಹುದು ಕೆಲವರು ಬೇಸರಪಡಬಹುದು. ಆದರೆ ಕನ್ನಡಿ ತನ್ನ ಕೆಲಸವನ್ನು ಮರೆಯದೆ ಸದಾ ಸತ್ಯವನ್ನು ತೋರಿಸುವುದು. ಬರಹದ ಕರ್ತವ್ಯವೂ ಅದೇ.
ಹೀಗಾಗಿ ಪ್ರತಿಕ್ರಿಯೆಗಳ ಸಂಖ್ಯೆ ಹೆಚ್ಚಿದೆ ಎಂದ ಮಾತ್ರಕ್ಕೆ ಬರಹ ಶ್ರೇಷ್ಠವಾಗುವುದಿಲ್ಲ. ಪ್ರತಿಕ್ರಿಯೆಗಳು ಕಡಿಮೆ ಬಂದವು ಎಂದ ಮಾತ್ರಕ್ಕೆ ಬರಹ ಕಳಪೆಯಾಗುವುದಿಲ್ಲ. ನಿಜವಾದ ಬರಹ ಓದುಗರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತದೆ, ಬದುಕಿನ ಬಗ್ಗೆ ಹೊಸ ಚಿಂತನೆ ಮೂಡಿಸುತ್ತದೆ, ಮನುಷ್ಯನನ್ನು ಸ್ವಲ್ಪವಾದರೂ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಅದೇ ಬರಹದ ಯಶಸ್ಸು.
ಬರಹದ ಗುಣಮಟ್ಟವನ್ನು ಲೈಕ್ಗಳ ಸಂಖ್ಯೆ ಅಳೆಯುವುದಿಲ್ಲ ಬರಹ ಮನಸ್ಸುಗಳನ್ನು ಎಷ್ಟು ಆಳವಾಗಿ ಮುಟ್ಟಿತು ಎಂಬುದನು ಅಳೆಯುತ್ತದೆ. ಪ್ರತಿಕ್ರಿಯೆಗಳು ಕ್ಷಣಿಕ, ಆದರೆ ಪರಿಣಾಮ ಶಾಶ್ವತ. ಆದ್ದರಿಂದ ಲೇಖಕನಿಗೆ ನಿಜವಾದ ಮಾನದಂಡ ಪ್ರತಿಕ್ರಿಯೆಯೆ ಅಲ್ಲ ಬರಹದೊಳಗಿನ ಅರಿಯುವ ಸತ್ವ ಮತ್ತು ಪ್ರಾಮಾಣಿಕತೆ.
ಪ್ರಸ್ತುತ ಕ್ಷಣಿಕ ಆಕರ್ಷಣೆಗಳ ಯುಗದಲ್ಲಿ ಓದುಗರ ಮೆಚ್ಚುಗೆ ಅಥವಾ ಟೀಕೆಗಳೆಂಬ ಪ್ರತಿಕ್ರಿಯೆಗಳು ಬರಹದ ಅಂತಿಮ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಲೇಖಕನ ಪ್ರಾಮಾಣಿಕತೆ, ವಸ್ತುನಿಷ್ಠತೆ, ಬದ್ಧತೆ ಮತ್ತು ಸಮಾಜದ ಒಳಿತಿಗಾಗಿ ಬರೆಯುವ ಧ್ಯೇಯವೇ ಬರಹದ ನಿಜವಾದ ಮಾನದಂಡ. ತಾತ್ಕಾಲಿಕವಾಗಿ ಸಿಗುವ ಲೈಕ್ಗಳು ಅಥವಾ ವಿರೋಧಗಳು ಲೇಖನದ ಗುಣಮಟ್ಟವನ್ನು ಅಳೆಯುವುದಿಲ್ಲ. ಬದಲಿಗೆ, ಸತ್ಯದ ಶೋಧನೆ ಮತ್ತು ಓದುಗರ ಆಲೋಚನಾ ಲಹರಿ ಅಳೆಯುತ್ತದೆ ಸಕಾರಾತ್ಮಕವಾಗಿ ಬದಲಾಯಿಸುವ ಸಾಮರ್ಥ್ಯವೇ ಬರಹದ ಶಕ್ತಿ.


