ಗ್ರಾಮೀಣ ಭಾಗದಲ್ಲಿ ಅರಳಿದ ಪ್ರತಿಭೆ, ಜಿಲ್ಲೆಗೆ 2ನೇ ಸ್ಥಾನ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಾಧನೆ ಯಾರ ಸ್ವತ್ತಲ್ಲ, ನಿಶ್ಚಿತ ಗುರಿಯೊಂದಿಗೆ ಸೂಕ್ತ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಗ್ರಾಮೀಣ ಭಾಗದ ಅಪ್ಪಟ ಹಳ್ಳಿಯ ಪ್ರತಿಭೆ ಮಹಮ್ಮದ್ ಯಾಸೀನ್ ಹೊನ್ನಳ್ಳಿ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿ ನಿಲ್ಲುತ್ತಾನೆ.
ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಪ್ರೌಢಶಾಲಾ ನಿವೃತ್ತ ಶಿಕ್ಷಕರಾದ ಮಶ್ಯಾಕಸಾಬ್ ಹೊನ್ನಳ್ಳಿ ಹಾಗೂ ತಾಯಿ ಇಮಾಂಬಿ ಹೊನ್ನಳ್ಳಿ ಅವರ ಸುಪುತ್ರನಾದ ಮಹಮ್ಮದ್ ಯಾಸೀನ್ ಹೊನ್ನಳ್ಳಿ ನೀಟ್ (ಯುಜಿ) 2026 ಪರೀಕ್ಷೆಯಲ್ಲಿ 720ಕ್ಕೆ 632 ಅಂಕಗಳನ್ನು ಗಳಿಸಿ ಅಖಿಲಭಾರತ ಮಟ್ಟದಲ್ಲಿ 3226ನೇ ರ್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಭಾಗದ ಎ.ಕೆ.ಸಿರಸಗಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಯು ಕಾಲೇಜಿನ ಅವಧಿಯ ನಂತರ ಮನೆಯಲ್ಲಿಯೇ ಆನ್ಲೈನ್ ತರಬೇತಿಯನ್ನೂ ಪಡೆದುಕೊಳ್ಳುವ ಮೂಲಕ ಸತತ ಪರಿಶ್ರಮದ ಅಧ್ಯಯನ ಮಾಡುವ ಮೂಲಕ ಪ್ರಥಮ ಹಂತದಲ್ಲಿಯೇ ನೀಟ್ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಗೆ 2ನೇ ರ್ಯಾಂಕ್ ಮತ್ತು ಜೆಇಇ ಮುಖ್ಯ ಪರೀಕ್ಷೆಯಲ್ಲಿಯೂ ಸಹ ಶೇ. 98.09 ಅಂಕ ಪಡೆದು ಸಾಧನೆ ಮಾಡಿರುವುದು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಯ ತಂದೆ-ತಾಯಿ ಅವರ ಕೀರ್ತಿಯನ್ನು ಹೆಚ್ಚಿಸಿದ್ದು, ಅವರು ಅತೀವ ಸಂತಸ ಮತ್ತು ಸಾರ್ಥಕ ಭಾವವನ್ನು ಮೆರೆದಿದ್ದಾರೆ.
ವಿದ್ಯಾರ್ಥಿಯ ತಂದೆ ಮಶ್ಯಾಕಸಾಬ್ ಹೊನ್ನಳ್ಳಿ ಅವರ ನುಡಿಗಳು: ನಮ್ಮ ಮಗ ಊಟ, ನಿದ್ರೆಯನ್ನು ಬಿಟ್ಟು ಸತತ ಅಧ್ಯಯನ ಮಾಡಿದ್ದರ ಪ್ರತಿಫಲ ಇದಾಗಿದ್ದು, ಪ್ರಾಥಮಿಕ, ಪ್ರೌಢಶಾಲಾ ಹಂತದಿಂದಲೇ ವೈದ್ಯನಾಗಬೇಕೆಂಬ ಕನಸನ್ನು ಹೊತ್ತುಕೊಂಡ ನನ್ನ ಮಗ ಇಂದು ತನ್ನ ಆಸೆಯನ್ನಷ್ಟೇ ಅಲ್ಲ ನಮ್ಮ ಸಮಸ್ತ ಪರಿವಾರದವರ ಆಸೆಯನ್ನೂ ಈಡೇರಿಸಿದ್ದು, ನಮಗೆಲ್ಲ ಖುಷಿ ತಂದಿದ್ದು, ಇದೇ ವೇಳೆ ಅವನ ಅಧ್ಯಯನದಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ನೀಡಿ ಪ್ರೋತ್ಸಾಹಿಸಿದ ಕಾಲೇಜಿನ ಆಡಳಿತ ಮಂಡಳಿ ಮತ್ತು ಎಲ್ಲ ಉಪನ್ಯಾಸ ಬಳಗಕ್ಕೂ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ದೆಹಲಿಯ ನೋಯ್ಡಾದಲ್ಲಿ ಸನ್ಮಾನ: ಪಿಯುಸಿ ಅಧ್ಯಯನ ಮಾಡುತ್ತಿರುವಾಗಲೇ ಆನ್ಲೈನ್ ಪಿಡಬ್ಲೂ (ಪಿಜಿಕ್ಸ್ ವಾಲಾ) ಕೋಚಿಂಗ್ ಪಡೆದು ಯಶಸ್ವಿಯಾದ ವಿದ್ಯಾರ್ಥಿಯ ಸಾಧನೆಯನ್ನು ಗುರುತಿಸಿ ಪಿಡಬ್ಲೂ ಸಂಸ್ಥೆಯವರು ದೆಹಲಿಯ ನೊಯಡಾದಲ್ಲಿ ವಿದ್ಯಾರ್ಥಿ ಮತ್ತು ಪಾಲಕರನ್ನು ಏರೋಪ್ಲೇನ್ನಲ್ಲಿ ಬಂದು ಹೋಗುವ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಿ ಅಲ್ಲಿಗೆ ಕರೆಸಿ ಸನ್ಮಾನಿಸಿ ಗೌರವ ಸಲ್ಲಿಸಿದ್ದು, ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಮತ್ತಷ್ಷು ಖುಷಿ ಹೆಚ್ಚಿಸಿದೆ.

