ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ | ಈ ವರ್ಷ ಮೊದಲ ಬಾರಿ ೧೪ ಗೇಟ್ ತೆರೆದು ನೀರು ಹರಿಬಿಡುವಿಕೆ | ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಒಳಹರಿವು ಹೆಚ್ಚಳದ ಹಿನ್ನೆಲೆಯಲ್ಲಿ ಈ ವರ್ಷದಲ್ಲಿ ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ೧೪ ಗೇಟ್ಗಳನ್ನು ಶುಕ್ರವಾರದಿಂದ ತೆರೆದು ಕೃಷ್ಣಾ ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದೆ.
ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ೪೨,೫೦೦ ಕ್ಯೂಸೆಕ್ ಮತ್ತು ಗೇಟ್ಗಳ ಮೂಲಕ ೨೫,೦೦೦ ಕ್ಯೂಸೆಕ್ ಸೇರಿ ಒಟ್ಟು ೬೭,೫೦೦ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಗುರುವಾರ ೪೨,೫೦೦ ಕ್ಯೂಸೆಕ್ ಇದ್ದ ಹೊರಹರಿವನ್ನು ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಹೆಚ್ಚಿಸಲಾಯಿತು.
ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ೫೧೮.೬೦ ಮೀಟರ್ ಎತ್ತರದಲ್ಲಿ ಒಟ್ಟು ೧೦೬.೩೨ ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು ೭೩,೧೬೨ ಕ್ಯೂಸೆಕ್ ಇತ್ತು.
ಮಹಾರಾಷ್ಟ್ರದಲ್ಲಿ ಮಳೆ
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕೊಯ್ನಾ ೭೭ ಮಿ.ಮೀ, ನವಜಾ ೬೬ ಮಿ.ಮೀ, ಮಹಾಬಳೇಶ್ವರ ೭೮ ಮಿ.ಮೀ, ರಾಧಾನಗರಿ ೨೪ ಮಿ.ಮೀ, ಧೂದಗಂಗಾ ೪೮ ಮಿ.ಮೀ ಮಳೆಯಾಗಿದೆ. ಗುರುವಾರಕ್ಕಿಂತ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲ್ಲೋಳ ಬ್ಯಾರೇಜ್ನಿಂದ ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿಸುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಅಧಿಕವಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯನ್ನು ಪರಿಗಣಿಸಿದರೆ, ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಇನ್ನಷ್ಪು ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ನೀರಿನ ಹೊರಹರಿವಿನ ಪ್ರಮಾಣವನ್ನು ಅಗತ್ಯವಿದ್ದರೆ ಮತ್ತಷ್ಟು ಪರಿಷ್ಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ
ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಎಲ್ಲಾ ೬ ಘಟಕಗಳ ಮೂಲಕ ೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.
ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಸೂಚನೆ
ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವುದರಿಂದ ಆಲಮಟ್ಟಿಯಿಂದ ಕೆಳಭಾಗದ ಕೃಷ್ಣಾ ನದಿಪಾತ್ರದ ಗ್ರಾಮಗಳ ನಿವಾಸಿಗಳು, ರೈತರು, ಮೀನುಗಾರರು ಮತ್ತು ಸಾರ್ವಜನಿಕರು ನದಿಯ ದಡಕ್ಕೆ ಅನಗತ್ಯವಾಗಿ ತೆರಳದಂತೆ, ಜಾನುವಾರುಗಳನ್ನು ನದಿಗೆ ಇಳಿಸದಂತೆ ಹಾಗೂ ಮಕ್ಕಳನ್ನು ನದಿಯ ಸಮೀಪ ಬಿಡದಂತೆ ಜಲಾಶಯ ಆಡಳಿತ ಮನವಿ ಮಾಡಿದೆ.
ಸಂಬಂಧಿಸಿದ ತಾಲ್ಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡುವಂತೆ ಸೂಚಿಸಲಾಗಿದೆ. ನದಿ ತೀರಕ್ಕೆ ಜನ-ಜಾನುವಾರು ಸುಳಿಯದಂತೆ ಡಂಗೂರ ಸಾರುವುದು ಮತ್ತು ಧ್ವನಿವರ್ಧಕ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ.
“ಜಲಾಶಯದಿಂದ ೪ ಲಕ್ಷ ಕ್ಯೂಸೆಕ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಮಾತ್ರ ತಾಲ್ಲೂಕಿನ ಮಸೂತಿ ಗ್ರಾಮದ ಜನವಸತಿ ಪ್ರದೇಶಕ್ಕೆ ಸ್ವಲ್ಪ ನೀರು ಬರುತ್ತದೆ. ಉಳಿದಂತೆ ತಾಲ್ಲೂಕಿನ ಯಾವುದೇ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಈಜುಗಾರರು, ಉರಗ ತಜ್ಞರು, ಸುಸಜ್ಜಿತ ಬೋಟ್ಗಳನ್ನು ಗುರುತು ಮಾಡಿಟ್ಟುಕೊಳ್ಳಲಾಗಿದೆ.”
– ಎ.ಡಿ. ಅಮರಾವದಗಿ
ತಹಶೀಲ್ದಾರ್
ಆಲಮಟ್ಟಿ ಜಲಾಶಯದ ನೀರಿನ ಮಾಹಿತಿ
- ಗರಿಷ್ಠ ಸಾಮರ್ಥ್ಯ: ೧೨೩.೦೮೧ ಟಿಎಂಸಿ
- ಇಂದಿನ ಸಂಗ್ರಹ: ೧೦೬.೩೨೩ ಟಿಎಂಸಿ
- ಗರಿಷ್ಠ ಎತ್ತರ: ೫೧೯.೬೦ ಮೀ.
- ಇಂದಿನ ಮಟ್ಟ: ೫೧೮.೬೦ ಮೀ.
- ಒಳಹರಿವು: ೭೩,೧೬೨ ಕ್ಯೂಸೆಕ್
- ಹೊರಹರಿವು: ೬೭,೫೦೦ ಕ್ಯೂಸೆಕ್

