ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ನೂರಾರು ಜನರು ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಾಗಿ ತಾಲೂಕು ಕೇಂದ್ರಕ್ಕೆ ಆಗಮಿಸುತ್ತಿದ್ದರೂ ಸಮರ್ಪಕ ಸೇವೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ತಾಲೂಕು ಕೇಂದ್ರದಲ್ಲಿ ಒಂದೇ ಒಂದು ಆಧಾರ್ ಸೇವಾ ಕೇಂದ್ರ ಇದ್ದು ಅದು ಕೂಡಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಲವು ದಿನಗಳಿಂದ ಆಧಾರ ಕೇಂದ್ರ ಮುಚ್ಚಿರುವುದು ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.
ಆಧಾರ್ ಸೇವೆ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿ, ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ಹಿರಿಯ ನಾಗರಿಕರ ಪಿಂಚಣಿ ಪ್ರಕ್ರಿಯೆಗಳಿಗೂ ಅಡಚಣೆ ಉಂಟಾಗಿದೆ. ಆಧಾರ್ ಕಾರ್ಡ್ ಸಲುವಾಗಿ ಜನರು ಬೀಳಗಿ, ವಿಜಯಪುರ ಹಾಗೂ ಬಸವನ ಬಾಗೇವಾಡಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಕೊಲ್ಹಾರ ಪಟ್ಟಣದಲ್ಲಿ ಶಾಶ್ವತ ಹಾಗೂ ಪೂರ್ಣಾವಧಿ ಆಧಾರ್ ಸೇವಾ ಕೇಂದ್ರ ಆರಂಭಿಸಿ ಸಾರ್ವಜನಿಕರಿಗೆ ನಿರಂತರ ಸೇವೆ ಒದಗಿಸಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ರಮೇಶ ಬಾಲಗೊಂಡ , ಕರವೇ ತಾಲೂಕು ಅಧ್ಯಕ್ಷ ರವಿ ಗೊಳಸಂಗಿ, ಮಲ್ಲಿಕಾರ್ಜುನ ಗಣಿ, ಸಂಗಪ್ಪ ಕೋಟಿ, ಈರಣ್ಣ, ಸಂತೋಷ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ.
“ನೆಟ್ವರ್ಕ್ ಸಮಸ್ಯೆಯಿಂದಾಗಿ ಎಂಟು ದಿನಗಳಿಂದ ಬಂದ್ ಇತ್ತು. ಆದರೆ ಆಪರೇಟರ್ ಒಂದು ತಿಂಗಳಿನಿಂದ ಗೈರಾಗಿದ್ದರೆ, ಅವರನ್ನು ಕರೆಸಿ ವಿಚಾರಿಸಲಾಗುವುದು”
– ಸಂತೋಷ್ ಮ್ಯಾಗೇರಿ
ತಹಶೀಲ್ದಾರ ಕೊಲ್ಹಾರ
ಕೊಟ್ 02. ಸಂಗಪ್ಪ ಕೋಟಿ
ತಾಲೂಕು ಕೇಂದ್ರದಲ್ಲಿ ತಿಂಗಳುಗಳಿಂದ ಆಧಾರ್ ಸೇವಾ ಕೇಂದ್ರ ಬಂದ್ ಆಗಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿದ್ದುಪಡಿಗಾಗಿ ಅಲೆದಾಡುವಂತಾಗಿದೆ. ಕೂಡಲೇ ಪ್ರಾರಂಭಿಸಿ – ಸ್ಥಳಿಯ ನಿವಾಸಿ

