ಸಿಂದಗಿ: ಗ್ರಾಮ ಪಂಚಾಯತ್ ವತಿಯಿಂದ ಒಂದು ವರ್ಷದಲ್ಲಿ ಎರಡು ಬಾರಿ ಗ್ರಾಮ ಸಭೆಗಳು ನಡೆಸಬೇಕು. ವಾರ್ಡ್ ಸಭೆಗಳನ್ನು ವರ್ಷದಲ್ಲಿ ನಾಲ್ಕು ಬಾರಿ ಕಡ್ಡಾಯವಾಗಿ ಮಾಡಲೇಬೇಕು ಎಂದು ತಾಪಂ ಮೇಲ್ವೀಚಾರಕಿ ಲಕ್ಷ್ಮೀ ಪಾಟೀಲ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆಯ ಸಭಾಭವನದಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಕಟ್ಟಡ ಕಾರ್ಮಿಕರಿಗೆ ಪಂಚಾಯತ್ ರಾಜ್ ಕುರಿತು ತರಬೇತಿ ಹಾಗೂ ವಾಹನ ಚಾಲನಾ ಪರವಾನಿಗೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನ ಸಾಮಾನ್ಯರು ಸೌಲಭ್ಯವನ್ನು ಪಡೆಯಬೇಕಾದರೆ ಅಥವಾ ಯಾವುದಾದರೂ ನಿಮ್ಮ ಕುಂದು ಕೊರತೆಗಳಿದ್ದರೆ ಗ್ರಾಮ ಸಭೆಯಲ್ಲಿ ಮಂಡಿಸಬೇಕು. ಇಲ್ಲಿ ಮಂಡಿಸಿರುವ ಮಸೂದೆಯನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವಂತಿಲ್ಲ ಎಂದು ಮಾಹಿತಿ ತಿಳಿಸಿದರು.
ಈ ವೇಳೆ ರಾಮು ವಾಹನ ತರಬೇತಿ ಸಂಸ್ಥೆಯ ಮುಖ್ಯಸ್ಥ ರಾಮು ಆಸಂಗಿ ಮಾತನಾಡಿ, ಯಾವುದೇ ವಾಹನವನ್ನು ಚಲಾಯಿಸಬೇಕಾದೆರೆ ಚಲಾಯಿಸುವ ವ್ಯಕ್ತಿಗೆ ೧೮ ವರ್ಷ ಕಡ್ಡಾಯವಾಗಿ ತುಂಬಿರಬೇಕು. ೧೮ವರ್ಷದ ಒಳಗಿನ ಮಕ್ಕಳಿಗೆ ದಯವಿಟ್ಟು ವಾಹನವನ್ನು ಬಳಸಲು ಕೊಡಬೇಡಿ. ಮತ್ತು ೧೮ವರ್ಷ ಪೂರೈಸಿದವರು ವಾಹನವನ್ನು ಚಲಾಯಿಸಬೇಕಾದರೆ ಕಡ್ಡಾಯವಾಗಿ ಚಾಲನಾ ಪರವಾನಿಗೆ ಪಡೆದಿರಬೇಕು. ವಾಹನದ ಜೊತೆಗೆ ಇನ್ಸೂರೆನ್ಸ್ ಕಡ್ಡಾಯವಾಗಿ ಇಟ್ಟುಕೊಳ್ಳತಕ್ಕದು. ರಸ್ತೆ ದಾಟುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ತೇಜಸ್ವಿನಿ ಹಳ್ಳದಕೇರಿ, ವಿಜಯ ಬಂಟನೂರ, ಬಸವರಾಜ ಬಿಸನಾಳ, ಮಲಕ್ಕಪ್ಪ ಹಲಗಿ ಸೇರಿದಂತೆ ಕಟ್ಟಡ ಕಾರ್ಮಿಕರು, ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
Related Posts
Add A Comment