ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ.
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪ್ರವಾಸ.. ಅದರಲ್ಲೂ ಧಾರ್ಮಿಕ ಪ್ರವಾಸ ಮನುಷ್ಯ ಜೀವನದ ಅತ್ಯುತ್ತಮಿಕೆಯನ್ನು ನಮಗೆ ಕೊಡಮಾಡುತ್ತದೆ. ಇತ್ತೀಚಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಮಂದಿರದ ಗರ್ಭಗುಡಿಯಲ್ಲಿ ಪುಟ್ಟ ಬಾಲರಾಮನ ಮೂರ್ತಿಯನ್ನು ಸಾವಿರಾರು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು. ಜಗತ್ತಿನಾದ್ಯಂತ ಈ ದೃಶ್ಯವನ್ನು ಲೈವ್ ನಲ್ಲಿ ನೋಡಿದ ಜನರು ಭಕ್ತಿ ಪರವಶರಾದರೆ, ಭಾರತೀಯರ ಪಾಲಿಗೆ ಇದು ಅವರ ಜೀವನದ ಮಹೋನ್ನತ ಘಳಿಗೆ. ಕಳೆದ ಐದು ಶತಮಾನಗಳಿಂದ ರಾಮನಿಲ್ಲದ ಅಯೋಧ್ಯೆಯಲ್ಲಿ ಅಖಂಡ ಪೂಜೆ ಜಪ ತಪ ಭಜನೆ ಪಾರಾಯಣಗಳು ನಡೆಯುತ್ತಿದ್ದರೂ ರಾಮ ಭಕ್ತರಿಗೆ ಮಂದಿರವಿಲ್ಲದೆ ಹೋಗಿದ್ದು ಅತೀವ ನೋವನ್ನು ಉಂಟು ಮಾಡಿತ್ತು. ಇದೀಗ ಆ ಎಲ್ಲ ನೋವಿಗೆ ಮುಕ್ತಿ ಹಾಡುವಂತೆ ಅಯೋಧ್ಯೆಯ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದ್ದು ಪುಟ್ಟ ಬಾಲ ರಾಮನ ಮೂರ್ತಿಯ ಪ್ರತಿಷ್ಠಾಪನೆಯಾಗಿ ನಮ್ಮೆಲ್ಲರ ಭಕ್ತಿಯ ಶಕ್ತಿಯ ಪ್ರತೀಕವಾಗಿ ಮುದ್ದು ರಾಮ ನಗುತ್ತಾ ನಿಂತಿದ್ದಾನೆ. ಮುಂದಿನ ದಿನಮಾನಗಳಲ್ಲಿ ಅತಿ ಹೆಚ್ಚಿನ ವಾಣಿಜ್ಯೋದ್ಯಮವಾಗಿ ಧಾರ್ಮಿಕ ಪ್ರವಾಸ ತಾಣವಾಗಿ ಅಯೋಧ್ಯೆ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕುಟುಂಬದವರ ಜೊತೆ ಜಾತ್ರೆಗೆ ಹೋದಾಗ ಮನೆದೇವರ ದೇವಸ್ಥಾನಗಳಿಗೆ ಹೋದಾಗ ದೊರೆಯುವ ಆನಂದವೇ ಬೇರೆ. ಆಯಾ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ಅಲ್ಲಿನ ನಿಯಮಾವಳಿಗಳನ್ನು ಅನುಸರಿಸಿ ಮುಂಜಾನೆ ಬೇಗನೆ ಸ್ನಾನ ಮಾಡಿ ಮಡಿ ಬಟ್ಟೆಯನ್ನುಟ್ಟು ಸರತಿಯ ಸಾಲಿನಲ್ಲಿ ನಿಂತು ದೈವ ದರ್ಶನ ಮಾಡಿದಾಗ ದೊರೆಯುವ ಕೃತಾರ್ಥ ಭಾವ ಕೃತಜ್ಞತೆಯ ರೂಪದಲ್ಲಿ ಭಕ್ತಿ ಭಾವ ಪರವಶತೆಯನ್ನು ಹುಟ್ಟು ಹಾಕುತ್ತದೆ.
ಘಟ್ಟ ಪ್ರದೇಶಗಳಲ್ಲಿ ಇರುವ ದೇವರ ದರ್ಶನ ಮಾಡಲು ಹೋಗುವಾಗ ದೈವ ಭಕ್ತಿಯ ಜೊತೆಗೆ ಪ್ರಕೃತಿ ಸೌಂದರ್ಯದ ಆಸ್ವಾದನೆಯು ಕೂಡ ಮುಖ್ಯವಾಗುತ್ತದೆ, ಜೊತೆಗೆ ಏನೆಲ್ಲಾ ಆಧುನಿಕ ಸೌಲಭ್ಯಗಳನ್ನು ನಾವು ಹೊಂದಿದ್ದರೂ ಕೂಡ ನಮ್ಮ ಹಿಂದಿನ ಹಿರಿಯರು ಬರಿಗಾಲಿನಲ್ಲಿ ದವಸ ಧಾನ್ಯಗಳನ್ನು ಕಟ್ಟಿಕೊಂಡು ಗುಂಪು ಪ್ರವಾಸಗಳಲ್ಲಿ ಏನೆಲ್ಲ ಸವಾಲುಗಳನ್ನು ತೊಂದರೆಗಳನ್ನು ಎದುರಿಸಿರಬಹುದು ಎಂಬುದರ ಅರಿವಾಗಿ ಅವರ ಆಸಕ್ತಿ, ಉತ್ಸಾಹ ಮತ್ತು ತಾಳ್ಮೆಯ ಕುರಿತು ಧನ್ಯತೆಯ ಭಾವ ಮೂಡುತ್ತದೆ.
ಇನ್ನು ಪಾದಯಾತ್ರೆಯಲ್ಲಿ ಹೋಗುವಾಗ ಪ್ರಕೃತಿಯ ಸೌಂದರ್ಯದ ಜೊತೆ ಜೊತೆಗೆ ಸಾಮುದಾಯಿಕ ಪ್ರಜ್ಞೆಯು ಕೂಡ ಮೂಡುತ್ತದೆ. ಗೊತ್ತಿರಲಿ ಗೊತ್ತಿಲ್ಲದಿರಲಿ ಸಹ ಪ್ರಯಾಣಿಕರೊಂದಿಗೆ ಒಂದು ಬಂಧ ಏರ್ಪಡುತ್ತದೆ. ಎಲ್ಲರೂ ಎಲ್ಲರಿಗೂ ಸಹಾಯ ಮಾಡುತ್ತಾ ಪ್ರಕೃತಿಯ ಆಸ್ವಾದನೆ ಮಾಡುತ್ತಾ, ಭಜನೆ ಹಾಡು ಹೇಳಿಕೊಂಡು ಒಟ್ಟಾಗಿ ಊಟ ಮಾಡುತ್ತಾ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಪಾದಯಾತ್ರೆಯಲ್ಲಿ ಸಾಗುವಾಗಿನ ಸಂತಸವೇ ಬೇರೆ. ಊರಲ್ಲಿದ್ದಾಗ ಏನೇ ಮಾಡಿದರೂ ಬಾರದ ನಿದ್ದೆಯಿಂದ ಒದ್ದಾಡುವವರ ದಣಿದ ದೇಹ ಕಲ್ಲಿನ ಬಂಡೆಯ ಮೇಲೆ ಮಲಗಿದರೂ ಕೂಡ ಅನಾಯಾಸವಾಗಿ ಆವರಿಸುತ್ತದೆ.
ಊಟದ ರುಚಿಯು ಅಷ್ಟೇ.. ಪ್ರವಾಸದ ವೈಶಿಷ್ಟತೆಯೇ ಇದು.

ಬದಲಾದ ಕಾಲಘಟ್ಟದಲ್ಲಿ ಆನ್ಲೈನ್ ನಲ್ಲಿಯೇ ಎಲ್ಲ ವ್ಯವಸ್ಥೆಗಳು ದೊರೆಯುತ್ತಿದ್ದರೂ ಕೂಡ ಧರ್ಮದರ್ಶನದ ಸರತಿಯಲ್ಲಿ ಸಾಕಷ್ಟು ಹೊತ್ತು ಕಾಯ್ದು ಇನ್ನೇನು ದೇವರ ವಿಗ್ರಹದ ಮುಂದೆ ಬಂದು
ದೇವರ ವಿಗ್ರಹವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಘಳಿಗೆಯಲ್ಲಿ ನಾವು ಕಣ್ಣು ಮುಚ್ಚಿ ದೇವರನ್ನು ನಮಸ್ಕರಿಸುತ್ತೇವೆ. ಹೀಗೇಕೆ ಎಂಬ ಪ್ರಶ್ನೆ ನಮ್ಮನ್ನು ಕಾಡಬಹುದು?.. ಬಾಹ್ಯವಾಗಿ ದೇವರನ್ನು ನೋಡಬೇಕೆಂಬ ನಮ್ಮೆಲ್ಲ ಪ್ರಶ್ನೆಗಳಿಗೆ, ಕುತೂಹಲಕ್ಕೆ, ಕೌತುಕಗಳಿಗೆ ಉತ್ತರವಾಗಿ ದೇವರ ವಿಗ್ರಹ ನಮ್ಮ ಕಣ್ಮುಂದೆ ಇರುವಾಗ ಕಣ್ಣು ಮುಚ್ಚುವುದು ನಮ್ಮ ಆಂತರಿಕ ಮನದಲ್ಲಿರುವ ಭಕ್ತಿಯ ಕಾರಣದಿಂದ. ಸ್ವಯಂ ಪ್ರೇರಿತವಾಗಿ ಕಣ್ಣುಗಳು ಮುಚ್ಚಿಕೊಂಡು ಮನಸ್ಸಿನ ಅಂತರ್ಯದಲ್ಲಿ ತುಂಬಿಕೊಂಡಿರುವ ಆ ಭಗವಂತನಿಗೆ ನಮಿಸುವ ಈ ಕ್ರಿಯೆಯಲ್ಲಿ ಮನಸ್ಸು ತೃಪ್ತಿಯನ್ನು ಹೊಂದುತ್ತದೆ.
ಇಂದಿನ ಡಿಜಿಟಲ್ ಯುಗದಲ್ಲಿ ನಾವು ಕಳೆದುಕೊಂಡಿರುವ ತಾಳ್ಮೆ, ಸಂತೋಷ, ನೆಮ್ಮದಿಗಳ ಹುಡುಕಾಟದಲ್ಲಿ ಇಡೀ ಬದುಕನ್ನೇ ಕಳೆಯುವ ಜನರು ಪ್ರವಾಸದಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿಯನ್ನು ಪಡೆದುಕೊಳ್ಳುವರು.ಇದನ್ನು ಆಂತರಿಕ ಪ್ರವಾಸ ಎಂದು ಹೇಳಬಹುದು.
ಬಾಹ್ಯ ಪ್ರಪಂಚದಲ್ಲಿ ಪ್ರವಾಸ ಮಾಡಿದಾಗ ನಮ್ಮ ಕಣ್ಣು, ಕಿವಿ, ಮೂಗು, ಬಾಯಿ, ದೇಹಗಳೆಂಬ ಪಂಚೇಂದ್ರಿಯಗಳಿಗೆ ರಸಾಸ್ವಾದನೆ ದೊರೆತರೆ ಆಂತರಿಕ ಪ್ರವಾಸ ನಮ್ಮೆಲ್ಲ ಚಿಂತೆಗಳನ್ನು, ಕ್ಲೇಶಗಳನ್ನು ಮರೆಸಿ ಉತ್ಸಾಹ ಉಲ್ಲಾಸಗಳನ್ನು ತುಂಬಿ ಬದುಕಿನ ಮುಂದಿನ ಪಯಣಕ್ಕೆ ಸಜ್ಜು ಮಾಡುತ್ತದೆ. ಮೊದಲು ನಿಮ್ಮ ಒಳಗಿನ ತನುವ ಸಂತೈಸಿಕೊಳ್ಳಿ ಮನವ ಸಂತೈಸಿಕೊಳ್ಳಿ ಎಂದು ಮನುಷ್ಯನ ಆಂತರಿಕ ಬದುಕಿನ ನೆಮ್ಮದಿಯ ಕುರಿತು ಪಾಠ ಹೇಳುತ್ತದೆ. ನಮ್ಮೊಳಗಿನ ಆಂತರಿಕ ಶಕ್ತಿ, ಸಾಮರ್ಥ್ಯಗಳ ಪರಿಚಯವನ್ನು ಮಾಡಿಕೊಡುತ್ತದೆ.. ಆದ್ದರಿಂದ ಬಾಹ್ಯ ಪ್ರವಾಸದ ಜೊತೆ ಜೊತೆಗೆ ಆಗಾಗ ಆಂತರಿಕ ಪ್ರವಾಸವನ್ನು ಕೈಗೊಂಡು ನಿಮ್ಮ ಬದುಕನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿಕೊಳ್ಳಿ


