ಬಬಲೇಶ್ವರ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ನಡೆಯುತ್ತಿರುವ ೨೦೨೬ರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರನ್ನು ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಜುಲೈ ೧೬ರಂದು ಸನ್ಮಾನಿಸಿ, ಅಭಿನಂದಿಸಲಾಯಿತು.
ಮತದಾರರ ಪಟ್ಟಿ ಪರಿಷ್ಕರಣೆಯ ಗಣತಿ ನಮೂನೆಗಳ ವಿತರಣೆ ಹಾಗೂ ಡಿಜಿಟೈಜೇಶನ್ ಕಾರ್ಯವನ್ನು ನಿಗದಿತ ಸಮಯಕ್ಕಿಂತ ಮೊದಲೇ ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
೨೯-ಬಬಲೇಶ್ವರ ಮತಕ್ಷೇತ್ರದ ಭಾಗ ಸಂಖ್ಯೆ ೮೪ರ ಮತಗಟ್ಟೆ ಮಟ್ಟದ ಅಧಿಕಾರಿಯಾದ ಎಚ್.ಎನ್. ಮೋಹಿತೆ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶ್ರೀಮತಿ ಸುಜಾತಾ ಬಾಗಲಕೋಟ, ಭಾಗ ಸಂಖ್ಯೆ ೨೦೪ರ ಮತಗಟ್ಟೆ ಅಧಿಕಾರಿಯಾದ ಶ್ರೀಮತಿ ಚಂದ್ರವ್ವ ತಂಬದ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶಕೆ.ಕೆ. ಅಸ್ಕಿ ಮತ್ತು ಭಾಗ ಸಂಖ್ಯೆ ೨೧೨ರ ಮತಗಟ್ಟೆ ಅಧಿಕಾರಿಯಾದ ಶ್ರೀಮತಿ ಸುನೀತಾ ವಾಲೀಕಾರ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶಿವಪ್ಪ ಕಾಂಬಳೆ ಇವರನ್ನು ಸನ್ಮಾನಿಸಲಾಯಿತು.
ಅವಧಿಗೆ ಮುನ್ನವೇ ಅತ್ಯುತ್ತಮ ಪ್ರಗತಿ ಸಾಧಿಸಿದ ಈ ಎಲ್ಲಾ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ಬಬಲೇಶ್ವರ ತಹಶೀಲ್ದಾರ್ ಶಾಂತಲಾ ಚಂದನ್ ಹಾಗೂ ತಿಕೋಟಾ ತಹಶೀಲ್ದಾರ್ ಸುರೇಶ ಚವಲರ್ ಅವರು ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಚೇರಿಯ ಅಧಿಕಾರಿ,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

