ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗುರುವಾರ ಮಧ್ಯಾಹ್ನ ೧೨:೦೦ ಗಂಟೆಯವರೆಗೆ ೨,೫೨,೫೭೦ ಮತದಾರರ ಗಣತಿ ನಮೂನೆಗಳನ್ನು ವಿತರಣೆ ಮಾಡಲಾಗಿದ್ದು, ಅದರಲ್ಲಿ ೭೬,೭೭೭ ಗಣತಿ ನಮೂನೆಗಳು ಡಿಜಿಟೈಜ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಹೇಳಿದರು.
ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ -೨೦೨೬ ಪ್ರಗತಿ ಕುರಿತಂತೆ ನಗರ ಮತಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆನಲೈನನಲ್ಲಿ ಮತದಾರರು ಸಲ್ಲಿಸಿದ ಒಟ್ಟು ಗಣತಿ ನಮೂನೆಗಳು ೧೯೭೯, ಸಂಗ್ರಹಿಸಲಾಗದ/ಗೈರುಹಾಜರಾದ ಮತದಾರರು ೧೧, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು ೪೬೮, ಮರಣ ಹೊಂದಿರುವ ಮತದಾರರು ೮೬೭ ಈಗಾಗಲೇ ನೋಂದಾಯಿಸಿಕೊಂಡ ಮತದಾರರು ೭೩೦ ಮತ್ತು ಇತರೆ ೬೯ ಪ್ರಗತಿಯ ಬಗ್ಗೆ ಮಾಹಿತಿ ನೀಡಲಾಯಿತು.
ಈಗಾಗಲೇ ಶೇ.೮೭ರಷ್ಟು ಮತದಾರರಿಗೆ ಮನೆ ಮನೆಗೆ ತೆರಳಿ ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಗಣತಿ ನಮೂನೆ ತಲುಪದಿರುವ ಮತದಾರರ ಗುರುತಿನ ಚೀಟಿಯ ಮಾಹಿತಿ ಹಾಗೂ ಅವರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಬಿಎಲ್ಒ ಅವರಿಗೆ ನೀಡುವ ಕಾರ್ಯವನ್ನು ಪಾಲಿಕೆಯಿಂದ ಜರುಗಿಸಲಾಗುತ್ತಿದೆ ಎಂದರು.
ನಗರದಲ್ಲಿ ಅನೇಕ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದು, ಪರಿಶೀಲಿಸಿ ಒಂದು ಕಡೆ ಮಾತ್ರ ಮತದಾನದ ಹಕ್ಕು ಉಳಿಯುವಂತೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ರಾಜಕೀಯ ಪಕ್ಷದ ಮುಖಂಡರು ವಿಷಯವನ್ನು ಪ್ರಸ್ತಾಪಿಸಿದರು.
ಒಂದು ವೇಳೆ ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಅಥವಾ ಸುಳ್ಳು ಮಾಹಿತಿ ನೀಡಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಯನ್ನು ಉಳಿಸಿಕೊಂಡಲ್ಲಿ ಸೆಕ್ಷನ್ ೩೧ ರಡಿ ಗರಿಷ್ಠ ೧ ವರ್ಷ ಶಿಕ್ಷೆ ಅಥವಾ ದಂಡ ಎರಡನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ ಎಂಬ ವಿಷಯವನ್ನು ಸಭೆಗೆ ತಿಳಿಸಲಾಯಿತು.
ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ನೇಮಕವಾದ ಬಿಎಲ್ ಎಗಳಿಂದ ಪ್ರತಿದಿನಮಾಹಿತಿ ನೀಡಲಾಗುವುದು ಎಂದರು.
ಸಂಬಂಧಪಟ್ಟ ಬಿಎಲ್ಒಗಳು, ಮನೆಯ ಸದಸ್ಯರು, ಅಕ್ಕಪಕ್ಕದ ನಿವಾಸಿಗಳೊಂದಿಗೆ ಸ್ಥಳ ಮಹಜರ ಮಾಡಿ, ಮಹಜರ್/ಸ್ಥಳ ಪರಿಶೀಲನಾ ವರದಿಗೆ ಅವರ ಸಹಿಯೊಂದಿಗೆ ಕ್ರಮಕೈಗೊಳ್ಳಲ್ಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಯಾವುದೇ ಅರ್ಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಯಾವುದೇ ಅನರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಗೆ ಸೇರದಂತೆ ಕ್ರಮವಹಿಸಲು ಎಲ್ಲ ರಾಜಕೀಯ ಪಕ್ಷಗಳ ಬಿಎಲ್ ಎ ಗಳು ಬಿಎಲ್ ಒ ಗಳಿಗೆ ಸಹಕರಿಸಲು ತಿಳಿಸಲಾಯಿತು.
ನಗರ ಮತಕ್ಷೇತ್ರಗಳಲ್ಲಿ ಒಟ್ಟು ೨೮೫ ಮತಗಟ್ಟೆಗಳಿದ್ದು ಈ ಪೈಕಿ ೭೨ ಮತಗಟ್ಟೆಗಳು ೧೨೦೦ಕ್ಕಿಂತ ಹೆಚ್ಚಿನ ಮತದಾರರಿದ್ದಾರೆ. ಹಾಗಾಗಿ ಸಮೀಪದ ಮತಗಟ್ಟೆಗಳಿಗೆ ಹೆಚ್ಚಿನ ಮತಗಳನ್ನು ವರ್ಗಾಯಿಸಿ ಅವಶ್ಯವಿದ್ದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.

