ಗೋಲಗೇರಿಯ ಡಂಬಳ ಕ್ರಾಸ್ನಲ್ಲಿ ಸಿಂದಗಿ ಬಿಜೆಪಿ ಮಂಡಲ ಹಾಗೂ ರೈತರ ನೇತೃತ್ವದಲ್ಲಿ ಬೃಹತ್ ರಸ್ತೆ ತಡೆ ಚಳುವಳಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದೆ ನಂಬಿಕೆ ದ್ರೋಹ ಮಾಡಿದೆ. ಮಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣವೇ ಪ್ರತಿ ಹೆಕ್ಟರ್ಗೆ ರೂ.೫೦ ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಆಗ್ರಹಿಸಿದ್ದಾರೆ.
ಸಿಂದಗಿ ತಾಲೂಕಿನ ಗೋಲಗೇರಿಯ ಡಂಬಳ ಕ್ರಾಸ್ನಲ್ಲಿ ಸಿಂದಗಿ–ಕೊಡಂಗಲ್ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು, ಗುತ್ತಿಗೆ ಬಸವಣ್ಣ ಏತ ನೀರಾವರಿ ಯೋಜನೆ ಹಾಗೂ ಇಂಡಿ ಐಬಿಸಿ ಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿ ಸಿಂದಗಿ ಬಿಜೆಪಿ ಮಂಡಲ ಹಾಗೂ ರೈತರ ನೇತೃತ್ವದಲ್ಲಿ ಹಮ್ಮಿಕೊಂಡ ಬೃಹತ್ ರಸ್ತೆ ತಡೆ ಚಳುವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಸರ್ಕಾರ ನೀಡಿರುವ ಭರವಸೆಗಳು ಈಡೇರಿಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಸರಕಾರ ಬುರುಡೆ ಬಿಡುವ ಸರ್ಕಾರ ಎಂದು ವಾಗ್ದಾಳಿ ನಡೆಸಿ ರಾಜ್ಯ ಸರ್ಕಾರದ ಆಡಳಿತ ಕಾರ್ಯ ವೈಖರಿಯನ್ನು ತೀವ್ರವಾಗಿ ಟೀಕಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ಕೊಡಂಗಲ್ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸಾವಿರಾರು ರೈತರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಗೌಡಣ್ಣ ಆಲಮೇಲ, ಗುರು ತಳವಾರ, ಶರಣು ಮನಗೂಳಿ, ಪ್ರಭುಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಸಿದ್ರಾಮ ಆನಗೊಂಡ, ಪ್ರಶಾಂತ ಕದ್ದರಕಿ, ಅಶೋಕ ನಾರಾಣಪೂರ, ಸೈಪನಸಾಬ ಕೋರವಾರ, ಸಲೀಂ ಭಾಗವಾನ, ಬಾಗೂ ಕೋಟೆಗೋಳ, ಪ್ರಭುಗೌಡ ಪಾಟೀಲ, ಅನಸೂಬಾಯಿ ಪಾರಗೊಂಡ, ಸೇರಿದಂತೆ ಹಲವು ಮುಖಂಡರು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

