ಚಡಚಣ: ರೇವತಗಾಂವ ಗ್ರಾಮದಲ್ಲಿ ದಸರಾ ಹಬ್ಬವನ್ನು ೯ ದಿನಗಳ ಕಾಲ ಸಡಗರದಿಂದ ಆಚರಿಸಲಾಯಿತು.
ದಸರಾದ ಕೊನೆಯ ದಿನವಾದ ಮಂಗಳವಾರದಂದು ಬೆಳಗ್ಗೆ ದೇವಿಗೆ ಪೂಜೆ ಮಂಗಳಾರತಿ, ನೈವೇದ್ಯ, ವಿಶೇಷ ಅಲಂಕಾರದೊಂದಿಗೆ ನೆರವೇರಿತು. ಅಲ್ಲದೇ ಬೆಳಗಿನ ಜಾವ ಗ್ರಾಮದ ರೇವಣಸಿದ್ಧೇಶ್ವರರ ಪೂಜಾರಿಯಾದ ಸಿದ್ದಪ್ಪ ಸಂಗಪ್ಪ ಹೂಗಾರರವರು ನಸುಕಿನ ಜಾವ ಬನ್ನಿ ಮರಕ್ಕೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ. ಬನ್ನಿಯನ್ನು ತಂದು ದೇವಸ್ಥಾನದಲ್ಲಿ ಇಡಲಾಯಿತು.
ನಂತರ ಗ್ರಾಮ ಪಂಚಾಯತಿಯಲ್ಲಿ ಬನ್ನಿ ಹಾಗೂ ಆಯುಧಗಳ ಪೂಜೆಯನ್ನು ಅಣ್ಣಾರಾಯ ಸಿದ್ದನಗೌಡ ಪಾಟೀಲರವರು ನೆರವೇರಿಸಿ ವಾಲಿಕಾರರವರಿಗೆ ಕಾಣಿಕೆಯನ್ನು ಸಲ್ಲಿಸಿದರು.
ಸಂಜೆ ೫ ಗಂಟೆಗೆ ಶ್ರೀ ರೇವಣಸಿದ್ಧೇಶ್ವರ ದೇವಾಸ್ಥಾನದಿಂದ ಬನ್ನಿಯನ್ನು ಹಾಗೂ ಪಲ್ಲಕ್ಕಿಯನ್ನು ವಾಲೀಕಾರರ ರಕ್ಷಣೆಯಲ್ಲಿ ಗ್ರಾಮದ ಪಾದಗಟ್ಟಿ ಹತ್ತಿರ ತಗೆದುಕೊಂಡು ಹೋಗಲಾಯಿತು. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರೇಲ್ಲರೂ ಹೊಸ ಉಡುಪುಗಳನ್ನು ತೊಟ್ಟು ಬನ್ನಿ ಮುರಿಯಲು ಸೇರಿದ್ದರು. ನಂತರ ಬನ್ನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಗ್ರಾಮಸ್ಥರೇಲ್ಲರು ಪೂಜೆ ಬನ್ನಿಯನ್ನು ಪಡೆಯಲು ಮುಗಿಬಿದ್ದಿದ್ದರು.
ಹೀಗೆ ಪಡೆದ ಬನ್ನಿಯನ್ನು ಗ್ರಾಮಸ್ಥರು ಗ್ರಾಮದ ದೇವರುಗಳಿಗೆ ಬನ್ನಿಯನ್ನು ಮುಡಿಸಿ ದರ್ಶನ ಪಡೆದರು. ಮನೆಯ ಮುಂದೆ ಆರತಿಯನ್ನು ಬೆಳಗಿಸಿಕೊಂಡು. ಮನೆಯಲ್ಲಿನ ಜಗಲಿ ಮೇಲಿನ ದೇವರಿಗೆ ಬನ್ನಿ ಅರ್ಪಿಸಿ. ತರಗನ್ನು ಕಚ್ಚಿ ನಂತರ ಜನರು ಪರಸ್ಪರ ಬನ್ನಿ ಕೊಡು-ಕೊಳ್ಳುವಿಕೆ ಮೂಲಕ ನಾವು-ನೀವು ಬನ್ನಿ ಕೊಟ್ಟು ಬಂಗಾರದಂಗ ಇರೋಣವೆಂದು ಎಂದು ಆತ್ಮೀಯ ಮಾತಿನೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
Subscribe to Updates
Get the latest creative news from FooBar about art, design and business.
Related Posts
Add A Comment

