ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
‘
ಉದಯರಶ್ಮಿ ದಿನಪತ್ರಿಕೆ
‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ, ಹಳ್ಳ-ಕೊಳ್ಳ ಸುತ್ತಾಡಿ ಬಂದೆ, ಕಾರ ಮಳೆಯೋ ಕಪಟ ಮಳೆಯೋ, ಸುರಿ ಸುರಿಯೋ ಮಳೆರಾಯ’ ಎಂಬ ವರುಣದೇವನನ್ನು ಮಳೆಗಾಗಿ ಪ್ರಾರ್ಥಿಸುವ ಈ ಜಾನಪದ ಹಾಡನ್ನು ತಾವೆಲ್ಲರೂ ಕೇಳಿರಬಹುದು. ಮಳೆಗಾಗಿ ದೇವರಲ್ಲಿ ಮೊರೆ ಹೋಗುವುದು ಮತ್ತು ದೇವರಲ್ಲಿ ಪ್ರಾರ್ಥಿಸುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ನಂಬಿಕೆ. ಉತ್ತಮ ಮಳೆ, ಬೆಳೆ ಮತ್ತು ಅನ್ನದಾತರ ಸಮೃದ್ಧಿಗಾಗಿ ಜನತೆ ಮನೆಯಲ್ಲಿ ಯಾವುದೇ ಅಡುಗೆ ಮಾಡದೇ ವಾರ (ಉಪವಾಸ) ಮಾಡುವುದು, ಪೂಜೆ ಸಲ್ಲಿಸುವುದು ಮತ್ತು ಕತ್ತೆ ಮದುವೆ ಮಾಡುವುದು ಮತ್ತು ಗುರ್ಜಿ ಮಾಡಿ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಾರೆ. ವರುಣ ದೇವನಲ್ಲಿ (ಮಳೆರಾಯ) ಭೂಮಿಗೆ ಜೀವಜಲವನ್ನು ಕರುಣಿಸಿ, ಬರಗಾಲವನ್ನು ದೂರ ಮಾಡುವಂತೆ ಭಕ್ತಿ-ಭಾವದಿಂದ ನಿವೇದನೆ ಮಾಡಿಕೊಳ್ಳುತ್ತಾರೆ.
ಮಾನವ ಸಂಸ್ಕೃತಿಯ ತಾಯಿಬೇರು ಜನಪದ ಪರಂಪರೆ
ಕಣ್ಣು ಮುಚ್ಚಿ ಕುಳಿತೆನೋ ವರುಣ ದೇವ, ಬೆಳೆ ಒಣಗಿ ಬಸವಳಿಯಿತು ಜೀವ, ಕಾರ ಮಳೆಯ ಸುರಿಸಿ, ಕಪಟ ಮಳೆ ಕರಗಿಸಿ, ಧರೆಯ ಸಿರಿ ತಣಿಸು ವರುಣ ದೇವ’ ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಗಿ ವರುಣ ದೇವನಿಗೆ ಮಹಿಳೆಯರು ಪ್ರಾರ್ಥನೆ ಮಾಡುವ ದೃಶ್ಯ ಕಂಡು ಬರುತ್ತದೆ. ಹಳ್ಳಿಗಾಡಿನ ಜನರು ಮಳೆಗಾಗಿ ಮೇಘರಾಜನನ್ನು ಪ್ರಾರ್ಥಿಸುವ ಸಾಂಪ್ರದಾಯಿಕ ಮತ್ತು ಭಕ್ತಿಪೂರ್ವಕವಾದ ಜಾನಪದ ಹಾಡು ಹಾಡುತ್ತಾ, ಮಣ್ಣಿನಿಂದ ಮಾಡಿದ ಗುರ್ಜಿ ಹೊತ್ತು ಪ್ರತಿ ಮನೆ ಮನೆಗೆ ತೆರಳಿ ನೀರು ಹಾಕಿಸಿಕೊಂಡು ಎಲ್ಲೆಲ್ಲೂ ಮಳೆರಾಯನಿಗೆ ಕೋರಿಕೆ ಸಲ್ಲಿಸುವುದು ಒಂದು ವಿಶೇಷತೆ.

ಮಳೆಗಾಗಿ ವರುಣದೇವನ ಕೃಪೆಗಾಗಿ ಮೊರೆ
ಜುಲೈ ತಿಂಗಳ ಮಧ್ಯಕಾಲ ಬಂದರೂ ಇನ್ನೂ ಮಳೆ ಬಾರದೇ ಇರುವ ಈ ಸಂದರ್ಭದಲ್ಲಿ ನಮ್ಮ ನವರಸಪುರದ ದೇವಸ್ಥಾನಗಳಲ್ಲಿ “ ಓ ವರುಣ ದೇವನೇ, ಭೂಮಿಯ ಮೇಲಿನ ಬರವನ್ನು ನೀಗಿಸಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಲು ಸುರಿಯುವ ಮಳೆಯನ್ನು ಕರುಣಿಸು” ಎಂದು ರುದ್ರಾಭಿಷೇಕ, ದೇವರಿಗೆ ಜಲಾಭಿಷೇಕ, ದೇವರಿಗೆ ಉಡಿ ತುಂಬುವುದು ಮತ್ತು ವರುಣದೇವವನ್ನು ಒಲಿಸಿಕೊಳ್ಳಲು ಓಂ ವರುಣಾಯ ನಮಃ ಮತ್ತು ‘ಸರ್ವೇ ಜನಾಃ ಸುಖಿನೋ ಭವಂತು” ಎಂಬ ಮಂತ್ರ ಪಠಣದಂತಹ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ನಮ್ಮ ನವರಸಪುರ ಊರಿನ ಜನತೆ ಒಗ್ಗೂಡಿ, ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು (ಐದು ದಿನ) ವಾರ ಮಾಡುತ್ತಾ, ಮನೆಯಲ್ಲಿ ಯಾವುದೇ ತರಹದ ಅಡುಗೆ ಮಾಡದೇ ಉಪವಾಸ ವ್ರತವನ್ನು ಆಚರಿಸುತ್ತಾರೆ. ಭಜನೆ, ಸತ್ಸಂಗ, ಕೀರ್ತನೆ, ದೇವರ ನಾಮಸ್ಮರಣೆ ಮತ್ತು ದೇವರನ್ನು ಒಲಿಸಿಕೊಳ್ಳಲು ಭಕ್ತಿಗೀತೆಗಳ ಹಾಡು ಹೀಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇವರಲ್ಲಿ ಮಳೆಗಾಗಿ ಮೊರೆ ಹೋಗುತ್ತಾರೆ.
ಗುರ್ಜಿ ಪೂಜೆ ವೈಶಿಷ್ಟೈತೆ
ಮಳೆ ಬಾರದೇ ಇದ್ದಾಗ ನಮ್ಮ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶದಲ್ಲಿ ಶತಮಾನಗಳಿಂದಲೂ ಆಚರಣೆಯಲ್ಲಿರುವ ಗುರ್ಜಿ ಪೂಜೆಯು ವಿಶಿಷ್ಠವಾಗಿದೆ. ಮಹಿಳೆಯರು ಮತ್ತು ಬಾಲಕರು ತಲೆಯ ಮೇಲೆ ತವೆ ಇಟ್ಟುಕೊಂಡು, ಅದರ ಮೇಲೆ ಆಕಳ ಸೆಗಣಿಯಿಂದ ಗುರ್ಜಿ ತಯಾರಿಸಿ, ಗುರ್ಜಿ ಹಾಡು ಹಾಡುತ್ತಾ, ಪ್ರತಿ ಮನೆಗೆ ತೆರಳಿ ಗುರ್ಜಿಗೆ ನೀರು ಸುರಿದು ದೇವರಲ್ಲಿ ಜನರು ಮಳೆ ನೀಡಲೆಂದು ಬೇಡಿಕೊಳ್ಳುತ್ತಾರೆ. ಇದರಿಂದ ಸಂಕಷ್ಟ ಕಾಲದಲ್ಲಿ ಇಡೀ ರೈತ ಸಮುದಾಯಕ್ಕೆ ಧನಾತ್ಮಕ ಶಕ್ತಿಯನ್ನು ತುಂಬುತ್ತಾರೆ. ಅಷ್ಟೇ ಅಲ್ಲದೇ ಜಾತಿ, ಮತ, ಪಂಥ-ಪಂಗಡಗಳ ಬೇಧ-ಭಾವವಿಲ್ಲದೇ ಇಡೀ ಊರೇ ಒಗ್ಗೂಡಿ ಸಕಲ ದೇವಾನುದೇವತೆಗಳಲ್ಲಿ ವರುಣನಿಗಾಗಿ ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ರೈತ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧ
ನಮ್ಮ ದೇಶದ ಸಂಸ್ಕೃತಿಯಲ್ಲಿ ರೈತರು ಭೂಮಿಯನ್ನು ‘ಭೂಮಿ ತಾಯಿ’ ಎಂದು ಪೂಜಿಸುತ್ತಾರೆ. ದೈನಂದಿನವಾಗಿ ರೈತ ಪ್ರಕೃತಿ, ಗಾಳಿ, ಮಳೆ, ಸೂರ್ಯ ಮತ್ತು ಭೂ ತಾಯಿಯನ್ನು ಸದಾ ದೈವಿಕ ಭಾವದಿಂದ ಪೂಜಿಸುತ್ತಾನೆ. ರೈತ ಮತ್ತು ಪ್ರಕೃತಿಯ ಮಧ್ಯೆ ಅವಿನಾಭಾವ ಸಂಬಂಧವಿದೆ. ವರುಣನಿಗೆ ಮಳೆಗಾಗಿ ನಡೆಸುವ ಜಾನಪದ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ಗ್ರಾಮೀಣ ಜನರ ಜನಪದ ಸಂಸ್ಕೃತಿಯ ಪ್ರತೀಕವಾಗಿವೆ. ವಿಜ್ಞಾನ-ತಂತ್ರಜ್ಞಾನದ ಇಂದಿನ ೫ಜಿ ಯುಗದಲ್ಲೂ ಇಂತಹ ಸಾಂಪ್ರದಾಯಿಕ ಆಚರಣೆಗಳು ನಮ್ಮ ಸಂಸ್ಕೃತಿ-ಸಂಪ್ರದಾಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇನ್ನೂ ಜೀವಂತವಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಆದ್ದರಿಂದ ನಾವು ಎಷ್ಟೇ ಅಭಿವೃದ್ದಿ ಸಾಧಿಸಿದರೂ ನಮ್ಮ ಮೂಲ ಜನಪದ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಆಚರಣೆ ಮತ್ತು ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಕಲೆಯನ್ನು ಎಂದಿಗೂ ಮರೆಯಬಾರದು.


