ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರ್ವೇ ನಂ.೪೮೭ರ ಜಾಗವು ವಿವಾದಿತವಾಗಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯದೆಯೇ ಸಮಾಜ ಭವನ ನಿರ್ಮಾಣ ಕಾರ್ಯಕೈಗೊಳ್ಳಲಾಗಿದೆ ಎಂದು ಪತ್ರಕರ್ತ ಸಂಗಮೇಶ ಡಿಗ್ಗಿ ಆರೋಪಿಸಿದ್ದಾರೆ.
ಈ ಸ್ಥಳದ ಸುತ್ತಮುತ್ತ ಸರ್ಕಾರಿ ಶಾಲೆಗಳು, ಆದರ್ಶ ಶಾಲೆ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿದ್ದು, ಇಲ್ಲಿ ಸಮಾಜ ಭವನ ನಿರ್ಮಾಣವಾದರೆ ಸಭೆ-ಸಮಾರಂಭಗಳ ಕಾರಣದಿಂದ ಉಂಟಾಗುವ ಶಬ್ದಮಾಲಿನ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಸಂಗಮೇಶ ಡಿಗ್ಗಿ ತಿಳಿಸಿದ್ದಾರೆ.
ಮನವಿ ಸಲ್ಲಸಿ ಮಾತನಾಡಿದ ಅವರು, ಇದೇ ಜಾಗವನ್ನು ಒಂದು ಸಮುದಾಯಕ್ಕೆ ನೀಡಿದರೆ, ಮುಂದಿನ ದಿನಗಳಲ್ಲಿ ಇತರೆ ಸಮುದಾಯಗಳು ಹಾಗೂ ಧರ್ಮದವರೂ ಸಹ ಭವನ ಅಥವಾ ಧಾರ್ಮಿಕ ಕೇಂದ್ರಗಳಿಗಾಗಿ ಇದೇ ರೀತಿಯ ಬೇಡಿಕೆ ಮುಂದಿಡುವ ಸಾಧ್ಯತೆ ಇದ್ದು, ಇದರಿಂದ ಸಾಮಾಜಿಕ ಸೌಹಾರ್ದತೆಗೆ ಧಕ್ಕೆಯಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಜಾತಿ-ಧರ್ಮ ಸಂಬಂಧಿತ ಸಂಘರ್ಷಕ್ಕೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸಮುದಾಯ ಭವನ ಅಥವಾ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಬೇಕಾದರೆ, ಲೇಔಟ್ಗಳಲ್ಲಿರುವ ಸಿ.ಎ.ಸೈಟ್ಗಳಲ್ಲಿ ನಿರ್ಮಿಸಬೇಕು. ಸರ್ವೇ ನಂ.೪೮೭ರ ಜಾಗದಲ್ಲಿ ಯಾವುದೇ ಒಂದು ಸಮುದಾಯದ ಭವನ ನಿರ್ಮಿಸುವ ಬದಲು, ವಿಜ್ಞಾನ ಕೇಂದ್ರ ಹಾಗೂ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಮೀಸಲಿಡಬೇಕು. ಇದರಿಂದ ಸುತ್ತಮುತ್ತಲಿನ ಶಾಲೆ-ಕಾಲೇಜು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗಲಿದೆ. ಕೂಡಲೇ ಕಾಮಗಾರಿಗೆ ತಡೆ ಹಿಡಿಯಬೇಕು. ಜೊತೆಗೆ ಸರ್ವೇ ನಂ.೪೮೭ಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ಹಾಗೂ ಮಾಹಿತಿಯನ್ನು ಒದಗಿಸುವಂತೆ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಸಂಗಮೇಶ ಡಿಗ್ಗಿ ಅವರು ನೀಡಿದ ಸರ್ವೇ ನಂ.೪೮೭ರ ಕಂದಾಯ ಇಲಾಖೆಯ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲಾಗಿದೆ. ಅವರ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
“ಒಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಶಾಸಕರು ಶೈಕ್ಷಣಿಕ ಆವರಣದ ಮಹತ್ವವನ್ನು ಅರಿತುಕೊಳ್ಳಬೇಕಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣಕ್ಕೆ ತೊಂದರೆಯಾಗುವ ಸಾಧ್ಯತೆಯಿರುವ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸಲು ಅವಕಾಶ ನೀಡಿರುವುದು ಆಶ್ಚರ್ಯಕರವಾಗಿದೆ. ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾದ ಜಾಗವನ್ನು ಬಳಸುವ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ಹಿತಾಸಕ್ತಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಿತ್ತು.”
– ಸಂಗಮೇಶ ಡಿಗ್ಗಿ
ಪತ್ರಕರ್ತ

