ಲೇಖನ
– ಸುಮಲತಾ ಗಡಿಯಪ್ಪನವರ
ಬಿದರಕುಂದಿ
ತಾ: ಮುದ್ದೇಬಿಹಾಳ
ಉದಯರಶ್ಮಿ ದಿನಪತ್ರಿಕೆ
ಪ್ರತಿದಿನ ಬೆಳಗಿನ ಜಾವ ಕಿಟಕಿಯಿಂದ ಆಚೆ ನೋಡಿದಾಗ ಪ್ರಕೃತಿಯ ಅರುಣೋದಯ ಪ್ರತಿಯೊಬ್ಬರನ್ನೂ ಕೈಬೀಸಿ ಕರೆಯುತ್ತದೆ. ಹಕ್ಕಿಗಳ ಚಿಲಿಪಿಲಿ ಕಲರವಕ್ಕೆ ಕಿವಿಯಾಗುತ್ತಾ, ತಣ್ಣನೆಯ ಮುಂಜಾವಿನ ಗಾಳಿಯಲ್ಲಿ ಒಂದಿಷ್ಟು ಹೊತ್ತು ತನಗಾಗಿ ನಡಿಗೆಯನ್ನು (Morning Walk) ಮಾಡಬೇಕು, ಆ ಪ್ರಕೃತಿಯ ಮಡಿಲಲ್ಲಿ ಮನಸ್ಸನ್ನು ಹಗುರಗೊಳಿಸಿಕೊಳ್ಳಬೇಕು ಎಂಬ ಹಂಬಲ ಇಂದು ಪ್ರತಿಯೊಬ್ಬ ಮಹಿಳೆಗೂ ಇರುತ್ತದೆ. ಆದರೆ, ಆ ಆಸೆಗೆ ಕಣ್ಣು ತೆರೆಯುವಷ್ಟರಲ್ಲೇ ಮನಸ್ಸು ಮತ್ತು ದೇಹ ಎರಡೂ ಆಯಾಸದ ಭಾರಕ್ಕೆ ಕುಸಿದುಬಿಡುತ್ತವೆ.
ಇಲ್ಲಿ ‘ಮುಂಜಾವಿನ ನಡಿಗೆ’ ಎಂಬುದು ಕೇವಲ ಒಂದು ಉದಾಹರಣೆಯಷ್ಟೇ. ಆಕೆಯ ಇಷ್ಟದ ಹವ್ಯಾಸಗಳು, ಆಸಕ್ತಿಯ ಕ್ಷೇತ್ರಗಳು ಮತ್ತು ಆಕೆಗಾಗಿಯೇ ಮೀಸಲಿಡಬೇಕಾದ ಪುಟ್ಟ ಸಮಯದ ಕಲ್ಪನೆಯೂ ಇಂದು ಗೃಹಕೃತ್ಯದ ಕಲ್ಲುಬಂಡೆಯಡಿಯಲ್ಲಿ ಸಿಲುಕಿ ನಲುಗಿಹೋಗಿದೆ.
ಗಡಿಯಾರದ ಮುಳ್ಳಿನೊಂದಿಗೆ ನಿರಂತರ ಓಟ
ಬಹುತೇಕ ಹೆಣ್ಣುಮಕ್ಕಳ ಪಾಲಿಗೆ ಸ್ವಂತಿಕೆ ಎಂಬುದು ಕೇವಲ ಒಂದು ಕನಸಷ್ಟೇ. ಏಕೆಂದರೆ, ಆ ನಸುಬೆಳಕಿನ ವೇಳೆಗಾಗಲೇ ಅವರು ಗೃಹಕೃತ್ಯದ ನೊಗಕ್ಕೆ ಹೆಗಲು ಕೊಟ್ಟಿರುತ್ತಾರೆ. ಮನೆಯವರೆಲ್ಲರ ಇಷ್ಟ-ಕಷ್ಟಗಳನ್ನು ಅರಿತು, ತಿಂಡಿ-ಡಬ್ಬಿಗಳನ್ನು ಹದವಾಗಿ ಸಿದ್ಧಪಡಿಸಿ, ಎಲ್ಲರ ಹೊಟ್ಟೆ ತುಂಬಿಸಿ ಕಚೇರಿಗೆ ಓಡಬೇಕಾದ ಅನಿವಾರ್ಯತೆ ಅವರದು. ಇನ್ನು ಸಂಜೆ ಮನೆಗೆ ಮರಳುವಾಗಲೂ ವಿಶ್ರಾಂತಿಯ ನೆಮ್ಮದಿ ಇರುವುದಿಲ್ಲ; ಬದಲಿಗೆ ರಾತ್ರಿಯ ಅಡುಗೆಯ ಚಿಂತೆಯಲ್ಲೇ ಮನಸ್ಸು ಕರಗುತ್ತಿರುತ್ತದೆ.
ಮಕ್ಕಳ ಓದು ಮತ್ತು ಅವರ ನಿದ್ದೆಗೆ ತನ್ನಿಂದ ಯಾವುದೇ ತೊಂದರೆಯಾಗಬಾರದು ಎಂದು ಪ್ರತಿಕ್ಷಣವೂ ಗಡಿಯಾರದ ಮುಳ್ಳಿಗೆ ಹೆದರುತ್ತಾ ಬದುಕುವ ಹೆಣ್ಣುಗಳು ನಮ್ಮ ನಡುವೆ ಅದೆಷ್ಟೋ ಮಂದಿ ಇದ್ದಾರೆ. ಎಲ್ಲರಿಗಾಗಿ ಸಮಯ ಮೀಸಲಿಡುವ ಹೆಣ್ಣು, ತನಗಾಗಿ ಬದುಕಲು ದಿನವೂ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ಹಗಲಿರುಳು ಕುಟುಂಬಕ್ಕಾಗಿ ಮತ್ತು ಕರ್ತವ್ಯಕ್ಕಾಗಿ ಶ್ರಮಿಸುವ ಈ ಜೀವಗಳಿಗೆ ಕೊನೆಗೆ ಸಿಗುತ್ತಿರುವುದಾದರೂ ಏನು? ಕನ್ನಡಿಯ ಮುಂದೆ ನಿಂತಾಗ ಮಾಸುತ್ತಿರುವ ಮುಖದ ಕಳೆ ಮತ್ತು ಕಳೆದುಹೋಗುತ್ತಿರುವ ಕಾಯದ ಅಂದ ಮಾತ್ರ ಎದ್ದು ಕಾಣುತ್ತದೆ.

ಕಾಣದ ಶ್ರಮ, ಕೇಳುವ ಚುಚ್ಚುಮಾತು!
ಎಲ್ಲಕ್ಕಿಂತ ಬೇಸರದ ಸಂಗತಿಯೆಂದರೆ, ಕಾರ್ಯದೊತ್ತಡದ ನಡುವೆ ಹೆಣ್ಣು ಪಡುತ್ತಿರುವ ಶ್ರಮವನ್ನು ಯಾರೂ ಅಷ್ಟಾಗಿ ಗುರುತಿಸುವುದೇ ಇಲ್ಲ. ಬದಲಾಗಿ, “ತುಂಬಾ ದಪ್ಪಗಾಗಿದ್ದೀಯಾ”, “ರೂಪುಗೆಟ್ಟಿದ್ದೀಯಾ”, “ಮುಖವೆಲ್ಲಾ ಕಳೆಗುಂದಿದೆ” ಎಂದು ಹಂಗಿಸುವ ಸಮಾಜ ಮತ್ತು ಬಂಧುಗಳ ಚುಚ್ಚುಮಾತುಗಳು ಆಕೆಯ ಎದೆಗಿಳಿದು ಮಾಸದ ಗಾಯ ಮಾಡುತ್ತವೆ. ಇಷ್ಟೆಲ್ಲಾ ಕೃತಘ್ನತೆಯ ಮಾತುಗಳು ಕೇಳಿಬಂದರೂ, ಹೆಣ್ಣಾಗಿ ತನ್ನ ಕರ್ತವ್ಯದ ಹಾದಿಗೆ ಆಕೆ ಎಂದೂ ಬೆನ್ನು ಮಾಡುವುದಿಲ್ಲ.
ವಾರದ ಕೊನೆಯ ರಜೆಯ ದಿನವಾದರೂ ಸ್ವಲ್ಪ ನೆಮ್ಮದಿಯಾಗಿ ಮಲಗೋಣವೆಂದರೆ ‘ಸೋಮಾರಿ’ ಎಂಬ ಹಣೆಪಟ್ಟಿ ಸಿದ್ಧವಾಗಿರುತ್ತದೆ! ಹೇಗೋ ಸಮಯ ಮಾಡಿಕೊಂಡು ಹೊರಗೆ ಹೋಗೋಣವೆಂದರೆ ಸಾಲು ಸಾಲು ಸಮಾರಂಭಗಳ ಪಟ್ಟಿ ಎದುರಿಗಿರುತ್ತದೆ. ಇನ್ನು ವಾರಪೂರ್ತಿ ಆಫೀಸು-ಮನೆ ಎಂದು ದುಡಿದು ಸುಸ್ತಾಗಿರುವ ಮಹಿಳೆಗೆ ವಾರಾಂತ್ಯದಲ್ಲಿ ಬಟ್ಟೆ ಮತ್ತು ಪಾತ್ರೆಗಳ ರಾಶಿ ಕಾಯುತ್ತಿರುತ್ತದೆ. ಕಳೆದುಹೋಗುತ್ತಿರುವ ತನ್ನ ಹಳೆಯ ಹವ್ಯಾಸಗಳನ್ನು ನೆನೆಯುವಷ್ಟರಲ್ಲಿ ಅನಿರೀಕ್ಷಿತ ಅತಿಥಿಗಳ ಆಗಮನದ ಘಟ್ಟ ಎದುರಾಗಿರುತ್ತದೆ!
ಕೆಲಸದ ಹಂಚಿಕೆ: ಆದರ್ಶ ಕುಟುಂಬದ ಅಡಿಪಾಯ
ಇಂದಿನ ಆಧುನಿಕ ಸಮಾಜದಲ್ಲಿ ಹೆಣ್ಣು ಮನೆಯ ಒಳಗೂ ಮತ್ತು ಹೊರಗೂ ಸಮಾನವಾಗಿ ದುಡಿಯುತ್ತಿದ್ದಾಳೆ.
ಹೀಗಿರುವಾಗ ಮನೆ ಕೆಲಸ ಮಾತ್ರ ಕೇವಲ ಹೆಂಗಸರದು ಎಂದು ಭಾವಿಸುವುದು ಎಷ್ಟು ಸರಿ? ಹೆಣ್ಣಿನ ಮೇಲೆ ಅನಗತ್ಯ ಜವಾಬ್ದಾರಿಗಳ ಹೊರೆ ಹೇರದೆ, ಕುಟುಂಬದ ಪ್ರತಿಯೊಬ್ಬ ಸದಸ್ಯರೂ ತಮ್ಮ ಪಾಲಿನ ಕರ್ತವ್ಯಗಳನ್ನು ಅರಿತುಕೊಳ್ಳಬೇಕಿದೆ. ಅದೃಷ್ಟವಶಾತ್ ಇಂದಿನ ಸಮಾಜದಲ್ಲಿ ಅನೇಕ ಸಹೃದಯಿ ಪುರುಷರು ಮಹಿಳೆ ಉದ್ಯೋಗಿಯಾಗಿರಲಿ ಅಥವಾ ಗೃಹಿಣಿಯಾಗಿರಲಿ, ಅವರ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಸಮಭಾಗಿಗಳಾಗಿ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದಾರೆ. ಈ ನಡೆ ಅತ್ಯಂತ ಶ್ಲಾಘನೀಯ.
ಈ ರೀತಿಯ ಸಮಾನತೆಯ ಕಾರ್ಯವನ್ನು ಮನೆಯ ಎಲ್ಲ ಪುರುಷರು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಂಡಾಗ, ಮನೆಯಲ್ಲಿರುವ ಚಿಕ್ಕಮಕ್ಕಳಲ್ಲೂ ಸಹಜವಾಗಿ ಕೆಲಸ ಮಾಡುವ ಭಾವನೆ ಮತ್ತು ಶಿಸ್ತು ಮೂಡುತ್ತದೆ. ಮನೆ ಕೆಲಸ ಕೇವಲ ಅಮ್ಮನದ್ದೋ ಅಥವಾ ತಂಗಿಯದ್ದೋ ಅಲ್ಲ, ಅದು ಎಲ್ಲರೂ ಸೇರಿ ನಿಭಾಯಿಸಬೇಕಾದ ಜವಾಬ್ದಾರಿ ಎಂಬ ಪ್ರಜ್ಞೆ ಬಾಲ್ಯದಿಂದಲೇ ಮಕ್ಕಳ ಮನಸ್ಸಿನಲ್ಲಿ ಬಿತ್ತಲ್ಪಡುತ್ತದೆ. ಈ ಅರಿವು ಮುಂದಿನ ದಿನಗಳಲ್ಲಿ ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಅತ್ಯಂತ ಸ್ನೇಹಮಯವಾಗಿ, ಪ್ರೀತಿಯಿಂದ ಹಾಗೂ ಸೌಹಾರ್ದತೆಯಿಂದ ಇಡುವುದರಲ್ಲಿ ಯಾವುದೇ ಸಂಶಯವಿಲ್ಲ.


