ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನ್ನ ಪ್ರೀತಿಯ ಮುದ್ದು!
ಎಂದಿಗಿಂತ ಅಂದು ತುಂಬಾ ಸುಂದರವಾಗಿ ಕಾಣುತ್ತಿದ್ದೆ. ದೇವಲೋಕದ ಅಪ್ಸರೆಯಂತೆ ಸೆಳೆಯುತ್ತಿದ್ದೆ. ಗಾಢ ನೀಲಿ ಬಾರ್ಡರ್ ಇರೋ ತಿಳಿ ಗುಲಾಬಿ ರಂಗಿನ ಮೈಸೂರು ಸಿಲ್ಕ್ ಸೀರೆಯುಟ್ಟು ಅದಕೊಪ್ಪುವ ಬೋಟ್ ನೆಕ್ ಬ್ಲೌಸ್ ತೊಟ್ಟಿದ್ದೆ. ಅದು ನಿನಗೆ ಎಲಿಗೆಂಟ್ ಲುಕ್ ನೀಡಿತ್ತು. ಮುಗ್ಧ ಮನೋಹರವಾಗಿ ನಗುತ್ತಿದ್ದ ನಿನ್ನ ನೋಡಿ ನನ್ನನ್ನೇ ನಾನು ಮರೆತುಬಿಟ್ಟೆ. ನನ್ನ ಹೆಸರನ್ನು ಮೂರು ನಾಲ್ಕು ಸಲ ಆಪ್ತ ಗೆಳೆಯ ಕೂಗಿದ ಮೇಲೆ ವಾಸ್ತವಕ್ಕೆ ಬಂದೆ, ಗೆಳೆಯರೆಲ್ಲ ಕರಿತಾ ಇದ್ದಾರೆ ಬಾ ಎಂದು ಕೈಹಿಡಿದು ಕರೆದುಕೊಂಡು ಹೋದ. ನಿನ್ನ ನೆನಪಿನಲ್ಲಿ ಅಂದು ರಾತ್ರಿ ಕಣ್ರೆಪ್ಪೆಗಳು ಒಂದಕ್ಕೊಂದು ಅಂಟಿಕೊಳ್ಳಲೇ ಇಲ್ಲ.
ಮರುದಿನ ರವಿವಾರ ಹೀಗಾಗಿ ನಿನ್ನನ್ನು ಕಾಣದ ಕಂಗಳು ಮತ್ತೆ ಉಪವಾಸ ಅನುಭವಿಸಿದವು. ಸೋಮವಾರ ನಿನ್ನನ್ನು ನೋಡಲೇಬೇಕೆಂದು ಕಾಲೇಜಿನ ಪಾರ್ಕಿನಲ್ಲಿ ಕಾಯುತ್ತಿದ್ದೆ. ಏ ಪೆದ್ದು ಪೆದ್ದು ಅನ್ನೋ ಮಧುರ ದನಿಗೆ ಹಿಂತಿರುಗಿ ನೋಡಿದೆ. ನಿಧಾನವಾಗಿ ತಲೆಯೆತ್ತಿದೆ ನೆನೆದವರ ಮನದಲ್ಲಿ ಅನ್ನೋ ತರ ಅಲ್ಲಿ ನೀನಿದ್ದೆ. ಹೊಳಪಿನ ಕಣ್ಣೋಟಕ್ಕೆ ಚೆಂದದ ಮೈಮಾಟಕ್ಕೆ ರಂಭೆ ತಿಲೋತ್ತಮೆ ಮೇನಕೆಯರನ್ನು ನಾಚಿಸುವ ಪ್ರೇಮ ಸುಂದರಿಯ ಪ್ರೇಮಕ್ಕೆ ಕ್ಷಣ ಕ್ಷಣ ಮೈ ಮರೆತ್ತಿದ್ದೆ. ನಾಚಿಕೆಯಿಂದ ಓರೆ ಕಣ್ಣಲ್ಲಿ ನೋಡುತ್ತಿದ್ದ ವಾರೆ ನೋಟದ ಒಲವಿಗೆ ಹ್ಯಾಟ್ಸಪ್ ಹೇಳಿಯಾಗಿತ್ತು.
ಅಪರೂಪಕ್ಕೆ ಸಿಕ್ಕ ಅಪರೂಪದ ಸುಂದರಿಯ ಸೌಂದರ್ಯ ರಾಶಿಯನ್ನು ಕಣ್ತುಂಬಿಸಿಕೊಳ್ಳುತ್ತ ಕಣ್ಣಲ್ಲೇ ನಿನ್ನ ರೂಪವನ್ನು ಸ್ಕ್ಯಾನ್ ಮಾಡುತ್ತಿದ್ದೆ. ಅಂಗ ಸೌಷ್ಟವ ಎದ್ದು ಕಾಣುತ್ತಿತ್ತು. ಅಂದು ನೀನು ಹಾಕಿಕೊಂಡ ನೆಟ್ ಡ್ರೆಸ್ನಲ್ಲಿ ಕ್ಲಾಸಿ ಆಗಿ ಕಾಣುತ್ತಿದ್ದೆ. ಯಾವುದೇ ಟ್ರೆಂಡ್ ಡ್ರೆಸ್ಗೂ ಒಪ್ಪುವಂಥ ಮೈಮಾಟ ನಿನ್ನದು. ಅದರಲ್ಲಿ ನೀನು ಸ್ಲಿಮ್ ಮತ್ತು ಫಿಟ್ ಆಗಿ ಕಣ್ಮನ ಸೆಳೆಯುತ್ತಿದ್ದೆ.
ಆಗ ನನ್ನ ದೃಷ್ಟಿ ನಿನ್ನ ಬೆಳ್ಳನೆಯ ನಡುವಿನ ಮೇಲಿದ್ದ ಕಪ್ಪು ಮಚ್ಚೆಯ ಮೇಲೆ ಬಿತ್ತು. ಆ ಮಚ್ಚೆ ನಗುತ್ತ ನನ್ನನ್ನು ಶೃಂಗಾರ ಮಂಚಕೆ ಬಾ ಎಂದು ಕರೆದಂತಿತ್ತು. ನಡುವನ್ನು ನಯವಾಗಿ ಸವರಿ ನಡುವಿನ ನಡುವಿರುವ ಕಪ್ಪು ಮಚ್ಚೆಗೆ ಮೆತ್ತಗೆ ಮುತ್ತಿಡು ಎಂದು ಮನಸ್ಸು ಒತ್ತಾಯಿಸುತ್ತಿತ್ತು. ಮೆಲ್ಲ ಮೆಲ್ಲನೆ ಸರಸದಾಟಕೆ ತೆರೆದುಕೊಳ್ಳಲು ಹಾತೊರೆಯುತ್ತಿತ್ತು.. ಈ ನಡುವೆ ಮನಸ್ಸು, ‘ಗುಲಾಬಿ ರಂಗಿನ ಕೆನ್ನೆಗೆ, ಗಿಳಿ ನಾಸಿಕಕೆ. ಫಳ ಫಳನೆ ಹೊಳೆಯುವ ಕೆಂದುಟಿಗಳಿಗೆ ಮುತ್ತಿನ ಮುದ್ರೆಯನೊತ್ತದೆ ಇರಲಾರೆ. ಮಧುರ ಪ್ರೀತಿಯ ಗಾಳಕೆ ಬೀಳದಿರಲಾರೆ. ಶೃಂಗಾರ ಸುಗ್ಗಿಯ ಸಗ್ಗದ ಪ್ರೇಮಾಂಬರಿ’ ಎಂದು ಕವಿತೆ ಗೀಚದಿರಲಾರೆ ಎಂದೆಲ್ಲ ಯೋಚಿಸತೊಡಗಿತ್ತು. ಬೊಗಸೆಯಲ್ಲಿ ಅಂದದ ಮುಖ ಹಿಡಿದು ಲೆಕ್ಕವಿಡಲು ಆಗದಷ್ಟು ಮುತ್ತುಗಳನ್ನು ಮೊಗೆ ಮೊಗೆದು ಕೊಡಬೇಕು ಎನಿಸಿತು. ಸದಾ ನಿನ್ನ ತೋಳ ತೆಕ್ಕೆಯಲ್ಲಿ ಬಂಧಿಯಾಗಿ ಪ್ರೇಮದ ಮಳೆ ಸುರಿಸುವುದನ್ನು ಮನದಲ್ಲಿ ನೆನೆದು ಮೈ ಬೆಚ್ಚಗಾಗಿತ್ತು.
ತಟ್ಟನೆ ನೀನು ನನ್ನ ಒರಟಾದ ಕೈಯನ್ನು ಮೃದುವಾಗಿ ಅಮುಕಿ ಆರಡಿ ಕಟ್ಟುಮಸ್ತಾದ ವ್ಯಕ್ತಿ ಬಿಳಿ ಬಣ್ಣದ ಶರ್ಟ್, ಸ್ಲಿಮ್ ಫಿಟ್ ಬ್ಲೂ ಜೀನ್ಸ್, ಕ್ಲಾಸಿಕ್ ವೈಟ್ ಸ್ನೀರ್ಸ್ನಲ್ಲಿ ಫುಲ್ ಆ್ಯಟಿಟ್ಯುಡ್ನಿಂದ ನಡೆದು ಬರುತ್ತಿದ್ದರೆ ‘ವಾವ್! ಒಳ್ಳೆ ಹಿರೋ ತರ ಕಾಣಸ್ತಾನೆ ಕಣೋ’ ಎಂದು ಹುಡುಗಿಯರು ನಿನ್ನ ನೋಡಿ ಗುಸುಗುಸು ಪಿಸುಪಿಸು ಮಾತನಾಡುತ್ತಿದ್ದರು ಅಂತ ಹೇಳಿದಾಗ ನಿನಗೆ ಹೇಗೆ ಕಾಣಸ್ತಿದಿನಿ ಅಂದೆ. ಅದಕ್ಕೆ ಹೀರೋ ತರ ಏನು ನೀನು ಹೀರೋನೆ ಎಂದು ಗಲ್ಲ ಹಿಂಡಿದೆ. ನಾಳೆ ಸಿದ್ಧ ಪಡಿಸಿದ ಭಾಷಣ ಸ್ಪರ್ಧೆ ಇದೆಯಲ್ಲ ಅದಕ್ಕೆ ರೆಡಿಯಾಗಿದ್ದಿನಿ. ನಾಳೆ ಭೇಟಿಯಾಗುವಾ ಎಂದು ನಗೆ ಚೆಲ್ಲಿ ಕೈ ಬೀಸುತ್ತ ಬೈಕ್ ಏರಿದೆ. ಮರುದಿನ ನಿನ್ನ ಭಾಷಣ ಎಲ್ಲ ಹುಡುಗ ಹುಡುಗಿಯರನ್ನೂ ವಾಸ್ತವ ಲೋಕಕ್ಕೆ ತಂದಿಳಿಸಿತ್ತು.

ಪ್ರೀತಿ ಅನ್ನೋದು ಅತ್ಯಂತ ಪವಿತ್ರ ಭಾವ. ಈ ಹದಿಹರೆಯದ ವಯಸ್ಸಿನ ಪ್ರೀತಿಯಲ್ಲಿ ಮಾಡಿದ್ದೆಲ್ಲ ಮಜಾ ಅನಿಸುವುದು. ಅದೊಂದು ಆಟ ಅನಿಸುವುದು. ಆದರೆ ವಿವಾಹ ಅನ್ನೋದು ಮಕ್ಕಳಾಟವಲ್ಲ. ಕಣ್ಮುಚ್ಚಿ ಆಡುವ ಜೂಜಾಟವೂ ಅಲ್ಲ. ಪ್ರೀತಿಯ ಗಲ್ಲಿಯಲ್ಲಿ ಇರುವಾಗ ಕೋಪವೂ ಖುಷಿ ನೀಡುವುದು ನಗು ತರಿಸುವುದು. ‘ಈಗ ನನಗೆ ನೀನು ನಿನಗೆ ನಾನು ನಾವಿಬ್ಬರೇ ಜಗತ್ತು.’ ನಮ್ಮಿಬ್ಬರ ನಡುವೆ ಯಾರೆಂದರೆ ಯಾರೂ ಬೇಡ. ಕುಟುಂಬ ಸಮಾಜ ಮುಳ್ಳುಗಳಂತೆ ಭಾಸವಾಗುತ್ತವೆ. ಹಣ ಭವಿಷ್ಯ ಎಲ್ಲ ನಗಣ್ಯವೆನಿಸುತ್ತದೆ. ಎಂಥ ದೊಡ್ಡ ಗುಡ್ಡವನ್ನಾದರೂ ನಿನಗಾಗಿ ಕುಟ್ಟಿ ಪುಡಿ ಮಾಡುವೆ. ನಿನಗಾಗಿ ನನ್ನವರನ್ನೆಲ್ಲ ತೊರೆದು ಬರುವೆ ಎಂದೆಲ್ಲ ಆಣೆ ಪ್ರಮಾಣಗಳು ಸಾಮಾನ್ಯವಾಗಿ ನಡದೇ ಇರುತ್ತವೆ. ಫೋನ್ ಕರೆ ಬಾರದಿದ್ದರೆ ಮೆಸೇಜ್ ಬಾರದಿದ್ದರೆ ಆಕಾಶವೇ ಮೈಮೇಲೆ ಬಿದ್ದಂತಾಗುತ್ತದೆ. ಒಬ್ಬರನ್ನೊಬ್ಬರು ಭೇಟಿಯಾಗಲು ಕಾಯುತ್ತಿರುತ್ತವೆ ಯುವ ಮನಸ್ಸುಗಳು. ಪ್ರೀತಿಯೆಂದರೆ ದೈಹಿಕ ಆಕರ್ಷಣೆಯಲ್ಲ. ಅದು ಹಗಲುಗನಸು ಅಲ್ಲ.

ಪ್ರೀತಿ ಎಂಬುದು ಬರಿ ಕನಸಾಗಿ ಉಳಿಯಬಾರದು. ಅದು ವಾಸ್ತವದಲ್ಲಿ ವಿವಾಹ ಬಂಧನದಲ್ಲಿ ವಾಸ್ತವ ನೆಲದ ಮೇಲೆ ಕಾಲೂರಬೇಕು. ಆಗಲೇ ಅದರ ಸಿಹಿ ಕಹಿ ಗೊತ್ತಾಗೋದು. ಇಲ್ಲಿಯವರೆಗೆ ಒಬ್ಬರಿಗೊಬ್ಬರು ಜಗತ್ತಾಗಿದ್ದ ಬದುಕಿನಲ್ಲಿ ನಿಜವಾದ ಜಗತ್ತಿನ ಪ್ರವೇಶವಾದಾಗ ಹೊಸ ಜಗತ್ತಿನಲ್ಲಿ ಪ್ರೀತಿ ಕಡಿಮೆ ಆಗುವುದಿಲ್ಲ. ಆದರೆ ಜವಾಬ್ದಾರಿಗಳ ಮೂಟೆಯ ಭಾರ ಹೆಚ್ಚಾಗುತ್ತದೆ ಆಗ ಮೊದಲೆಲ್ಲ ಒಂದು ನಗುವಿಗಾಗಿ ಹಿಂದೆ ಬೀಳುತ್ತಿದ್ದವನು/ಳು ಈಗೀಗ ಹೀಗೇಕೆ ಯಾವುದಕ್ಕೂ ಸಮಯವಿಲ್ಲ, ಸಣ್ಣಪುಟ್ಟ ವಿಷಯಕ್ಕೂ ಮುನಿಸು, ಎಂದು ಮನಸ್ಸು ಕೊರಗುತ್ತದೆ. ಜೊತೆಗೆ ನಿಲ್ಲಬೇಕಿದ್ದ ಇಬ್ಬರ ಕುಟುಂಬಗಳು ಎದುರಿಗೆ ನಿಲ್ಲುತ್ತವೆ ಚೂರಿ ತರ ಇರಿಯುತ್ತವೆ. ನಿಜ ಪ್ರೀತಿಯ ಪರೀಕ್ಷೆ ಆಗ ಆಗುತ್ತದೆ.. ಆ ಪರೀಕ್ಷೆಯಲ್ಲಿ ಗೆಲ್ಲಬೇಕು. ‘ನಾನು ಬದಲಾಗುವೆ ನೀನು ಬದಲಾಗು’ ಅಂತ ಆಣೆ ಮಾಡಿಕೊಂಡು ಬದುಕಿದರೆ ವಾಸ್ತವದ ಬದುಕಿನಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ.
ತಂದೆ ತಾಯಿಯ ಆಶೀರ್ವಾದವಿಲ್ಲದ ಮದುವೆ ಸಂತೋಷ ತಾರದು. ನಾವು ನೆಮ್ಮದಿಯಿಂದ ಇದ್ದೇವೆ ಎಂದು ಪ್ರೇಮದ ಹಕ್ಕಿಗಳು ಹೇಳುತ್ತಿದ್ದರೂ ಮನೆಯವರು ನಮ್ಮೊಂದಿಗಿಲ್ಲ ಎಂಬ ಕೊರಗು ಮನದ ಮೂಲೆಯಲ್ಲಿ ಸದಾ ಕೊರೆಯುತ್ತಿರುತ್ತದೆ. ಹಬ್ಬ ಹರಿದಿನಗಳಲ್ಲಿ ಮನೆಗೆ ಪ್ರೇಮ ವಿವಾಹದ ದಂಪತಿಗಳ ಆಗಮನ ನಿಷಿದ್ಧ. ತಮ್ಮ ಮನೆಯಲ್ಲಿ ಪೂಜಾ ಕಾರ್ಯಗಳಿಗೆ ಮನೆಯವರು ತಮ್ಮೊಂದಿಗಿಲ್ಲ ಎಂಬ ಕೊರತೆ ಪ್ರೇಮಿಗಳಿಗೆ ಕಾಡುತ್ತದೆ. ಇಷ್ಟೇ ಅಲ್ಲ ಹಣಕಾಸಿನ ಜಗಳ ಪ್ರೀತಿಯ ಬುನಾದಿಯನ್ನೇ ಅಲುಗಾಡಿಸುತ್ತದೆ. ಅದಕ್ಕೆ ಇಬ್ಬರೂ ಒಳ್ಳೆಯ ಕೆಲಸವನ್ನು ತಮ್ಮದಾಗಿಸಿಕೊಳ್ಳಬೇಕು. ಹೀಗಾಗಿ ಅಧ್ಯಯನದಲ್ಲಿ ನಿರತರಾಗಬೇಕು. ಈಗ ಪ್ರೀತಿ ಇದ್ದರೆ ಸಾಕು ಆದರೆ ಮದುವೆ ಆದ ಮೇಲೆ ಹೊಂದಾಣಿಕೆ ತ್ಯಾಗ ಕ್ಷಮೆಯೆಲ್ಲ ಇರದಿದ್ದರೆ ಸಂಸಾರ ಸಸಾರವಾಗಿ ನಡೆಯಲ್ಲ. ಎಂದೆಲ್ಲ ಹೇಳಿ ನನ್ನ ಕಣ್ಣು ತೆರೆಸಿದ್ದೆ.
ನನಗೆ ತಂದೆ ತಾಯಿಯೇ ಎಲ್ಲ ನಿನಗೂ ಕೂಡ ಅಂತ ಗೊತ್ತು ಅದಕ್ಕೆ ಅವರ ಒಪ್ಪಿಗೆ ಪಡದೆ ಅಪ್ಪುಗೆಗೆ ಸಿದ್ಧರಾಗಿ, ಕುತ್ತಿಗೆಗೆ ಮೂರು ಗಂಟು ಹಾಕಿ, ಹಣೆಗೆ ಸಿಂಧೂರವಿಟ್ಟು, ಕಾಲುಂಗುರ ತೊಡಿಸಿರುವೆ. ಧೀರ್ಘ ಕಾಲದ ಬೇಸಿಗೆ ಮುಗಿದು ಚಳಿಗಾಲ ಶುರುವಾಗಿದೆ. ಎದೆಯೊಳಗೆ ಪ್ರೀತಿಯ ಕಾವನ್ನು ಹೆಚ್ಚಿಸುತ್ತಿವೆ. ತಂಗಾಳಿಯೂ ನಿನ್ನ ಮುತ್ತಿನಂತೆ ಕಚಗುಳಿ ಇಡುತ್ತಿದೆ. ನಡುಗುವ ಚಳಿಯಲ್ಲಿ ಚಳಿಗೆ ಅಂಜಿ ನಿನ್ನಪ್ಪಿಕೊಂಡು ನಡುವಿನ ನಡುವಿರುವ ಮಚ್ಚೆಗೆ ಮುತ್ತಿಡುತ ಪ್ರೀತಿಯಲ್ಲಿ ಕರಗುವ ಸುಂದರ ಕಾಲ ಸನ್ನಿಹಿತವಾಗಿದೆ. ಪ್ರತಿ ಋತುವಿನಲ್ಲೂ ಪ್ರಥಮ ರಾತ್ರಿಯ ಪ್ರೀತಿಯ ಸುರಿಮಳೆ ಸುರಿದಾಗ ನನ್ನ ಪ್ರೇಮ ಲೋಕವೇ ರಂಗಾಗುತ್ತದೆ. ರಂಗುರಂಗಿನ ರಂಗಿನಾಟಕೆ ತುದಿಗಾಲಲ್ಲಿ ಕಾಯುತ್ತಿರುವೆ.
ಇಂತಿ ನಿನ್ನ ಪ್ರೀತಿಯ ಪೆದ್ದು


