ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನಿಗೆ ದೊಡ್ಡ ಭತ್ತದ ಗದ್ದೆಯಿತ್ತು. ಆ ಗದ್ದೆಯಲ್ಲಿ ಒಂದು ಗುಬ್ಬಚ್ಚಿ ತನ್ನ ಮರಿಗಳೊಂದಿಗೆ ಗೂಡು ಕಟ್ಟಿ ವಾಸಿಸುತ್ತಿತ್ತು. ಕೆಲವು ದಿನಗಳ ನಂತರ ಗದ್ದೆಯಲ್ಲಿನ ಭತ್ತದ ಬೆಳೆ ಸಂಪೂರ್ಣವಾಗಿ ಕಟಾವಿಗೆ ಬಂದಿತು. ಒಂದು ದಿನ ರೈತ ಗದ್ದೆಯ ಬಳೆ ಬಂದು ‘ಬೆಳೆ ಚೆನ್ನಾಗಿ ಬಂದಿದೆ. ನಾಳೆ ನನ್ನ ನೆರೆಹೊರೆಯವರನ್ನು ಕರೆದು ಬೆಳೆ ಕಟಾವು ಮಾಡಲು ಹೇಳುತ್ತೇನೆ.’ ಎಂದ. ಇದನ್ನು ಕೇಳಿದ ಮರಿ ಗುಬ್ಬಚ್ಚಿಗಳು ಹೆದರಿ,’ ತಾಯಿ ಗುಬ್ಬಚ್ಚಿ ಬಂದ ತಕ್ಷಣ ‘ಅಮ್ಮಾ ನಾಳೆ ರೈತ ತನ್ನ ನೆರೆಹೊರೆಯವರನ್ನು ಕರೆದುಕೊಂಡು ಬಂದು ಬೆಳೆ ಕಟಾವು ಮಾಡಿಸುತ್ತಾನಂತೆ ನಾವು ಬೇರೆ ಕಡೆಹೋಗೋಣ’ ಎಂದವು. ಅದಕ್ಕೆ ತಾಯಿ ಗುಬ್ಬಚ್ಚಿ, ವiಕ್ಕಳೆ, ಹೆದರಬೇಡಿ ನಾಳೆ ಕಟಾವು ಆಗುವುದಿಲ್ಲ.’ ಎಂದಿತು. ತಾಯಿ ಹೇಳಿದಂತೆಯೇ ಮರುದಿನ ಬೆಳೆ ಕಟಾವು ಆಗಲಿಲ್ಲ. ಕೆಲವು ದಿನಗಳ ನಂತರ ರೈತ ಮತ್ತೆ ಬಂದು, ‘ನೆರೆಹೊರೆಯವರು ಬರಲಿಲ್ಲ. ನಾಳೆ ನನ್ನ ಮಕ್ಕಳನ್ನು ಕರೆದುಕೊಂಡು ಬಂದು ಕಟಾವು ಮಾಡಿಸುತ್ತೇನೆ.’ ಎಂದನು ಮರಿಗಳು ಮತ್ತೆ ಹೆದರಿ ತಾಯಿ ಗುಬ್ಬಚ್ಚಿಗೆ ಹೇಳಿದಾಗ ನಾಳೆಯೂ ಬೆಳೆ ಕಟಾವು ಆಗುವುದಿಲ್ಲ., ಧೈರ್ಯದಿಂದಿರಿ.’ ಎಂದಿತು. ತಾಯಿ ಗುಬ್ಬಚ್ಚಿ ಹೇಳಿದಂತೆ ಮರುದಿನವೂ ಕಟಾವು ಆಗುವುದಿಲ್ಲ.
ಕೊನೆಗೆ ಒಂದು ದಿನ ರೈತ ಗದ್ದೆಗೆ ಬಂದು ಬೇಸರದಿಂದ, ‘ಬೇರೆಯವರನ್ನು ನಂಬಿ ಪ್ರಯೋಜನವಿಲ್ಲ. ನನ್ನ ಕೆಲಸವನ್ನು ನಾನೇ ಮಾಡಬೇಕು. ನಾಳೆ ಬೆಳಗ್ಗೆ ನಾನೇ ಬಂದು ಕಟಾವು ಮಾಡಲು ಶುರು ಮಾಡುತ್ತೇನೆ’ ಎಂದು ನಿರ್ಧರಿಸುತ್ತಾನೆ. ಇದನ್ನು ಕೇಳಿದ ತಾಯಿ ಗುಬ್ಬಚ್ಚಿ ಮರಿಗಳೆಗೆ ಹೇಳಿತು, ‘ಮಕ್ಕಳೇ, ಈಗ ನಾವು ಗೂಡನ್ನು ಬಿಡಬೇಕಾದ ಸಮಯ ಬಂದಿದೆ.’ ಆಗ ಮರಿ ಗುಬ್ಬಚ್ಚಿಗಳು ನಾಳೆ ಬೆಳೆ ಕಟಾವು ಆಗುತ್ತದೆಂದು ಅದ್ಹೇಗೆ ಖಚಿತವಾಗಿ ಹೇಳುತ್ತಿಯಮ್ಮ ಎಂದು ಕೇಳಿದವು.ಅದಕ್ಕೆ ತಾಯಿಗುಬ್ಬಚ್ಚಿ ಹೇಳಿತು,’ ಏಕೆಂದರೆ ರೈತ ಈಗ ತನ್ನ ಕೆಲಸವನ್ನು ತಾನೇ ಮಾಡಲು ನಿರ್ಧರಿಸಿದ್ದಾನೆ. ಹಾಗಾಗಿ ನಾಳೆ ಖಂಡಿತ ಕಟಾವು ನಡೆಯುತ್ತದೆ. ಎಂದು ಉತ್ತರಿಸಿತು. ಮರುದಿನ ಬೆಳಗ್ಗೆ ರೈತನೇ ಬಂದು ಕಟಾವು ಪ್ರಾರಂಭಿಸಿದ. ಅಷ್ಟರಲ್ಲಿ ಗುಬ್ಬಚ್ಚಿಗಳು ಸುರಕ್ಷಿತವಾಗಿ ಬೇರೆಡೆಗೆ ಹಾರಿ ಹೋಗಿದ್ದವು.
ಈ ಕಥೆಯ ಸಂದೇಶ: ನಾವು ನಮ್ಮ ಕೆಲಸಕ್ಕಾಗಿ ಯಾವಾಗಲೂ ಬೇರೆಯವರ ಮೇಲೆ ಅವಲಂಬಿತರಾಗಬಾರದು. ನಮ್ಮ ಕೆಲಸವನ್ನು ನಾವೇ ಜವಾಬ್ದಾರಿಯಿಂದ ಮಾಡಿದಾಗ ಮಾತ್ರ ಅದು ಯಶಸ್ವಿಯಾಗುತ್ತದೆ. ಸ್ವಾವಲಂಬನೆಯೇ ಯಶಸ್ಸಿನ ಮೂಲ.

ರಿಮೋಟ್
ನಮ್ಮ ಬದುಕಿನ ರಿಮೋಟ್ ನಮ್ಮ ಹತ್ತಿರವಿದ್ದರೆ ನಾವಂದುಕೊಂಡಿದ್ದನ್ನು ನಾವು ಸಾಧಿಸಬಹುದು. ಅಂದರೆ,ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ನಮ್ಮ ಬುದ್ಧಿ ಮತ್ತು ಶಕ್ತಿಯ ಮೇಲೆ ನಾವು ನಂಬಿಕೆಯನ್ನು ಇಡುವುದು. ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಾವು ನಮ್ಮ ಜವಾಬ್ದಾರಿಗಳಿಗೆ ಕರ್ತವ್ಯಗಳಿಗೆ ಅಗತ್ಯಗಳಿಗೆ ಇತರರ ಮೇಲೆ ಅವಲಂಬಿತರಾದರೆ ಬದುಕು ದುಃಖದ ಸಾಗರದಲ್ಲಿ ಮುಳುಗಿಹೋಗುತ್ತದೆ. ಆದ್ದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇರೆಯವರ ಮೇಲೆ ಅವಲಂಬಿತರಾಗುವುದು ಸೋಲಿನ ಸುಳಿಯಲ್ಲಿ ಬೀಳುವಂತೆ ಮಾಡುತ್ತದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಯೊಬ್ಬರಿಗೂ ಸ್ವಾವಲಂಬನೆ ಅತ್ಯಗತ್ಯ. ‘ನಮ್ಮ ಕೈಯೇ ನಮಗೆ ಕನ್ನಡಿ.’ ಎಂಬ ಗಾದೆ ಮಾತು ಸ್ವಾವಲಂಬನೆಯ ಮಹತ್ವವನ್ನು ಸಾರಿ ಹೇಳುತ್ತದೆ. ‘ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸ್ವತಂತ್ರ ನಿರ್ಧಾರಗಲನ್ನು ತೆಗೆದುಕೊಳ್ಳುವ ಸಾಮರ್ಥ್ಯವೇ ಸ್ವಾವಲಂಬನೆ.’
ಹಾಗಾದರೆ ಸ್ವಾವಲಂಬನೆ ಸಾಧಿಸಲು ಇರುವ ತಂತ್ರಗಳಾವವು ಎಂಬ ಪ್ರಶ್ನೆಗೆ ಇಲ್ಲಿವೆ ಕೆಲವು ಸಲಹೆಗಳು
ಸ್ವತಂತ್ರ ನಿರ್ಧಾರ
ಹಲವರ ಮಾತುಗಳನ್ನು ಕೇಳು, ಕೊನೆಗೆ ನಿನ್ನ ಸ್ವಂತ ನಿರ್ಧಾರ ತೆಗೆದುಕೊ. ಬೇರೆಯವರು ಬಂದು ಕೈಹಿಡಿಯುತ್ತಾರೆ ನಮ್ಮ ಬದುಕಿನ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ಕುಳಿತುಕೊಳ್ಳುವುದು ಮೂರ್ಖತನವೇ ಸರಿ. ಬೇರೆಯವರ ಕೈಗೊಂಬೆಯಾಗಿ ಬದುಕುವ ದುಸ್ಥಿತಿಯನ್ನು ತಂದುಕೊಳ್ಳಬಾರದು. ಇತರರ ಆಲೋಚನೆಗೆ ಗುಲಾಮನಾಗುವುದಕ್ಕಿಂತ, ಸ್ವಂತ ನಿರ್ಧಾರಗಳೊಂದಿಗೆ ರಾಜನಾಗಿ ಬದುಕುವುದು ಲೇಸು. ನಿಮ್ಮ ಜೀವನದ ಹಡಗಿಗೆ ನೀವೇ ನಾವಿಕರಾಗಿ; ನಿರ್ಧಾರಗಳು ನಿಮ್ಮದಾಗಿದ್ದಾಗ ಮಾತ್ರ ತಲುಪುವ ದಾರಿಯೂ ಸ್ಪಷ್ಟವಾಗಿರುತ್ತದೆ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವವನಿಗೆ ಅದೃಷ್ಟವೂ ತಲೆಬಾಗುತ್ತದೆ.

ಸ್ವಂತ ಪ್ರಯತ್ನ
‘ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್’ ಎಂಬ ಭಗವದ್ಗೀತೆಯ ನುಡಿಯು (ನಿನ್ನನ್ನು ನೀನೇ ಉದ್ಧಾರ ಮಾಡಿಕೊಳ್ಳಬೇಕು. ನಿನ್ನನ್ನು ನೀನೇ ಕುಗ್ಗಿಸಿಕೊಳ್ಳಬಾರದು) ನಮ್ಮ ಉದ್ಧಾರ ನಮ್ಮ ಕೈಯಲ್ಲೇ ಇದೆ. ನಮ್ಮ ಯಶಸ್ಸಿಗೆ ಬೇರೆ ಯಾರೂ ಪ್ರಯತ್ನ ಪಡುವುದಿಲ್ಲ. ಅದಕ್ಕೆ ನಾವೇ ಸ್ವತಃ ಪ್ರಯತ್ನಿಸಬೇಕು. ಯಾರೋ ಬಂದು ನನ್ನ ಬದುಕನ್ನು ಸುಧಾರಿಸುತ್ತಾರೆಂದು ನಂಬಿ ಕುಳಿತುಕೊಳ್ಳುವುದು ಶುದ್ಧ ಮೂರ್ಖತನ. ಇದುವರೆಗೂ ಯಾರೂ ಬೇರೆಯವರ ಹೆಗಲ ಮೇಲೆ ಕುಳಿತು ಸಾಧನೆಯ ಶಿಖರವನ್ನು ಏರಲು ಸಾಧ್ಯವಾಗಿಲ್ಲ. ತನ್ನ ಕಾಲ ಮೇಲೆ ನಿಂತು ಮುನ್ನಡೆಯುವವನು ಮಾತ್ರ ಶ್ರೇಷ್ಠ ಸಾಧಕನಾಗಲು ಸಾಧ್ಯ. ಸ್ವಂತ ಪ್ರಯತ್ನದಿಂದ ಒಂದು ಸಣ್ಣ ಕೆಲಸ ಯಶಸ್ವಿಯಾದರೂ ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಆ ವಿಶ್ವಾಸವೇ ಮುಂದೆ ದೊಡ್ಡ ಗೆಲವುಗಳಿಗೆ ಪ್ರೇರಣೆಯಾಗುತ್ತದೆ. ಸ್ವ ಪ್ರಯತ್ನದಿಂದ ಗೆಲುವು ಸಿಕ್ಕಾಗ ಸಿಗುವ ಸಂತೋಷ ಅಪಾರ. ಸ್ವ ಪ್ರಯತ್ನದಿಂದ ಸೋತರೂ ನಷ್ಟವೇನಿಲ್ಲ. ಅದು ಚೆಂದದ ಅನುಭವವನ್ನು ನೀಡುತ್ತದೆ. ಸೋಲಿಗೆ ಹೆದರದೆ ಮತ್ತೊಮ್ಮೆ ಪ್ರಯತ್ನಿಸುವ ಛಲ ಬೆಳೆಸುತ್ತದೆ. ಅದರೊಂದಿಗೆ ಧೈರ್ಯದ ಪಾಠವನ್ನು ಕಲಿಸುತ್ತದೆ. ಸ್ವಪ್ರಯತ್ನದ ಹಾದಿಯಲ್ಲಿ ನಡೆದರೆ ಬದುಕು ಅರಳುತ್ತದೆ.
ಸಮಯ ಪ್ರಜ್ಞೆ
ಹೋದ ಹಕ್ಕಿ ಮರಳಿ ಬಂದೀತು ಗೂಡಿಗೆ ಕಳೆದ ಸಮಯ ಮರಳಿ ಬಾರದು ಬಾಳಿಗೆ. ಸಮಯ ಪ್ರಜ್ಞೆಯುಳ್ಳವನೇ ಜಾಣನು. ಅವನೇ ಜಗವ ಗೆಲ್ಲುವ ಸಾಧಕನು. ಸಮಯದ ಬೆಲೆಯನ್ನು ಅರಿತು ನಡೆದರೆ ಯಶಸ್ಸು ನಿನ್ನ ಪಾದದಡಿ ನೋಡಿ ಎಂಬ ನುಡಿಗಳನ್ನು ನಡೆಯಲ್ಲಿ ಅಳವಡಿಸಿಕೊಳ್ಳಬೇಕು. ಪರಾವಲಂಬಿಗಳಾದರೆ ಸದಾ ಇತರರ ಸಹಾಯಕ್ಕಾಗಿ ಕಾಯುತ್ತ ಅಮೂಲ್ಯವಾದ ಸಮಯ ವ್ಯರ್ಥ ಮಾಡುತ್ತೇವೆ. ಆದರೆ ಸ್ವಾವಲಂಬಿ ವ್ಯಕ್ತಿ ತನ್ನ ಕೆಲಸವನ್ನು ತಾನೇ ಪ್ರಾರಂಭಿಸುವುದರಿಂದ ಸಮಯ ಉಳಿಯುತ್ತದೆ. ಬೇರೆಯವರಿಗೆ ಕಾಯದೆ ಸಕಾಲದಲ್ಲಿ ಕಾರ್ಯಪ್ರವೃತ್ತರಾದರೆ ಕೆಲಸಗಳ ಗುಣಮಟ್ಟವು ಚೆನ್ನಾಗಿರುತ್ತದೆ. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತವೆ.
ಸಾಮರ್ಥ್ಯ
ದೈನಂದಿನ ಅಗತ್ಯಗಳಿಗಾಗಿ ಆರ್ಥಿಕ ಅವಶ್ಯಕತೆಗಳಿಗಾಗಿ ಬೇರೆಯವರ ಮುಖ ನೋಡದೇ ಸ್ವ ಸಾಮರ್ಥ್ಯದಿಂದ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಲಿಯಬೇಕು. ಸಾಮರ್ಥ್ಯ ಕೇವಲ ದೈಹಿಕ ಕೆಲಸಗಳಿಗೆ ಪರಿಶ್ರಮಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾನಸಿಕವಾಗಿ ದೃಢವಾಗಿರುವುದು ಮತ್ತು ಸ್ವತಂತ್ರವಾಗಿ ಆಲೋಚಿಸುವುದನ್ನು ಕೂಡ ಒಳಗೊಂಡಿದೆ ಎಂಬುದನ್ನು ತಿಳಿಯಬೇಕು. ಸರಿ ತಪ್ಪುಗಳನ್ನು ವಿವೇಚಿಸಿ, ಬೇರೆಯವರ ಪ್ರಭಾವಕ್ಕೆ ಒಳಗಾಗದೆ, ಇಲ್ಲವೇ ಒತ್ತಡಕ್ಕೆ ಮಣಿಯದೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕಷ್ಟದ ಸಂದರ್ಭದಲ್ಲಿ ಬೇರೆಯವರ ಸಹಾಯಕ್ಕಾಗಿ ಕಾಯದೆ ನಮ್ಮ ಹಾದಿಯನ್ನು ನಾವೇ ಹುಡುಕಿಕೊಳ್ಳಬೇಕೆ ವಿನಃ ಬೇರೆಯವರನ್ನು ದೂಷಿಸುತ್ತ ಕಾಲ ಕಳೆಯಬಾರದು. ಸಾಮರ್ಥ್ಯವು ಸಾಮಾನ್ಯ ವ್ಯಕ್ತಿಯನ್ನು ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.
ಮಂತ್ರ
ಬೇರೆಯವರನ್ನು ಅವಲಂಬಿಸಿದವರಿಗೆ ಗೌರವ ಸಿಗುವುದು ಕಷ್ಟ. ಸ್ವಂತ ಕಾಲಿನ ಮೇಲೆ ನಿಂತು ಸಾಧನೆ ಮಾಡಿದ ವ್ಯಕ್ತಿಯನ್ನು ಸಮಾಜ ಗೌರವಿಸುತ್ತದೆ. ಜಗತ್ತಿನ ಅಗ್ರ ಪಂಕ್ತಿಯಲ್ಲಿರುವ ಸಾಧಕರೆಲ್ಲ ಸ್ವಾವಲಂಬನೆಯ ದಾರಿಯಲ್ಲಿ ನಡೆದೆ ಯಶಸ್ಸಿನ ಶಿಖರವನ್ನು ಏರಿದರು. ಪರಾವಲಂಬನೆ ನಮ್ಮನ್ನು ದುರ್ಬಲರನ್ನಾಗಿಸುತ್ತದೆ. ಆದರೆ, ಸ್ವಾವಲಂಬನೆ ನಮ್ಮನ್ನು ಸಶಕ್ತರನ್ನಾಗಿಸುತ್ತದೆ.ನಮ್ಮ ಕಾಲಿನ ಮೇಲೆ ನಾವು ನಿಂತಾಗ ಮಾತ್ರ ಪ್ರಗತಿ ಸಾಧ್ಯ. ಸ್ವಾವಲಂನೆಯ ಮಂತ್ರವನ್ನು ಜೀವನದ ಮಂತ್ರವನ್ನಾಗಿಸಿಕೊಂಡರೆ ಬದುಕು ಗೆಲುವಿನತ್ತ ದಾಪುಗಾಲಿಡುತ್ತದೆ.


