ಇಂದು (ಮೇ.೦೧ ಶುಕ್ರವಾರ) “ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಮಾರ್ಟಿನ್ ಲೂಥರ್ ಕಿಂಗ್ ಅವರು, “ಮಾನವೀಯತೆಯನ್ನು ಹೆಚ್ಚಿಸುವ ಎಲ್ಲ ಕೆಲಸ-ಕಾರ್ಯಗಳು ಘನತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಅದನ್ನು ನಾವು ಶ್ರೇಷ್ಠವೆಂದೇ ಪರಿಗಣಿಸಬೇಕು” ಎಂದು ಹೇಳಿದ್ದಾರೆ.
ಕೆಲಸದಲ್ಲಿ ಸಣ್ಣದು ದೊಡ್ಡದು ಎಂಬುದಿಲ್ಲ. ಪ್ರತಿಯೊಂದು ಕೆಲಸವನ್ನು ಪ್ರೀತಿಸಿ, ಗೌರವಿಸಿ. ಕಾರಣ ನಮ್ಮ ಜೀವನ ಆರಂಭವಾಗುವುದು ಕೆಳಗಿನಿಂದಲೇ ಪ್ರಾರಂಭವಾಗುತ್ತದೆಯೇ ಹೊರತು, ಮೇಲಿನಿಂದಲ್ಲ. ಆದ್ದರಿಂದ ಎಲ್ಲ ಕೆಲಸವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಕಾರ್ಮಿಕ ವರ್ಗ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಬೇರುಗಳಿದ್ದಂತೆ. ಅದಕ್ಕಂತಲೇ ಕಾರ್ಮಿಕರನ್ನು ಮತ್ತು ಕಾರ್ಮಿಕ ವರ್ಗವನ್ನು ದೇಶದ ಪ್ರಬಲ ಶಕ್ತಿ ಎಂದು ಪರಿಗಣಿಸಲಾಗುತ್ತದೆ. ವಿಶ್ವದಾದ್ಯಂತ ಶ್ರಮಿಕ ವರ್ಗದ ಮಹತ್ವ, ಅಗತ್ಯತೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರದ ಕುರಿತು ಇಡೀ ಸಮಾಜಕ್ಕೆ ತಿಳಿಸಲು ಮತ್ತು ಅವರಿಗೂ ಸಾಮಾಜಿಕ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ೧ ರಂದು ಜಗತ್ತಿನಾದ್ಯಂತ “ಅಂತರಾಷ್ಟ್ರೀಯ ಕಾರ್ಮಿಕ ದಿನ” ವನ್ನು ಆಚರಿಸಲಾಗುತ್ತಿದೆ.

ಇತಿಹಾಸ
೧೮೮೬ ರಲ್ಲಿ ಅಮೇರಿಕಾ ದೇಶದಲ್ಲಿ ಕಾರ್ಮಿಕರಿಂದ ತಮ್ಮ ಕೆಲಸವನ್ನು ೮ ಗಂಟೆಗಳಿಗೆ ಮಾತ್ರ ಸಿಮೀತಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಬೃಹತ್ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು. ದೊಡ್ಡ ಮಟ್ಟದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅನೇಕ ಕಾರ್ಮಿಕರು ಗಾಯಗೊಂಡರು. ಇದಕ್ಕೆ ಹೇಮಾರ್ಕೆಟ್ ಅಫೇರ ಎಂತಲೂ ಕರೆಯುತ್ತಾರೆ. ಇದೇ ಮುಂದೆ ಅಂತರಾಷ್ಟ್ರೀಯ ಕಾರ್ಮಿಕ ದಿನದ ಆಚರಣೆಗೆ ನಾಂದಿಯಾಯಿತು. ಯುರೋಪಿನ ಹಲವು ಸಮಾಜವಾದಿ ಪಕ್ಷಗಳು ಸೇರಿ ಮೇ ೧ ರಂದು ಕಾರ್ಮಿಕ ದಿನವೆಂದು ಕರೆ ಕೊಟ್ಟವು. ಅಂದಿನಿಂದ ಪ್ರತಿವರ್ಷವು ಮೇ ೧ ರಂದು ಕಾರ್ಮಿಕ ಸಂಘಟನೆ, ಹೋರಾಟ, ಶ್ರಮಿಕ ವರ್ಗದ ಸೇವೆ ಮತ್ತು ದೇಶಕ್ಕಾಗಿ ದುಡಿಯುತ್ತಿರುವ ನಿಸ್ವಾರ್ಥ ಕಾರ್ಮಿಕರಿಗೊಂದು ಗೌರವ ಸೂಚಕವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
೨೦೨೬ ನೇಯ ವರ್ಷದ
ಘೋಷವಾಕ್ಯ
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಇತರ ರಾಷ್ಟ್ರೀಯ ಸಂಸ್ಥೆಗಳು ಈ ವರ್ಷದ ಕಾರ್ಮಿಕ ದಿನವನ್ನು ಸುಸ್ಥಿರ ಪರಿಸರ ಮತ್ತು ಹವಾಮಾನದ ಬದಲಾವಣೆಯ ಪ್ರಕ್ರಿಯೆಯಲ್ಲಿ ಕಾರ್ಮಿಕರು ತಮ್ಮ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕೆಂಬ ಧ್ಯೇಯವಾಕ್ಯದೊಂದಿಗೆ “ಕಾರ್ಮಿಕರ ಮಾನಸಿಕ ಯೋಗಕ್ಷೇಮ, ಸಾಮಾಜಿಕ ನ್ಯಾಯ ಮತ್ತು ಹವಾಮಾನ ಕ್ರಿಯೆ” ಎಂಬ ಘೋಷವಾಕ್ಯವನ್ನು ಹೊಂದಿದೆ. ಮಾನವನ ಸೃಜನಶೀಲತೆ ಮತ್ತು ಕಾರ್ಯನಿರ್ವಹಣೆಗೆ ಅನುಗುಣವಾಗಿ ನ್ಯಾಯಯುತ ವೇತನ ಮತ್ತು ಇನ್ನಿತರ ಕಾರ್ಮಿಕ ಕಲ್ಯಾಣ ಸೌಲಭ್ಯಗಳು ಸಿಗಬೇಕು. ಕಾರ್ಮಿಕರನ್ನು ಮಾಲಿಕರು ಅಥವಾ ಸಂಸ್ಥೆಯ ಆಸ್ತಿಯೆಂದು ಪರಿಗಣಿಸಿ ಅವರ ಕಷ್ಟ-ನಷ್ಟಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕೆನ್ನುವುದು ಈ ವರ್ಷದ ಆಚರಣೆಯ ಧ್ಯೇಯವಾಗಿದೆ.
ಆಚರಣೆಯ ಮಹತ್ವ

ಇಡೀ ಸಮಾಜ ಮತ್ತು ರಾಷ್ಟ್ರದ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಕೊಡುಗೆಗಳನ್ನು ಗುರುತಿಸಿ, ಗೌರವಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಮಿಕರ ಹಕ್ಕುಗಳು, ಸೇವೆಗೆ ತಕ್ಕ ಪ್ರತಿಫಲ, ಸಂಬಳ, ಕೆಲಸ ಮಾಡುವ ವೇಳೆ, ಕೆಲಸದಲ್ಲಿ ಎದುರಾಗುವ ತೊಂದರೆಗಳಿಂದ ಉಂಟಾಗುವ ಅನಾಹುತಗಳಿಂದ ರಕ್ಷಿಸಲು ಕಾರ್ಮಿಕ ಕಲ್ಯಾಣ ನಿಧಿ, ಪರಿಹಾರ ಹೀಗೆ ಹತ್ತು ಹಲವು ಸಮಸ್ಯೆಗಳಿಗೊಂಡು ಪರಿಹಾರ ಕಂಡುಕೊಂಡು ಆ ಕಾರ್ಮಿಕರು ಒತ್ತಡ ಮುಕ್ತ ಮತ್ತು ಕಾರ್ಯಕ್ಷಮೆಯೊಂದಿಗೆ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸಿ ಕೊಡುವುದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಕೊನೆಯ ನುಡಿ
ಕಾರ್ಮಿಕರು ಸಾಕಷ್ಟು ಶ್ರಮವಹಿಸಿ ದೇಶದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕಾರ್ಮಿಕರಿಗೆ ಇರುವ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವ ಮೂಲಕ ಅವರ ಶ್ರಮವನ್ನು ಗುರುತಿಸಿ, ಮಾಲೀಕರಿಂದ ಕಾರ್ಮಿಕರಿಗಾಗುವ ಶೋಷಣೆಯಿಂದ ಅಗತ್ಯ ರಕ್ಷಣೆ ನೀಡುವುದು. ಅವರಿಗೆ ಕೆಲಸ ವೇಳೆ, ಸ್ಥಳ, ಪರಿಸರ ಮತ್ತು ವೃತ್ತಿ ಜೀವನ ಮುನ್ನಡೆಸುವ ಗುರಿಯನ್ನು ಹೊಂದಿರುವ ಯೋಜನೆ ಮತ್ತು ಉಪಕ್ರಮಗಳನ್ನು ಉತ್ತೇಜಿಸುವ ಉದ್ಧೇಶವನ್ನು ಈ ದಿನದ ಆಚರಣೆಯಲ್ಲಿ ಅಡಗಿದೆ. ಪ್ರತಿಯೊಂದು ಕಂಪನಿ ಅಥವಾ ಉತ್ಪಾದನೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಮಾಲೀಕರೆಂದು ಕಾಣುವ ಭಾವ ನಮ್ಮಲ್ಲಿ ಬರಬೇಕು. ಕೆಲಸ ಮಾಡುವ ಸ್ಥಳ, ಪರಿಸರವು ಸ್ನೇಹಪರವಾದ ಸಂಬಂಧಗಳನ್ನು ಮತ್ತು ಕಾರ್ಮಿಕರು-ಮಾಲೀಕರ ಮಧ್ಯೆ ಅನ್ಯೋನ್ಯವಾದ ಅನುಬಂಧವನ್ನು ಮೂಡಿಸುವಂತಾಗಬೇಕು. ಅಂದಾಗ ಆ ಕಂಪನಿಯ ಶ್ರೇಯೋಭಿವೃದ್ಧಿಗೆ ಆ ಕಾರ್ಮಿಕರು ಶ್ರಮಿಸಬಲ್ಲರು. ಅದಕ್ಕಾಗಿ ಅಮೂಲ್ಯವಾಗಿರುವ ಮಾನವ ಸಂಪನ್ಮೂಲವನ್ನು ರಕ್ಷಿಸುವ, ಹಕ್ಕುಗಳು ಒದಗಿಸುವ, ಸೌಲಭ್ಯ ನೀಡುವ ಮತ್ತು ಅವರಲ್ಲಿ ಮಾನವ-ಮಾನವ ಸಂಬಂಧಗಳು ಗರಿಗೆದರುವ ಲಕ್ಷಣಗಳು ಕಾಣಸಿಗಬೇಕು. ಈ ದಿನವು ಕಾರ್ಮಿಕರ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಆಚರಿಸಲಾಗುತ್ತದೆ.


