ಉದಯರಶ್ಮಿ ದಿನಾಚರಣೆ
ವಿಜಯಪುರ: ಸಾಂಕ್ರಾಮಿಕ ರೋಗಗಳ ಹರಡುವಿಕೆ, ನಿಯಂತ್ರಣ ಮತ್ತು ಚಿಕಿತ್ಸೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಚನ್ನಪ್ಪ ಕಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಲೇರಿಯಾ ದಿನದ ಅಂಗವಾಗಿ ಇತ್ತಿಚಿಗೆ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ೨೦೨೭ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಹೊಂದಲಾಗಿದೆ. ಮಲೇರಿಯಾ ರೋಗವು ಪ್ಲಾಸ್ಮೋಡಿಯಾ ಎಂಬ ಪರಾವಲಂಬಿ ಜೀವಿಯಿಂದ ಬರುತ್ತದೆ. ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ರೋಗ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲದಲ್ಲೂ ಕಂಡು ಬಂದರೂ ಜೂನ್ ನಿಂದ ಅಕ್ಟೋಬರ್ ಅಂತ್ಯದವರೆಗಿನ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಯದಲ್ಲಿ ಕೆರೆ, ಕುಂಬೆ, ಬಾವಿ, ಸಣ್ಣಪುಟ್ಟ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ವಂಶಾಭಿವೃದ್ದಿಗೆ ಅನುಕೂಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಗ್ರಾಮಂತರ ಮತ್ತು ಪಟ್ಟಣ ಪ್ರದೇಶಗಳ ಪರಿಸರದಲ್ಲಿ ಈ ರೋಗ ನಿಯಂತ್ರಣಕ್ಕೆ ಕ್ರಮ ಅಗತ್ಯ ಎಂದರು.
ಈ ವರ್ಷದ ಘೋಷವಾಕ್ಯದಂತೆ “ಮಲೇರಿಯಾ ಕೊನೆಗೊಳಿಸಲು ಅಗತ್ಯ ಕ್ರಮಗಳ ಚಾಲನೆಯನ್ನು ಈಗ ನಾವು ಮಾಡೋಣ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತ್ತಕುಮಾರ ಗುಣಾರಿ ಮಾತನಾಡಿ, ಮಲೇರಿಯಾ ರೋಗದ ಖಚಿತ ಪ್ರಕರಣಗಳು ಬರದಂತೆ ನೋಡಿಕೊಳ್ಳುವುದು ತುಂಬಾ ಆಗತ್ಯವಾಗಿದೆ. ಕೆರೆ, ಬಾವಿಗಳಲ್ಲಿ ಮೀನು ಬಿಡುವುದು, ಚರಂಡಿಗಳ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ನೀರಿಗೆ ಕ್ಲೋರಿನೇಶನ್ ಮಾಡಿಸುವುದು. ಇದರಿಂದ ಸೊಳ್ಳೆಗಳ ಉತ್ಪತಿಯನ್ನು ತಡೆಯಬಹುದು. ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿಟ್ಟು ಬಿಟ್ಟು ಮಳೆ ಬರುವುದರಿಂದ ಅಲ್ಲಿಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಹಾಗಾಗಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದರು.
ಮನೆಗಳಲ್ಲಿ ನೀರು ಶೇಖರಣೆ ಸಾಮಗ್ರಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಹಾಗೂ ನೀರು ತುಂಬಿಡುವ ಪರಿಕರಗಳನ್ನು ಗಾಳಿ ಆಡದಂತೆ ಭದ್ರವಾಗಿ ಮುಚ್ಚುವಂತೆ ಜಾಗೃತಿ ಮೂಡಿಸಬೇಕು ಹಾಗೂ ಆರೋಗ್ಯ ಶಿಕ್ಷಣ ನೀಡಬೇಕು ಎಂದರು.ಸ್ವಯಂ ರಕ್ಷಣೆ ವಿಧಾನಗಳಾದ ಸೊಳ್ಳೆ ಪರದೆ, ಸೊಳ್ಳೆ ಎತ್ತಿಗಳ ಉಪಯೋಗ ಮತ್ತು ಸಂಜೆ ಅಳವಡಿಸಬೇಕು. ಮನೆ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಅಪ್ಪಾಸಾಹೇಬ ಇನಾಂದಾರ ಮಾತನಾಡಿ, ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಂಡು. ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಕೆ. ಡಿ. ಗುಂಡಬಾವಡಿ, ತಾಲೂಕಾ ಆರೋಗ್ಯ ಅಧಿಕಾರಿಗಳು ವಿಜಯಪುರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಕೋಲೂರ. ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳು ಮೋತಿಲಾಲ ಲಮಾಣಿ, ಬ್ಯಾಂಕಿನ ಅಧಿಕಾರಿಗಳಾದ ರಾಘವೇಂದ್ರ ಕೆ. ಪ್ರದೀಪ ನಾದ, ಶ್ರೀ ಶಿವಾನಂದ ಬೊಮ್ಮನಹಳ್ಳಿ ಜಿಲ್ಲಾ ಮೇಲ್ವಿಚಾರಕರು. ಎಲ್ಲ ನಮ್ಮ ಕ್ಲಿನಿಕ ವೈದ್ಯಾಧಿಕಾರಿಗಳು, ಡಿ.ವಿ.ಬಿ.ಡಿ.ಸಿ ಕಛೇರಿ ಸಿಬ್ಬಂದಿಗಳು, ವರ್ಸಿಂಗ್ ಕಾಲೇಜಿನ ಭೋದಕ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಜಾಥಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

