ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನಮ್ಮ ಕರ್ನಾಟಕದ ಗಡಿ ಭಾಗಗಳಾದ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಾಷೆಗಳನ್ನು ಕಲಿಯಬೇಕು, ಅಲ್ಲಿಯ ಸಾಹಿತ್ಯವನ್ನು ಓದಬೇಕು ಚಲನಚಿತ್ರಗಳನ್ನು ನೋಡಬೇಕು, ಸಾಂಸ್ಕೃತಿಕ ವೈವಿಧ್ಯವನ್ನು ಅರಿಯಬೇಕು ಎಂಬುದು ನನ್ನ ಹಲವಾರು ವರ್ಷಗಳ ಕನಸು ಆದರೆ ಇಂದಿಗೂ ಕೂಡ ಅದು ನನಸಾಗಿಲ್ಲ. ಮರಾಠಿ ಭಾಷೆಯ ಚಲನ ಚಿತ್ರಗಳು, ಕಥೆಗಳು, ಪುಸ್ತಕಗಳು ಅಲ್ಲಿಯ ಸಂತರ ಕೀರ್ತನೆಗಳು, ಅವರ ಬದುಕಿನ ಕಥೆಗಳು ನಮಗೆ ಅತ್ಯಂತ ಅಪ್ಯಾಯಮಾನವಾದದ್ದು. ಬಹುಷ್ಯ ಒಂದೊಮ್ಮೆ ಕರ್ನಾಟಕದ ಭಾಗವೇ ಆಗಿದ್ದ ಅಲ್ಲಿ ನಮ್ಮದೇ ಜನರ ಮೂಲ ಬೇರುಗಳು ಇರುವುದು ಇದಕ್ಕೆ ಕಾರಣವಿರಬಹುದು ಅಥವಾ ಮರಾಠಿ ಭಾಷೆಯ ಜನರು ಇಂದಿಗೂ ಕೂಡ ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಕುರಿತಾದ ಅಭಿಮಾನ ನಮ್ಮಲ್ಲಿ ಆ ಭಾವನೆಯನ್ನು ಮೂಡಿಸಬಹುದು. ಇನ್ನು ಕೆಲವು ತಮಿಳು ಚಲನಚಿತ್ರಗಳು ಅಲ್ಲಿಯ ಲೇಖಕರ ಅನುವಾದಿತ ಕೃತಿಗಳು ಕಾದಂಬರಿಗಳು ನಮ್ಮಲ್ಲಿ ಆ ಭಾಷೆಯ ಕುರಿತು ಕಲಿಯಬೇಕು ಎಂಬ ಆಶಯವನ್ನು ಹುಟ್ಟಿಸಿರಬಹುದು.
ಈ ಮಾತನ್ನು ಇಲ್ಲಿ ಹೇಳಲು ಕಾರಣ ಯಾವುದೇ ಒಂದು ಭಾಷೆಯನ್ನು ನಾವು ಶಾಲೆಗಳಲ್ಲಿ ಕಲಿತ ರೀತಿಯಲ್ಲಿ ಬಾಹ್ಯವಾಗಿ ಕಲಿಯಲು ಸಾಧ್ಯವೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನಮಗೆ ಐದನೇ ತರಗತಿಯಲ್ಲಿ ಇಂಗ್ಲಿಷ್ ವಿಷಯ ಹಾಗೂ ಆರನೇ ತರಗತಿಯಲ್ಲಿ ಹಿಂದಿ ವಿಷಯಗಳು ವರ್ಣಮಾಲೆಯಿಂದ ಹಿಡಿದು ಆ ಭಾಷೆಯ ಸೊಗಡು, ಸಾಹಿತ್ಯ, ಕವನ, ಕಾವ್ಯ, ನಾಟಕಗಳವರೆಗೆ ಅಲ್ಲಿಯ ವೈವಿಧ್ಯಮಯ ಸಂಸ್ಕೃತಿಯ ಕುರಿತು ಪರಿಚಯವನ್ನು ಪ್ರತಿ ತರಗತಿಯಲ್ಲಿಯೂ ಹಂತ ಹಂತವಾಗಿ ಮಾಡಿಕೊಟ್ಟಿದೆ ಇಂದು ನಾವು ನಮ್ಮ ರಾಜ್ಯವನ್ನು ಹೊರತುಪಡಿಸಿ ಬೇರೆ ಪ್ರದೇಶಗಳಿಗೆ ಹೋದಾಗ ನಮ್ಮ ರಾಷ್ಟ್ರಭಾಷೆ ಹಿಂದಿಯಲ್ಲಿ ಮಾತನಾಡುವ ಮೂಲಕ ಅಲ್ಲಿಯ ಜನರೊಂದಿಗೆ ಸಂವಹನ ಮಾಡುತ್ತೇವೆ ಇಂಗ್ಲಿಷ್ ಕೂಡ ನಮಗೆ ಸರಾಗವಾಗಿ ಮಾತನಾಡಲು ಬರದಿದ್ದರೂ ಕೂಡ ಮ್ಯಾನೇಜ್ ಮಾಡಬಲ್ಲೆವು ಎಂಬಷ್ಟು ಸಾಧ್ಯತೆಗಳನ್ನು ತಂದುಕೊಟ್ಟಿದೆ. ಇಡೀ ರಾಷ್ಟ್ರವನ್ನು ಒಂದುಗೂಡಿಸಿರುವ ಹಿಂದಿ ಭಾಷೆ ನಮ್ಮ ಪಠ್ಯದ ಭಾಗವಾಗಿರುವ ಕಾರಣ ಔಪಚಾರಿಕವಾಗಿ ನಮಗೆ ಕಲಿಯಲು ಸಿಕ್ಕ ಕಾರಣವೇ ಹಿಂದಿಯನ್ನು ಕಲಿಯಲು ಸಾಧ್ಯವಾಯಿತು ಎಂಬುದು ಸತ್ಯವಾದದ್ದು ಅಲ್ಲವೇ.
ವಿದೇಶಗಳಲ್ಲಾದರೂ ಅಷ್ಟೇ ತಮ್ಮ ದೇಶದ ಭಾಷೆಯ ಜೊತೆಗೆ ಯಾವುದಾದರೂ ಒಂದು ವಿದೇಶಿ ಭಾಷೆಯನ್ನು ಕಲಿಯಲು ಮಕ್ಕಳಿಗೆ ಅವಕಾಶ ನೀಡಿದ್ದು ಚಿಕ್ಕಂದಿನಲ್ಲಿಯೇ ಮಕ್ಕಳು ವಿವಿಧ ಭಾಷೆಗಳ ಸಂಸ್ಕೃತಿಗಳ ಅರಿವನ್ನು ಹೊಂದಿರಲಿ ಎಂಬ ಕಾರಣಕ್ಕೆ.

ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕೆಲವು ಶಾಲೆಗಳಲ್ಲಿ ಕಲಿಯುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ ಅಷ್ಟೇ ಏಕೆ.. ಆಸ್ಟ್ರೇಲಿಯಾ ಮತ್ತು ಅಮೆರಿಕಗಳಲ್ಲಿಯೂ ಕೂಡ ಒಂದು ವಿದೇಶಿ ಭಾಷೆಯಾಗಿ ಯಾವುದಾದರೂ ಒಂದು ಅಂಗೀಕೃತ ಭಾಷೆಯನ್ನು ಕಲಿಯುವ ಅವಕಾಶವನ್ನು ನೀಡಿದ್ದಾರೆ.
ಇನ್ನು ನಾವು ಹೈಸ್ಕೂಲಿನಲ್ಲಿದ್ದಾಗ ನಮ್ಮ ಸಂಗೀತದ ಗುರುಗಳು ನಮಗೆ ತೆಲುಗು, ತಮಿಳು ಭಾಷೆಯ ಪದ್ಯಗಳು ರಾಗವಾಗಿ ಹಾಡಲು ಕಲಿಸಿದ್ದರಲ್ಲದೆ ಉತ್ತರ ಭಾರತದ ಅಸ್ಸಾಮಿ ಭಾಷೆಯ ಏ ಮಾತಿರೆ ಮೋರೋ ಮೋತೆ ಮಾತಿಕೆ ಸೋಮೇಲೊ ಎಂಬ ಗೀತೆಯನ್ನು ಕೂಡ ಕಲಿಸಿದ್ದರು.
ಹೀಗೆಲ್ಲಾ ಹಾಡುಗಳನ್ನು ಕಲಿಸಲು ಅಂದು ಅವರು ಕಾರಣಗಳನ್ನು ನೀಡಿಲ್ಲವಾದರೂ ಬಹುಶಹ ಬೇರೆ ಬೇರೆ ಭಾಷೆಗಳ ಪರಿಚಯ ನಮಗಿರಲಿ ಎಂಬುದು ಇದರ ಹಿಂದಿನ ಉದ್ದೇಶ ಆಗಿರಬಹುದು ಎಂಬುದು ನನ್ನ ಊಹೆ.
ಹಮ್ ಹೊಂಗೆ ಕಾಮಿಯಾಬ್, ಹಿಂದ್ ದೇಶ ಕೆ ಸಿಪಾಯಿ ಸಬಿ ಜನ ಏಕ ಹೈ ರಂಗ ರೂಪ ವೇಷ ಭಾಷಾ ಚಾಹೇ ಅನೇಕ ಹೈ, ಏ ಮೇರೆ ವತನ್ ಕೆ ಲೋಗೋ ಎಂಬ ಗೀತೆಗಳಲ್ಲಿ ನಾವು ಭಾರತ ಮಾತೆಯನ್ನು ಕಂಡುಕೊಂಡಿದ್ದೇವೆ ವಂದೇ ಮಾತರಂನ ಝೇಂಕಾರದಲ್ಲಿ ನಾವು ನಮ್ಮ ಭಾರತೀಯ ಅಸ್ಮಿತೆಯನ್ನು ಗುರುತಿಸಿಕೊಂಡಿದ್ದೇವೆ.
ವಿದೇಶಿ ಭಾಷೆಯಾದ ಅಂತರಾಷ್ಟ್ರೀಯ ಮಾನ್ಯತೆಯನ್ನು ಹೊಂದಿದೆ, ನಮ್ಮ ಭವಿಷ್ಯದಲ್ಲಿ ಆ ಭಾಷೆಯ ಮೂಲಕ ಸಂವಹನ ಹಾಗೂ ಔದ್ಯೋಗಿಕ ಅವಕಾಶಗಳನ್ನು ಪಡೆದುಕೊಳ್ಳುತ್ತೇವೆ, ಜಂಟಲ್ ಮನ್ ಲ್ಯಾಂಗ್ವೇಜ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಅನಿವಾರ್ಯವಾಗಿಯಾದರೂ ನಾವು ಅದನ್ನು ಕಲಿಯಲೇಬೇಕು ಎಂಬ ಒಂದೇ ಕಾರಣಕ್ಕೆ ಇಂಗ್ಲಿಷ್ ಭಾಷೆಯನ್ನು ನಾವು ಅಪ್ಪಿಕೊಳ್ಳುವುದಾದರೆ ನಮ್ಮ ರಾಷ್ಟ್ರೀಯ ಭಾಷೆ ಎಂದು ಗುರುತಿಸಲ್ಪಟ್ಟ ರಾಜ್ಯ ರಾಜ್ಯಗಳ ನಡುವಿನ ಸಂವಹನವನ್ನು ಹೆಚ್ಚಿಸುವ ನಮ್ಮೆಲ್ಲರನ್ನು ಒಗ್ಗೂಡಿಸುವ ಹಿಂದಿ ಭಾಷೆ ನಮ್ಮ ಮಕ್ಕಳಿಗೆ ಏಕೆ ಬೇಡ ?
ಕನ್ನಡ ನಮ್ಮ ಅಂತರಂಗದ ಭಾಷೆಯಾದರೆ ಹಿಂದಿ ಕೂಡ ನಮ್ಮ ಜೀವ ಭಾವಗಳನ್ನು ಅರಳಿಸುವ ಭಾಷೆ. ಎಷ್ಟೋ ಬಾರಿ ಸರಳವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಭಾವನೆಗಳನ್ನು ನಾವು ಹಿಂದಿ ಭಾಷೆಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದು ಅದರ ಸಾಮರ್ಥ್ಯವನ್ನು ತೋರುತ್ತದೆ.
ಒಂದು ಭಾಷೆಯನ್ನು ಕಲಿಯುವ ಮೂಲಕ ಆ ಭಾಷೆಯ ಸಾಹಿತ್ಯಕ, ಸಾಂಸ್ಕೃತಿಕ, ವ್ಯವಹಾರಿಕ, ರಾಜಕೀಯ, ಐತಿಹಾಸಿಕ, ಪ್ರಾದೇಶಿಕ ಹೀಗೆ ಎಲ್ಲಾ ಕೋನಗಳಲ್ಲಿ ಔಪಚಾರಿಕವಾಗಿ ಅಧ್ಯಯನವನ್ನು
ಕೈಗೊಳ್ಳಬಹುದು.
ಇಂಗ್ಲಿಷ್ ತುಟ್ಟಿ, ಹಿಂದಿ ಬರುವುದಿಲ್ಲ ಎಂದರೆ ನಾವು ನಮ್ಮ ಮಾತೃಭಾಷೆಯೊಂದನ್ನೇ ಬಳಸಿಕೊಂಡು ಇತರ ಭಾಷಿಕರೊಂದಿಗೆ ಸಂವಹನ ಮಾಡಲು ಸಾಧ್ಯವಿಲ್ಲ.. ಆ ಕಾರಣಕ್ಕಾಗಿಯಾದರೂ ನಮಗೆ ಬೇರೆ ಭಾಷೆಗಳು ಬೇಕು. ನಿಜ ಎಲ್ಲ ಭಾಷೆಗಳನ್ನು ಎಲ್ಲ ಸಮಯದಲ್ಲಿಯೂ ಕಲಿಯಲು ಸಾಧ್ಯವಿಲ್ಲ ಆದರೆ ಔಪಚಾರಿಕವಾಗಿ ಕಲಿಯಲು ಸಾಧ್ಯವಿರುವಾಗಲೇ ಹಿಂದಿ ಭಾಷೆಯನ್ನು ಕಡೆಗಣಿಸುತ್ತಿದ್ದ ನಮ್ಮ ಜನರು ಇದೀಗ ಭಾಷೆಯ ಪರೀಕ್ಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡಿದಾಗ ಅಷ್ಟೇ ಮಾನ್ಯತೆಯನ್ನು ನೀಡಿ ಕಲಿಯಲು ಸಾಧ್ಯವಾಗುತ್ತದೆಯೇ ? ಹೇಗಾದರೂ ಆಗಲಿ ತ್ರಿಭಾಷಾ ಸೂತ್ರವು ರಾಜ್ಯ ರಾಜ್ಯಗಳನ್ನು ಸಂವಹನದ ಮೂಲಕ ಒಗ್ಗೂಡಿಸಲು ಅತ್ಯವಶ್ಯಕವಾಗಿದ್ದು ಅದರ ಕುರಿತು ನಮ್ಮ ಒಲವು ಇರದಿದ್ದರೆ ಬೇಡ ಆದರೆ ಕನಿಷ್ಠ ಭಾಷೆಯಾಗಿಯಾದರೂ ಅದನ್ನು ಕಲಿಯುವ ಮೂಲಕ
ನಮ್ಮದಾಗಿಸಿಕೊಳ್ಳೋಣ.
ಏನಂತೀರಾ?


