ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅಖಂಡ ಬಸವನ ಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವ ಬಹುದಿನಗಳ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಕಾಂಪ್ಲೆಕ್ಸ್ನಲ್ಲಿ ನಿಡಗುಂದಿ ತಾಲೂಕಿನ ಅಂಗಡಗೇರಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ “ಕೊಲ್ಹಾರ ಕೇನ್ಸ್ ಲಿಮಿಟೆಡ್, ಅಂಗಡಗೇರಿ” ಸಂಸ್ಥೆಯ ಸಕ್ಕರೆ ಅಭಿವೃದ್ದಿ ಕಚೇರಿ ಉದ್ಘಾಟಿಸಿ, ಶೇರು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಭಾಗದ ರೈತರು ಬೆಳೆದ ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಿಸಲು ಬಹಳ ಕಷ್ಟಪಡುವ ಸ್ಥಿತಿ ಇತ್ತು. ಇದನ್ನು ಮನಗಂಡು ಬಸವನ ಬಾಗೇವಾಡಿ, ಮುದ್ದೆಬಿಹಾಳ, ನಿಡಗುಂದಿ, ಕೊಲ್ಹಾರ ಹಾಗೂ ಬಬಲೇಶ್ವರ ತಾಲೂಕಿನ ರೈತರ ಅನುಕೂಲಕ್ಕಾಗಿ ಮಧ್ಯ ಭಾಗದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಒಂದು ಶೇರುಗೆ ₹25,000 ನಿಗದಿಪಡಿಸಲಾಗಿದ್ದು, ರೈತರು, ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಶೇರುಗಳನ್ನು ಪಡೆದು ಕಾರ್ಖಾನೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಏಪ್ರಿಲ್ 30 ಶೇರು ಪಡೆಯಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಸಮಯಕ್ಕೆ ಮುನ್ನ ಶೇರು ಪಡೆಯಬೇಕು ಎಂದು ತಿಳಿಸಿದರು.
ಮುಳವಾಡ, ಮಸೂತಿ, ನಿಡಗುಂದಿ, ಕೊಲ್ಹಾರ, ಬಸವನ ಬಾಗೇವಾಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಚೇರಿಗಳನ್ನು ತೆರೆಯಲಾಗಿದ್ದು, ಸಮೀಪದ ಕೇಂದ್ರಗಳಲ್ಲಿ ಶೇರು ಪಡೆಯಲು ಅವಕಾಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣುಸಾಹುಕಾರ, ಮಾತಾಳಿ ಶಿವಪ್ಪ ಹಂಗರಗಿ, ಸಗರೆಪ್ಪ ಮುರನಾಳ, ನಂದಬಸಪ್ಪ ಚೌಧರಿ, ಮೋಹನಗೌಡ ಪಾಟೀಲ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚಂದ್ರಶೇಖರ ಬೆಳ್ಳುಬ್ಬಿ, ವೀರಭದ್ರಪ್ಪ ಬಾಗಿ, ರಾಮಣ್ಣ ಉಪ್ಪಲದಿನ್ನಿ, ಚಿನ್ನಪ್ಪ ಗಿಡ್ಡಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

