ಇಂದು (ಏಪ್ರೀಲ್ ೭, ಮಂಗಳವಾರ) “ವಿಶ್ವ ಆರೋಗ್ಯ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಜಾಯ್ಸ್ ಮೇಯರ್ ಅವರು, “ I beಟieve ಣhe besಣ giಜಿಣ ಥಿou ಛಿಚಿಟಿ give ಥಿouಡಿ ಜಿಚಿmiಟಥಿ ಚಿಟಿಜ ಣhe ತಿoಡಿಟಜ, is ಚಿ ಊeಚಿಟಣhಥಿ ಙou” ಎಂದು ಹೇಳಿದ್ದಾರೆ. ಇಂದಿನ ಒತ್ತಡಮಯ ಮತ್ತು ಸಂಘರ್ಷಯುಕ್ತ ಬದುಕಿನಲ್ಲಿ ಮಾನವ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಸಂಪತ್ತು ಗಳಿಕೆ, ಆದಾಯ ಸಂಪಾದನೆ ಮತ್ತು ವ್ಯವಹಾರಿಕ ಜೀವನದಲ್ಲಿ ಆರೋಗ್ಯದ ಕಡೆಗೆ ಕಿಂಚಿತ್ತೂ ಲಕ್ಷ್ಯ ಕೊಡುತ್ತಿಲ್ಲ. ಅದಕ್ಕಾಗಿ ಆರೋಗ್ಯವೇ ಭಾಗ್ಯ ಎಂಬುದನ್ನು ಮನಗಂಡು ಆರೋಗ್ಯವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಚೆನ್ನಾಗಿ ಇಟ್ಟುಕೊಳ್ಳಲೇ ಬೇಕಾಗಿರುವುದು ಅಗತ್ಯವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಧ್ಯಾನ, ಯೋಗ, ನಿಯಮಿತ ನಿದ್ರೆ ಮತ್ತು ಒತ್ತಡ-ಮುಕ್ತ ಜೀವನ ಶೈಲಿ ಹೊಂದುವುದು ಅತಿ ಅವಶ್ಯಕ. ಆರೋಗ್ಯವಂತ ವ್ಯಕ್ತಿ ಪ್ರತಿ ದಿನ ಕನಿಷ್ಠ ೩೦-೪೫ ನಿಮಿಷಗಳ ಕಾಲ ವೇಗದ ನಡಿಗೆ, ಯೋಗ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಬೇಕು. ಶಾರೀರಿಕ ಆರೋಗ್ಯವೂ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯ. ಉತ್ತಮ ಹವ್ಯಾಸ, ಪ್ರವೃತ್ತಿ, ಮನಸ್ಸಿಗೆ ಮುದ ನೀಡುವ ಧ್ಯಾನ, ತಪಸ್ಸು, ಯೋಗ ಅಥವಾ ಅಧ್ಯಾತ್ಮಿಕ ಮತ್ತು ಕುಟುಂಬದವರೊಂದಿಗೆ ಅಮೂಲ್ಯ ಸಮಯವನ್ನು ಕಳೆದರೆ ಮಾನಸಿಕ ಒತ್ತಡ ಕಡಿಮೆಗೊಂಡು ಜೀವನದಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ಪ್ರಾಪ್ತವಾಗುತ್ತದೆ. ಡಿ.ವ್ಹಿ.ಜಿ ಅವರು ಹೇಳಿರುವಂತೆ, ”ಆರೋಗ್ಯಕರ ಜೀವನವೆಂದರೆ ಉತ್ತಮ ಆರೋಗ್ಯ ಮತ್ತು ವಿವೇಕಯುಕ್ತ ಮನಸ್ಸು ಎಂದರ್ಥ. ನಮ್ಮ ದೈನಂದಿನ ಅಭ್ಯಾಸಗಳು, ಜೀವನ ಶೈಲಿಗಳೇ ಉತ್ತಮ ಆರೋಗ್ಯದ ಗುಟ್ಟು.
ಆಚರಣೆಯ ಇತಿಹಾಸ

ಜಾಗತಿಕವಾಗಿ ಆರೋಗ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು, ಉತ್ತಮ ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವುದು ಮತ್ತು ಎಲ್ಲರಿಗೂ ಸಮಾನ ಆರೋಗ್ಯದ ಸೇವೆಗಳನ್ನು ದೊರೆಯುವಂತೆ ಮಾಡಲು ಪ್ರತಿ ವರ್ಷ ಏಪ್ರೀಲ್ ೭ ರಂದು ವಿಶ್ವ ಆರೋಗ್ಯ ದಿನವು ಆಚರಿಸಲಾಗುತ್ತದೆ. ಮೊಟ್ಟಮೊದಲು ೧೯೪೮ ರಲ್ಲಿ ಜೀನಿವಾದಲ್ಲಿ ಜರುಗಿದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ಸುಮಾರು ೬೧ ರಾಷ್ಟ್ರಗಳು ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಒಪ್ಪಂದಕ್ಕೆ ಅಂಕಿತ ಹಾಕಿದವು. ಮೊದಲ ಬಾರಿಗೆ ೧೯೪೯ ರಲ್ಲಿ ಜುಲೈ ೨೨ ರಂದು ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲಾಯಿತು. ಮುಂದೆ ೧೯೫೦ ರಿಂದ ಈ ದಿನವನ್ನು ಪ್ರತಿವರ್ಷ ಏಪ್ರೀಲ್ ೭ ರಂದು ಆಚರಿಸಲಾಗುತ್ತಿದೆ.
ಉದ್ದೇಶ ಮತ್ತು ಮಹತ್ವ
ಜಾಗತಿಕ ಆರೋಗ್ಯ ಸಮಸ್ಯೆಗಳು, ಸಾಂಕ್ರಾಮಿಕ ರೋಗಗಳು ಮತ್ತು ಜೀವನ ಶೈಲಿಯಿಂದ ಉತ್ಪತ್ತಿಯಾಗುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು. ಜಾಗತಿಕವಾಗಿ ಸಾರ್ವಜನಿಕರಿಗೆ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದರ ಮೂಲಕ ಆರೋಗ್ಯಕರ ಜೀವನ ಮತ್ತು ರೋಗ ಮುಕ್ತ ಸಮಾಜವನ್ನು ಉತ್ತೇಜಿಸಲು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಕಾಯಿಲೆ ಬರುವುದಕ್ಕಿಂತ ಮುಂಚೆ ಮುನ್ನೆಚ್ಚರಿಕೆ ಮತ್ತು ತಡೆಗಟ್ಟುವ ಕ್ರಮಗಳ ತೆಗೆದುಕೊಳ್ಳುವಂತೆ ಜನರಲ್ಲಿ ತಿಳುವಳಿಕೆ ನೀಡುವುದು. ದೈನಂದಿನವಾಗಿ ಯೋಗ, ಪೌಷ್ಟಿಕ ಆಹಾರ ಮತ್ತು ನಿರಂತರ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಆಗುವ ಪ್ರಯೋಜನ ಮತ್ತು ಮಹತ್ವದ ಬಗ್ಗೆ ಅರಿವು ಮೂಡಿಸುವುದು. ಅಷ್ಟೇ ಅಲ್ಲದೇ ಎಲ್ಲರಿಗೂ ಆರೋಗ್ಯ ಯೋಜನೆಯಡಿಯಲ್ಲಿ ಎಲ್ಲರಿಗೂ ಸಮಾನ ಆರೋಗ್ಯ ಸೇವೆಗಳ ದೊರೆಯುವಂತೆ ಪ್ರೇರೇಪಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಈ ದಿನದ ಆಚರಣೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿ, ಸಮುದಾಯಗಳು ಮತ್ತು ಸರ್ಕಾರಗಳು ಕೂಡಿಕೊಂಡು ಆರೋಗ್ಯಕರ ಭವಿಷ್ಯಕ್ಕಾಗಿ ಒಟ್ಟಿಗೆ ಕೆಲಸ ಮಾಡಬೇಕೆಂಬ ಮಹೋನ್ನತವಾದ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
೨೦೨೬ ನೇಯ ವರ್ಷದ ಘೋಷವಾಕ್ಯ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವೆಂದರೆ ಕೇವಲ ರೋಗಗಳ ಅನುಪಸ್ಥಿತಿಯಲ್ಲ. ಬದಲಾಗಿ ಅದು ವ್ಯಕ್ತಿಯಲ್ಲಿ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗಿದೆ. “ಆರೋಗ್ಯಕ್ಕಾಗಿ ಒಟ್ಟಿಗೆ, ವಿಜ್ಞಾನದೊಂದಿಗೆ ಸ್ಟ್ಯಾಂಡ್” ಎಂಬ ಧ್ಯೇಯವಾಕ್ಯದೊಂದಿಗೆ ೨೦೨೬ ನೇಯ ವರ್ಷದ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಇದು ಆರೋಗ್ಯ ರಕ್ಞಣೆ ಇದು ಕೇವಲ ಸರ್ಕಾರ ಮಾಡುವ ಕೆಲಸ ಮಾತ್ರವಲ್ಲ ಎನ್ನುವುದನ್ನು ಮನಗಂಡು, ಈ ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವೆಲ್ಲರೂ ಒಟ್ಟಿಗೆ ಸೇರಿ ಮೊದಲು ನಮ್ಮ ಆರೋಗ್ಯ, ಕುಟುಂಬದ ಸದಸ್ಯರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಸುತ್ತಮುತ್ತಲಿನ ಸಮುದಾಯದ ಜನರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಶ್ರಮಿಸಿದರೆ ರಾಷ್ಟçದ ಆರೋಗ್ಯ ಸ್ವಾಸ್ಥ್ಯ ಖಂಡಿತವಾಗಿಯೂ ಸುಧಾರಿಸುತ್ತದೆ. ವೈಜ್ಞಾನಿಕ ಸಂಶೋಧನೆ ಮತ್ತು ಪುರಾವೆ ಆಧಾರಿತ ಆರೋಗ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಒತ್ತಿ ಹೇಳುತ್ತದೆ.
ಕೊನೆಯ ನುಡಿ
ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಎಲ್ಲವೂ ವಾಣಿಜ್ಯೀಕರಣಗೊಳ್ಳುತ್ತಿರುವ ಈ ಜಗತ್ತಿನಲ್ಲಿ ಹಣ ಗಳಿಕೆಯತ್ತ ಸಾಗುತ್ತಿರುವ ಮಾನವ ತನ್ನ ಅಮೂಲ್ಯವಾದ ಆರೋಗ್ಯದ ಕಡೆಗೆ ಕಿಂಚಿತ್ತೂ ಗಮನಹರಿಸದೇ ರೋಗಗಳನ್ನು ಮತ್ತು ಅನಾರೋಗ್ಯವನ್ನು ಆಹ್ವಾನ ನೀಡುತ್ತಿದ್ದಾನೆ. ಇಂದಿನ ಯುವ ಜನಾಂಗ ನಮ್ಮ ದೇಶೀಯ ಆಹಾರ ಕ್ರಮ, ಸಂಸ್ಕೃತಿ-ಪದ್ಧತಿಯನ್ನು ಇಟ್ಟು ಪಾಶ್ಚಾತ್ಯರಂತೆ ಫಾಸ್ಟ್ಫುಡ್, ಬೇಕರಿ ಮತ್ತು ಸಂಸ್ಕರಿತ ಆಹಾರ ಮತ್ತು ಅತಿ ಹೆಚ್ಚು ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನೇ ಸೇವಿಸುವುದೇ ಜೀವನ ಶೈಲಿಯನ್ನಾಗಿಸಿಕೊಂಡಿದೆ. ಇಂದಿನ ನಮ್ಮ ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿ ಮತ್ತು ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಬದಲಾವಣೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಯುವಕರು ಒತ್ತಡಯುಕ್ತ ಜೀವನ, ಜಂಕ್ ಫುಡ್, ಫಾಸ್ಟ್ ಫುಡ್ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವದು ಕಳವಳಕಾರಿ ಸಂಗತಿ. ಅಜೀರ್ಣಕಾರಿ ಮತ್ತು ಪಿತ್ತಕೋಶದ ಮೇಲೆ ಹಾನಿಯನ್ನು ಉಂಟುಮಾಡುವ ಸತ್ವ ರಹಿತ ಆಹಾರ ನಮ್ಮ ಆಹಾರ ಕ್ರಮ, ಪದ್ಧತಿಯಲ್ಲ. ಅದಕ್ಕಾಗಿ ಯುವಕರು ಮತ್ತು ಮಹಿಳೆಯರು ಸ್ವದೇಶಿ ಆಹಾರ ಪದ್ಧತಿ ಅನುಸರಿಸುತ್ತಾ, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ಮುಂದಾಗುವ ಅನಾರೋಗ್ಯದಿಂದ ತಡೆಗಟ್ಟಬಹುದು. ಆರೋಗ್ಯದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ದೈನಂದಿನವಾಗಿ ವಾಕಿಂಗ್, ಯೋಗ, ವ್ಯಾಯಾಮ, ಧ್ಯಾನ, ದೈಹಿಕ ಕಸರತ್ತು ಮಾಡುತ್ತಾ ನಮ್ಮ ಆರೋಗ್ಯವನ್ನು ಸುರಕ್ಷಿತವನ್ನಾಗಿಟ್ಟುಕೊಳ್ಳಬೇಕೆನ್ನುವುದು ನಮ್ಮೆಲ್ಲರ ಆಶಯ.


