ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಓಲೆಮಠದ ಆಶ್ರಯದಲ್ಲಿ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಏಪ್ರಿಲ್ 15 ರಿಂದ 20 ರವರೆಗೆ ಬಸವ ಜಯಂತಿ ಕಾರ್ಯಕ್ರಮ ಮತ್ತು ಓಲೆಮಠದ ಜಾತ್ರಾ ಮಹೋತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಓಲೆಮಠದ ಆನಂದ ದೇವರು ತಿಳಿಸಿದ್ದಾರೆ.
ಓಲೆಮಠದ ಸಭಾಂಗಣದಲ್ಲಿ ಬುಧವಾರ ಸಂಜೆ ವಿವಿಧ ಸಮಾಜಗಳ ಮುಖಂಡರು ಹಾಗೂ ಶ್ರೀಮಠದ ಸದ್ಭಕ್ತರ ಪೂರ್ವಭಾವಿ ಸಭೆ ನಡೆಯಿತು. ಸಭೆಯ ಸಾನ್ನಿಧ್ಯ ವಹಿಸಿ ಎಲ್ಲರ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ ಬಳಿಕ ಅವರು ಈ ಮಾಹಿತಿ ನೀಡಿದರು.
ಏಪ್ರಿಲ್ 15 ರಿಂದ 19 ರವರೆಗೆ ಪ್ರತಿದಿನ ಒಬ್ಬರಂತೆ ಒಟ್ಟು ಐದು ಮಂದಿ ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ, ಪ್ರಮುಖ ಪೂಜ್ಯರ ಸಾನ್ನಿಧ್ಯದಲ್ಲಿ ಹಾಗೂ ಗಣ್ಯರ ಸಮ್ಮುಖದಲ್ಲಿ ಬಸವ ತತ್ವದ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು.
ಈ ಉಪನ್ಯಾಸ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಸ್ಥಳೀಯ ಬಸವ ಕೇಂದ್ರ ಹಾಗೂ ಬಸವ ಸಮಿತಿ ವಹಿಸಲಿದ್ದು, ಪ್ರತಿದಿನದ ಮಹಾಪ್ರಸಾದ ಹಾಗೂ ಇತರ ಸೇವೆಗಳನ್ನು ವಿವಿಧ ಸಮಾಜಗಳು, ಸಂಘ-ಸಂಸ್ಥೆಗಳು ಮತ್ತು ಗಣ್ಯರು ನಿರ್ವಹಿಸಲಿದ್ದಾರೆ. ಏಪ್ರಿಲ್ 20 ರಂದು ಬೆಳಿಗ್ಗೆ ಬಸವ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು. ಮೆರವಣಿಗೆಯಲ್ಲಿ ಸಸಿಗಳನ್ನು ಹೊತ್ತ ಸುಮಂಗಲೆಯರು ಭಾಗವಹಿಸಿ ‘ಬಸವ ವೃಕ್ಷೋತ್ಸವದ ಮೂಲಕ ಪರಿಸರ ಜಾಗೃತಿ ಮೂಡಿಸಲಿದ್ದಾರೆ.
ಅದೇ ದಿನ ಸಾಯಂಕಾಲ ವಚನ ಕಟ್ಟುಗಳನ್ನು ರಥದಲ್ಲಿ ಇಟ್ಟು ಭವ್ಯ ರಥೋತ್ಸವವನ್ನು ಓಲೆಮಠದಿಂದ ನಡೆಸಲಾಗುತ್ತದೆ. ನಂತರ ಓಲೆಮಠದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ವಿದ್ವಾಂಸರು ಭಾಗವಹಿಸಲಿದ್ದಾರೆ ನಾಡಿನ ಪ್ರಮುಖ ಪೂಜ್ಯರು, ಗಣ್ಯರು, ಸಾಹಿತಿಗಳು, ಚಿಂತಕರು ಹಾಗೂ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

