ವಿಜಯಪುರದಲ್ಲಿ ಎಬಿವ್ಹಿಪಿ ಹಮ್ಮಿಕೊಂಡಿದ್ದ ’ಉಘೇ ವೀರಭೂಮಿ’ ಕಾರ್ಯಕ್ರಮ
*ಉದಯರಶ್ಮಿ ದಿನಪತ್ರಿಕೆ*ವಿಜಯಪುರ: ಸಿನಿಮಾಗಳಲ್ಲಿ ನಟಿಸುವ ನಟ – ನಟಿಯರು ಹೀರೋಗಳಲ್ಲ. ನಿಜವಾದ ಹೀರೋಗಳೆಂದರೆ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಹೋರಾಟಗಾರರು ಹಾಗೂ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು ಎಂದು ವಾಗ್ಮಿ ಬಸವರಾಜ ಹಂಚಲಿ ಹೇಳಿದರು.
ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ ಅವರು, ದೇಶದ ಶ್ರೇಷ್ಠತೆ ಮತ್ತು ಪರಂಪರೆ ನಮಗೆಲ್ಲ ಪ್ರೇರಣೆ ಆಗಬೇಕು, ಈ ಮೂರು ಜನ ತರುಣರು ತಮ್ಮ ಚಿಕ್ಕ ವಯಸ್ಸಿನಲ್ಲಿ ಭಾರತ ಮಾತೆಯನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತ ಮಾಡಬೇಕೆಂದು ಕ್ರಾಂತಿಕಾರಿ ಹೋರಾಟವನ್ನು ಮಾಡಿದರು, ತಾವು ಗಲ್ಲಿಗೇರುವ ಸಮಯದಲ್ಲಿ ನಗುತ್ತಾ ಘೋಷಣೆಗಳನ್ನು ಮೊಳಗಿಸುತ್ತಾ ಭಯವಿಲ್ಲದೆ ಗಲ್ಲಿಗೇರಿದ ಮಹಾನ್ ರತ್ನಗಳು ಇವರನ್ನು ಇಂದಿನ ಯುವಕರು ಸ್ಮರಿಸಿಕೊಳ್ಳಬೇಕು. ಇವರು ನಮಗೆ ಪ್ರೇರಣೆ ಆಗಬೇಕು ಎಂದರು.
ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, ಸ್ವಾತಂತ್ರ್ಯ ನಂತರದ ಯುವಶಕ್ತಿ ದೇಶಕ್ಕಾಗಿ ಬದುಕುವ ಅವಶ್ಯಕತೆ ಇದೆ, ಆದರೆ ಇಂದಿನ ಯುವಕರು ಡ್ರಗ್ಸ್, ಗುಟ್ಕಾ, ಮದ್ಯಪಾನಕ್ಕೆ ದಾಸರಾಗಿ ತಮ್ಮ ಅಮೂಲ್ಯ ಶಕ್ತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ದೂರವಾಗಿ, ಸಶಕ್ತ, ಸದೃಢ, ಸ್ವಾಭಿಮಾನಿ ಭಾರತವನ್ನು ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಪಾತ್ರರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ವಿಜಯಕುಮಾರ ಭಾವಿ ಮಾತನಾಡಿ ಸ್ವಾಭಿಮಾನಿ, ಸ್ವದೇಶಿ, ಭಾರತವನ್ನು ನಿರ್ಮಾಣ ಮಾಡಬೇಕು, ಅದಕ್ಕೆ ಯುವಶಕ್ತಿ ಬೆಂಬಲವಾಗಿ ನಿಂತು ವಿಶ್ವಗುರು ಭಾರತವನ್ನು ನಿರ್ಮಾಣ ಮಾಡಬೇಕು ಎಂದರು.
ಎಬಿವಿಪಿಯ ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಡಾ. ಅಮಿತಕುಮಾರ ಬಿರಾದಾರ, ನಗರ ಕಾರ್ಯದರ್ಶಿ ಸ್ನೇಹಾ ಹಿರೇಮಠ, ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ವಕೀಲರಾದ ಬಸವರಾಜ ಯಾದವಾಡ, ಸಿದ್ದು ಮದರಕಂಡಿ, ಸುರೇಖಾ ಕುಲಕರ್ಣಿ, ಮಂಜುನಾಥ ಹಳ್ಳಿ, ನಾಗೇಶ ಸಿಂಧೆ, ಸುಮಾ ಬೋಳರಡ್ಡಿ, ಓಂಕಾರ ನಾವಿ ಇತರರು ಉಪಸ್ಥಿತರಿದ್ದರು.

