ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವಿರುದ್ಧ ತೀವ್ರ ಕಿಡಿಕಾರಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್
ಉದಯರಶ್ಮಿ ದಿನಪತ್ರಿಕೆ
ಕೋಲಾರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಕೊತ್ವಾಲ್ ರಾಮಚಂದ್ರ ರೀತಿ ವರ್ತಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಆರೋಪಿಸಿದ್ದಾರೆ.
ಕೋಲಾರದಲ್ಲಿ ಶ್ರೀರಾಮ ಸೇನೆ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಅವರ ವರ್ತನೆ ಸರಿಯಿಲ್ಲ ಎಂದು ಆರೋಪಿಸಿದ ಅವರು, “ಅವರ ನಡೆ ಕೊತ್ವಾಲ್ ರಾಮಚಂದ್ರ ಕಾಲವನ್ನು ನೆನಪಿಸುವಂತಿತ್ತು ಎಂದು ಹೇಳಿದ್ದಾರೆ.
ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಇಂತಹವರು ಮುಖ್ಯಮಂತ್ರಿ ಆದರೆ ಗತಿಯೇನು? ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಬೇಕೆಂದು ನಮ್ಮವರನ್ನೂ ಭೇಟಿ ಮಾಡಿ ಚರ್ಚೆ ಮಾಡಿದ್ದು, ಕೇಂದ್ರದವರು ಒಪ್ಪದ ಕಾರಣ ಕಾಂಗ್ರೆಸ್ನಲ್ಲೇ ಇದ್ದುಕೊಂಡು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ನನ್ನನ್ನು ಬೆಳೆಸಿದ ಪಕ್ಷವಾಗಿದ್ದು, ಹೀಗಾಗಿ ನಾನೆಂದೂ ಬಿಜೆಪಿಗನಾಗಿದ್ದು, ಯಡಿಯೂರಪ್ಪ ಮಾದರಿಯಲ್ಲಿ ಪಕ್ಷ ತೊರೆಯುವ ಮಾತೇ ಇಲ್ಲ ಎಂದು ತಿಳಿಸಿದರು.
ಬಳಿಕ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮೇ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಜಾಗೃತಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಾಗಿ ಹೇಳಿದ ಅವರು, ಹಿಂದೂಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿ ಸಂಘಟಿತರಾಗಬೇಕು ಮತ್ತು ಎಲ್ಲಾ ಹಿಂದೂಗಳು ಒಂದಾಗಬೇಕು ಎಂದು ಕರೆ ನೀಡಿದರು.

ಯಾರಿಗೆ ಟಿಕೆಟ್ ಬೇಕೋ ಅವರು ಸ್ವತಃ ಖರೀದಿ ಮಾಡಿಕೊಳ್ಳಲಿ
ಇದೇ ವೇಳೆ ಐಪಿಎಲ್ ಟಿಕೆಟ್ ವಿವಾದ ಕುರಿತಂತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ವಿಧಾನಸಭೆಯಲ್ಲಿ ಶಾಸಕರು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿರುವಾಗ, ಐಪಿಎಲ್ ಟಿಕೆಟ್ಗಳಂತಹ ವಿಷಯಗಳನ್ನು ಎತ್ತಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದರು.
ಕೆಲವರು ಮಾತ್ರ ಇಂತಹ ಬೇಡಿಕೆ ಮಾಡುತ್ತಿದ್ದಾರೆ. ಯಾರಿಗೆ ಟಿಕೆಟ್ ಬೇಕೋ ಅವರು ಸ್ವತಃ ಖರೀದಿ ಮಾಡಿಕೊಳ್ಳಲಿ. ಇದನ್ನು ಸಭೆಯಲ್ಲಿ ಚರ್ಚಿಸುವ ಅಗತ್ಯವೇ ಇಲ್ಲ ಎಂದು ತಿಳಿಸಿದರು.

