ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಭಾರತೀಯ ಜನತಾ ಪಕ್ಷ ವತಿಯಿಂದ ಪಂಡಿತ್ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಅಂಗವಾಗಿ ಕಾರ್ಯಕರ್ತರಿಗಾಗಿ ಮಾರ್ಚ್ 29ರಿಂದ ಮೂರು ದಿನಗಳ ಕಾಲ ವಿಶೇಷ ಪ್ರಶಿಕ್ಷಣ ವರ್ಗವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಸಿದ್ದರಾಮ ಕಾಖಂಡಕಿ ತಿಳಿಸಿದ್ದಾರೆ.
ಸ್ಥಳೀಯ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಶ್ರೀ ಯಲ್ಲಮ್ಮ ದೇವಿ ಶಾಲೆಯಲ್ಲಿ ನಡೆಯಲಿರುವ ಈ ವರ್ಗವನ್ನು ಎರಡು ತಂಡಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಮೊದಲ ತಂಡದ ಪ್ರಶಿಕ್ಷಣ ವರ್ಗ ಮಾರ್ಚ್ 29ರಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ಬಸವನ ಬಾಗೇವಾಡಿ ಪುರಸಭೆ, ಮುತ್ತಗಿ ಜಿಪಂ, ಗೊಳಸಂಗಿ ಜಿಪಂ, ನಿಡಗುಂದಿ ಪ.ಪಂ ಹಾಗೂ ಆಲಮಟ್ಟಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದರ ಸಮಾರೋಪ ಸಮಾರಂಭ ಮಾರ್ಚ್ 30ರಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ.
ಇನ್ನೂ ಎರಡನೇ ತಂಡದ ವರ್ಗ ಮಾರ್ಚ್ 30ರಂದು ಸಂಜೆ 5 ಗಂಟೆಗೆ ಆರಂಭವಾಗಲಿದ್ದು, ಕೊಲ್ಹಾರ ಪ.ಪಂ, ಮನಗೂಳಿ ಪ.ಪಂ, ಉಕ್ಕಲಿ, ಮುಳವಾಡ ಹಾಗೂ ಕೂಡಗಿ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ತಂಡದ ಸಮಾರೋಪ ಮಾರ್ಚ್ 31ರಂದು ಸಂಜೆ 6.30ಕ್ಕೆ ನಡೆಯಲಿದೆ.
ಪ್ರಶಿಕ್ಷಣ ವರ್ಗದಲ್ಲಿ ಪಕ್ಷದ ಇತಿಹಾಸ, ವಿಕಾಸ, ಸರ್ಕಾರಗಳ ಸಾಧನೆಗಳು, ಸಂಘಟನೆ ಬಲಪಡಿಸುವ ಮಾರ್ಗಗಳು ಹಾಗೂ ಕಾರ್ಯವಿಸ್ತರಣೆಯ ದೃಷ್ಟಿಕೋನ ಸೇರಿದಂತೆ ಹಲವು ವಿಷಯಗಳ ಕುರಿತು ಪಕ್ಷದ ಮುಖಂಡರು ಗೋಷ್ಠಿಗಳನ್ನು ನಡೆಸಲಿದ್ದಾರೆ.
ವರ್ಗದಲ್ಲಿ ಭಾಗವಹಿಸುವ ಕಾರ್ಯಕರ್ತರು ಸ್ಥಳದಲ್ಲೇ ವಾಸ್ತವ್ಯ ಮಾಡಿ ನಂತರ ತಮ್ಮ ಕಾರ್ಯಕ್ಷೇತ್ರಗಳಿಗೆ ತೆರಳಲಿದ್ದಾರೆ. ಬಸವನ ಬಾಗೇವಾಡಿ ಮತಕ್ಷೇತ್ರದ ವ್ಯಾಪ್ತಿಯ 1300ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಪಾಲ್ಗೊಳ್ಳುವವರು.
ವರ್ಗದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಕರ್ತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟ ಎಲ್ಲ ಕಾರ್ಯಕರ್ತರು ತಪ್ಪದೆ ಭಾಗವಹಿಸುವಂತೆ ಸಿದ್ದರಾಮ ಕಾಖಂಡಕಿ ಮನವಿ ಮಾಡಿದ್ದಾರೆ.
