ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಶರಣ ಪರಂಪರೆಯಲ್ಲಿ ಸಾಮೂಹಿಕ ವಿವಾಹಮಹೋತ್ಸವದ ಪರಿಕಲ್ಪನೆ ಆರಂಭಗೊಂಡಿದ್ದು, ಇಂದಿಗೂ ಸರಳ ಸಾಮೂಹಿಕ ವಿವಾಹಗಳು ಮಹತ್ವ ಪಡೆದುಕೊಂಡಿವೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಅವರು ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಶರಣ ಭೋಗೇಶ್ವರ ಜಾತ್ರಾಮಹೋತ್ಸವದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ವೈರಾಗಿಗಳು, ಚಟಗಳ ದಾಸರು, ದುಡಿದು ತಿನ್ನದವರು ಗಂಡಸರಲ್ಲ ಇಂಥವರು ಮದುವೆಯಾಗಬಾರದು ಎಂದು ಹೇಳಿದ ಸ್ವಾಮೀಜಿ ಸಂಪತ್ತಿನ ವ್ಯಾಮೋಹ ಬಿಟ್ಟು ಆದರ್ಶದ ಸರಳತೆ ಸಂತೃಪ್ತಿ ಬದುಕನ್ನು ತಮ್ಮದಾಗಿಸಿಕೊಳ್ಳಬೇಕೆಂದರು.
ಪ್ರತಿಯೊಬ್ಬರೂ ಮೂರು ಮಕ್ಕಳನ್ನು ಹೆತ್ತು ಮಕ್ಕಳನ್ನೆ ಸಂಪತ್ತು ಮಾಡಿ ಎಂದು ನವದಂಪತಿಗಳಿಗೆ ಸಲಹೆ ನೀಡಿದರು.
ಉದ್ಘಾಟನೆ ಮಾಡಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ‘ ಸರಳಮದುವೆಯ ಸಂಪ್ರದಾಯ ಹೆಚ್ಚೆಚ್ಚು ನಡೆಯಲಿ, ಮಾಜಿಸಚಿವ ದಿ. ಎಂ.ಸಿ.ಮನಗೂಳಿ ಪ್ರತಿಷ್ಠಾನ ಸಾಮೂಹಿಕ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆಯನ್ನು ಶಾಸಕ ಅಶೋಕ ಮನಗೂಳಿ ವಹಿಸಿದ್ದರು.
೧೧ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಕಡಕೋಳದ ರುದ್ರಮುನಿ ಶಿವಾಚಾರ್ಯರು, ಗೋಲಗೇರಿ ಶ್ರೀ, ಗೊಳಸಾರ ಅಭಿನವ ಪುಂಡಲಿಂಗ ಸ್ವಾಮೀಜಿ, ಅಭಿನವ ವಿರೇಶ್ವರ ಗುರೂಜಿ, ರೈತ ಸಂಘದ ರಾಜ್ಯ ಪ್ರಮುಖ ಶಶಿಕಾಂತ ಗುರೂಜಿ,ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕೌಲಗಿ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ ಮೊದಲಾದವರಿದ್ದರು.
ಮಡಿವಾಳಶಾಸ್ತ್ರೀ ಸ್ವಾಗತಿಸಿದರು. ಶಿವಶರಣ ಕತ್ತಿ ನಿರೂಪಿಸಿದರು. ಗಜಾನಂದ ಬಿರಾದಾರ ವಂದಿಸಿದರು.

