ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಮಿನಿವಿಧಾನಸೌಧದ ಆವರಣಗೋಡೆ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಬಣ) ಯ ಪದಾಧಿಕಾರಿಗಳು, ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರವಿಂದ ಸಾಲವಾಡಗಿ ಮಾತನಾಡಿ, ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿ ಪುರಸಭೆಯಿಂದ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಜಿ ಪ್ಲಸ್ ಮಾದರಿಯಲ್ಲಿ ನಿರ್ಮಾಣ ಮಾಡಿರುವ ಮನೆಗಳು ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿವೆ. ಈ ಮನೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಿದ ನಂತರ ಈ ಯೋಜನೆಯ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು. ಪುರಸಭೆಯಿಂದ ಮನೆ ಹಂಚಿಕೆಯಲ್ಲಿ ಸರ್ಕಾರದ ಮೀಸಲಾತಿ ನಿಯಮ ಸರಿಯಾಗಿ ಮಾಡದೇ ಹಂಚಿಕೆ ಮಾಡಲಾಗಿದೆ. ಸರ್ಕಾರದ ನಿಯಮದ ಪ್ರಕಾರ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ವಾಸವಾಗಿರಬೇಕು. ಯಾವುದೇ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ವಾಸವಾಗಿರುವದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಅಧಿಕಾರಿಗಳು ಸಿಗುವುದಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದ ಅವರು, ತಾಲೂಕಿನ 15 ಗ್ರಾಮ ಪಂಚಾಯಿತಿಗಳ್ಲಿ ವರ್ಗ 1 ರಲ್ಲಿನ ಹಣ ಖರ್ಚು ಮಾಡಿದ್ದರ ಕುರಿತು ತನಿಖೆಯಾಗಬೇಕು.ಅಮೃತ ಸರೋವರ ಯೋಜನೆಯಡಿ ಕೈಗೊಂಡ ಕಣಕಾಲ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಸೇರಿದಂತೆ ನಮ್ಮ ಸಂಘಟನೆಯು ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ಮಾಡಲಾಗುತ್ತಿದೆ. ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಧರಣಿಯಲ್ಲಿ ಮುಖಂಡರಾದ ಅಶೋಕ ಕೊರವೇರ, ಪ್ರಕಾಶ ನಾಟೀಕಾರ, ರಮೇಶ ಭಜಂತ್ರಿ, ಸಾವಿತ್ರಿ ಕೊರವೇರ, ಸವಿತಾ ತಳೇವಾಡ, ಹಣಮಂತ್ರಾಯ ಬಸರಡ್ಡಿ, ಮಲ್ಲಣ್ಣ ದಯಾರನಹಳ್ಳಿ, ವಿಠ್ಠಲ ಈಳಗೇರ, ವಿಶ್ವನಾಥ ಹೂಗಾರ, ಮಹಾದೇವಿ ಮಾದರ, ಲಕ್ಷ್ಮೀಬಾಯಿ ಮಾದರ, ಅನಿತಾ ಮಾದರ, ಯಲ್ಲವ್ವ ಮಾದರ, ರಜಾಕಬಿ ತಾಂಬೋಳಿ, ಭೀಮರಾಮ ಮಾಸ್ತಿ, ಪ್ರಭು ದಳವಾಯಿ, ಮೌನೇಶ ಹೆಬ್ಬಾಳ, ಫಯಾಜ ದೇಗಿನಾಳ ಇತರರು ಇದ್ದರು.

