ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಿಶ್ವಾಸ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಬಾಗಲಕೋಟೆ ಉಪ ಚುನಾವಣೆಯಲ್ಲಿ ಜನರ ಅಭೂತಪೂರ್ವ ಉತ್ಸಾಹ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವುದು ಸೂರ್ಯ ಚಂದ್ರರಿರುವಷ್ಟೆ ಸತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಮುಖಂಡ ಡಾ. ತೌಫಿಕ್ ಪಾರ್ಥನಳ್ಳಿ ಅವರ ನಿವಾಸದಲ್ಲಿ ಸುದ್ದಿಗಾರರ ಜೋತೆ ಅವರು ಮಾತನಾಡಿದರು.
ಬಿಜೆಪಿಯ ಹಿಂದುತ್ವ ಕಠಿಣವಾಗಿ ಟೀಕಿಸಿದ ಸಚಿವರು, ಅಜೆಂಡಾವನ್ನು ಬಿಜೆಪಿಯವರು ಮಾತ್ರ ಹಿಂದೂಗಳಾ? ನಾವೆಲ್ಲ ಯಾರು? ನಾವೂ ಹಿಂದೂಗಳೇ. ಆದರೆ ನಮ್ಮದು ಬಸವಣ್ಣನವರ ತತ್ವದ, ಪರಮಹಂಸರ, ಸ್ವಾಮಿ ವಿವೇಕಾನಂದರ ತತ್ವದ ಹಿಂದುತ್ವ. ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಸಂವಿಧಾನದ ಅಡಿಯಲ್ಲಿ ಎಲ್ಲ ಜಾತಿ-ಧರ್ಮದವರು ಅಣ್ಣ-ತಮ್ಮಂದಿರಂತೆ ಬದುಕುವುದು ನಮ್ಮ ಹಿಂದುತ್ವವಾಗಿದೆ. ದಲಿತರು, ಹಿಂದುಳಿದವರು ಹಿಂದೂಗಳಲ್ಲವೇ? ಹಿಂದುತ್ವ ಎಂಬುದು ಯಾರೊಬ್ಬರ ಖಾಸಗಿ ಆಸ್ತಿಯಲ್ಲ, ಅದು ನಮ್ಮೆಲ್ಲರ ಆಸ್ತಿ ಎಂದು ಗುಡುಗಿದರು.
ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ ಅವರು, ಅಂಬಾನಿ, ಅದಾನಿಗಳಿಗೆ ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಮಾರಿಕೊಂಡವರಿಂದ ನಾವೇನು ನಿರೀಕ್ಷಿಸಲು ಸಾಧ್ಯ? ಸಾಮಾನ್ಯ ಮನುಷ್ಯ ಸ್ವಾಭಿಮಾನದಿಂದ ಆರ್ಥಿಕವಾಗಿ ಅಭಿವೃದ್ಧಿಯಾಗುವುದೇ ನಿಜವಾದ ದೇಶದ ಅಭಿವೃದ್ಧಿ. ಇಂದು ಮತದಾರರ ಒಲವು ಸಂಪೂರ್ಣವಾಗಿ ಕಾಂಗ್ರೆಸ್ ಪರವಾಗಿದೆ ಎಂದರು.
ಆಲಮಟ್ಟಿ ಜಲಾಶಯದ ವಿಚಾರವಾಗಿ ಮಾತನಾಡುತ್ತಾ, ಗೆಜೆಟ್ ಅಧಿಸೂಚನೆ ಹೊರಡಿಸುವ ಯೋಗ್ಯತೆ ಇಲ್ಲದವರು ನಮ್ಮನ್ನು ಟೀಕಿಸುತ್ತಿದ್ದಾರೆ. ಗೆಜೆಟ್ ಆಗದಿದ್ದರೂ ನಾವು ರೈತರಿಗೆ 30 ರಿಂದ 40 ಲಕ್ಷ ರೂ.ಗಳವರೆಗೆ ಪರಿಹಾರ ನೀಡುತ್ತಿದ್ದೇವೆ. ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿರುವ ಬಿಜೆಪಿಯವರಿಗೆ ಆಲಮಟ್ಟಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ಯಯಿಹಾ ಪಾರ್ಥನಳ್ಳಿ, ಕಾಂಗ್ರೆಸ್ ಮುಖಂಡ ಅಬುಬಕರ್ ಕುಡಚಿ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಶುಭಹಾರೈಸಿದರು.
ಅಂಜುಮನ್ ಸಮಿತಿ ಅಧ್ಯಕ್ಷ ಡಾ. ತೌಫಿಕ್ ಪಾರ್ಥನಳ್ಳಿ, ಅಪ್ಪಾಸಾಬ ಮನಗೂಳಿ, ಬಿ.ಜಿ. ಪಾಟೀಲ, ರಾಜೇಸಾಬ ಸೌದಾಗರ, ಅಬೂಬಕರ್ ಕುಡಚಿ, ಹಣಮಂತ ತೇಲಿ, ಜಬ್ಬಾರ್ ಮುಂಡೂಗನೂರ, ಅಶೋಕ ಹುಲ್ಯಾಳ, ಲಕ್ಷ್ಮಣ ಮುಚ್ಚಂಡಿ, ಸತ್ಯಪ್ಪ ಚನಾಳ, ವೆಂಕಟೇಶ ಗುಡೆಪ್ಪನವರ, ಅಮೋಘ ಮೌರ್ಯ ಸೇರಿದಂತೆ ಹಲವರಿದ್ದರು.

