ಕುಡಿಯಲು ನೀರಿಲ್ಲದೆ ಹತ್ತಳ್ಳಿ ಗ್ರಾಮದಲ್ಲಿ ನೂರಾರು ಪಕ್ಷಿಗಳ ಸಾವು | ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಹತ್ತಳ್ಳಿ ಗ್ರಾಮದ ಬೋರಿ ಹಳ್ಳದಲ್ಲಿ ನೂರಾರು ಪಕ್ಷಿಗಳು ಹಾಗೂ ಕೆಲವು ಕಾಡು ಪ್ರಾಣಿಗಳು ಸತ್ತಿರುವ ಘಟನೆಗೆ ಹಳ್ಳದ ಬದಿಯಲ್ಲಿರುವ ಗ್ರಾಮ ಪಂಚಾಯತಿ ಹಾಗೂ ಚಡಚಣ ಪಟ್ಟಣ ಪಂಚಾಯತಿಯವರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ಊರಿನ ಘಟಾರ (ಕಲುಷಿತ) ನೀರನ್ನು ನೇರವಾಗಿ ಬೋರಿ ಹಳ್ಳಕ್ಕೆ ಹರಿಬಿಟ್ಟಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಮತ್ತು ಬೇಸಿಗೆಯ ಕಾಲದಲ್ಲಿ ಹಳ್ಳ ಸಂಪೂರ್ಣ ಬತ್ತಿರುವದರಿಂದ ಪಕ್ಷಿಗಳ ಸಾವಿಗೆ ಕಾರಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳದ ಸುತ್ತಮುತ್ತ ನವಿಲುಗಳು, ಬಾತುಕೋಳಿಗಳು ಸೇರಿದಂತೆ ವಿವಿಧ ಪಕ್ಷಿಗಳು ಹಾಗೂ ನರಿ ಮುಂತಾದ ಕಾಡು ಪ್ರಾಣಿಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ. ಹಳ್ಳದಲ್ಲಿ ನಿಂತ ನೀರು ದುರ್ವಾಸನೆಯಿಂದ ಕಲುಷಿತಗೊಂಡಿದ್ದು, ಇದನ್ನು ಕುಡಿದ ಪಕ್ಷಿಗಳು ಮತ್ತು ಪ್ರಾಣಿಗಳು ಸಾವನ್ನಪ್ಪುತ್ತಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಾಷ್ಟ್ರಪಕ್ಷಿ ನವಿಲುಗಳ ಸಾವು ಜನರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಗ್ರಾಮಸ್ಥರ ಪ್ರಕಾರ, ಚಡಚಣ ಪಟ್ಟಣದ ಒಳಚರಂಡಿ ನೀರನ್ನು ಯಾವುದೇ ಶುದ್ಧೀಕರಣವಿಲ್ಲದೆ ನೇರವಾಗಿ ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ವಿಷಮಯವಾಗಿದೆ. ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಇರುವುದರಿಂದ ಪಕ್ಷಿಗಳು ಹಳ್ಳದಲ್ಲಿನಿಂತ ಇದೇ ನೀರನ್ನು ಕುಡಿಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದು, ಅದರ ಪರಿಣಾಮವಾಗಿ ಸಾವುಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಗಂಭೀರ ನಿರ್ಲಕ್ಷ್ಯ ಆರೋಪಗಳು ಕೇಳಿಬಂದಿವೆ. ಹಳ್ಳದ ನಿರ್ವಹಣೆ, ಶುದ್ಧೀಕರಣ ಹಾಗೂ ನೀರಿನ ಸಂರಕ್ಷಣೆ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನು ಕೆಲವರು ರೈತರು ಬಳಸುವ ಕೀಟನಾಶಕ ಔಷಧಗಳು ಅಥವಾ ಸಮೀಪದ ಕೈಗಾರಿಕಾ ಘಟಕಗಳ ಮಾಲಿನ್ಯವೂ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಿಖರ ಕಾರಣವನ್ನು ವೈಜ್ಞಾನಿಕ ತನಿಖೆಯ ನಂತರವೇ ತಿಳಿದುಬರಬೇಕಾಗಿದೆ.
ತಕ್ಷಣ ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರಿನ ಮಾದರಿ ಹಾಗೂ ಸತ್ತ ಪಕ್ಷಿಗಳ ಮಾದರಿಗಳನ್ನು ಪರೀಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಜೊತೆಗೆ ಹಳ್ಳಕ್ಕೆ ಹೊಂದಿಕೊಂಡಿರುವ ಗ್ರಾಮಗಳು ಮತ್ತು ಚಡಚಣ ಪಂಚಾಯತಿಯವರು ಘಟಾರ ನೀರನ್ನು ಹಳ್ಳಕ್ಕೆ ಬಿಡುವುದನ್ನು ತಕ್ಷಣ ನಿಲ್ಲಿಸಿ, ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ಪರಿಸರ ಸಂರಕ್ಷಣೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ದುರ್ಘಟನೆ ಗ್ರಾಮ ಪಂಚಾಯತಿ ಮತ್ತು ಚಡಚಣ ಪಟ್ಟಣ ಪಂಚಾಯತಿಯ ನಿರ್ಲಕ್ಷ್ಯವನ್ನು ಬಯಲಿಗೆಳೆದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

