ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಎರಡು ಬಾರಿ ಗೆದ್ದು ಇತಿಹಾಸ ನಿರ್ಮಿಸಿರುವ ಶಾಸಕ ಅನಿಲ್ ಚಿಕ್ಕಮಾದು ಅವರು ಅವಳಿ ತಾಲೂಕಿನ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಹೆಚ್ ಡಿ ಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ತೆರೆದು ಉದೋಗ್ಯ ನೀಡಬೇಕೆಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಸಹಕಾರ ವಿಭಾಗದ ಹೆಚ್ ಡಿ ಕೋಟೆ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಮಮತ ನವೀನ್ ಕುಮಾರ್ ಮನವಿ ಮಾಡಿದ್ದಾರೆ.
ತಾಲೂಕಿನ ಯರಹಳ್ಳಿಯಲ್ಲಿ ಮಾತನಾಡಿದ ಮಮತ ನವೀನ್ ಕುಮಾರ್, ಶಾಸಕ ಅನಿಲ್ ಚಿಕ್ಕಮಾದು ಅವರು ಅನೇಕ ಅಭಿವೃದ್ಧಿ ಕೆಲಸ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಳಚಲು ಸರ್ಕಾರದಿಂದ ಅನುದಾನ ತಂದು ರಸ್ತೆ, ಸಮುದಾಯ ಭವನ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದ್ದಾರೆ. ಆದರೆ ಹೆಚ್ ಡಿ ಕೋಟೆ, ಸರಗೂರು ತಾಲೂಕಿನಲ್ಲಿ ಯಾವುದೇ ಗಾರ್ಮೆಂಟ್ಸ್ ಫ್ಯಾಕ್ಟರಿ ಇಲ್ಲದ ಹಿನ್ನೆಲೆ ಅವಳಿ ತಾಲೂಕಿನ ಮಹಿಳೆಯರು ಕೆಲಸಕ್ಕಾಗಿ ಮೈಸೂರಿಗೇ ಹೋಗಬೇಕಾಗಿದೆ. ಇದರಿಂದ ಸಾಕಷ್ಟು ಕಾಲಹರಣ ಆಗುತ್ತಿದ್ದು, ಕುಟುಂಬ ನಿರ್ವಹಣೆಗೂ ಅನಾನುಕೂಲವಾಗಿದೆ. ಹೀಗಾಗಿ ಶಾಸಕರು ಮುಂಬರುವ ವಿಧಾನಸಭಾ ಚುನಾವಣೆಯೊಳಗೆ ಹೆಚ್ ಡಿ ಕೋಟೆ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ತೆರೆದು, ಮಹಿಳೆಯರಿಗೆ ಇಲ್ಲೇ ಕೆಲಸ ನೀಡಬೇಕೆಂದು ಮನವಿ ಮಾಡಿದ್ದಾರೆ.
ಹಳ್ಳಿಗಳಿಂದ ಆವೃತ್ತವಾಗಿರುವ ಅವಳಿ ತಾಲೂಕಿನ ಬಹುತೇಕ ಮಂದಿಗೆ ವ್ಯವಸಾಯ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ವ್ಯವಸಾಯವನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಬೆಳೆಗೆ ಉತ್ತಮ ಬೆಲೆ ಕೂಡ ಸಿಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ ನಡುವೆ ಮಧ್ಯವರ್ತಿಗಳ ಹಾವಳಿ ಕೂಡ ಜೋರಾಗಿದೆ. ಹೀಗಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಸಿಗಬೇಕಾದರೆ, ಹ್ಯಾಂಡ್ ಪೋಸ್ಟ್ ಅಕ್ಕಪಕ್ಕ ಮಾರುಕಟ್ಟೆ ತೆರೆಯಬೇಕು. ಈ ಮೂಲಕ ಮಾರುಕಟ್ಟೆಯ ಬೆಲೆ ನೇರವಾಗಿ ರೈತರಿಗೆ ಸಿಗುವಂತೆ ಶಾಸಕರು ಮಾಡಬೇಕೆಂದು ಮಮತ ನವೀನ್ ಕುಮಾರ್ ಮನವಿ ಮಾಡಿದ್ದಾರೆ.

