ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಅ.20 ರ ಶುಕ್ರವಾರ ಬೆ.11.30ಗಂ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಪತಿ ಡಾ.ಆರ್.ಎಸ್.ಮುಧೋಳ ವರದಿ ವಾಚನ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ, ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು.
ಈ ಘಟಿಕೋತ್ಸವದಲ್ಲಿ ಒಟ್ಟು 349 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುತ್ತಿದ್ದು, ಇವುಗಳಲ್ಲಿ 9 ಡಾಕ್ಟರೇಟ್, 1 ಎಂ.ಸಿ.ಎಚ್. ಯೂರಾಲಜಿ ವಿಭಾಗ, 113 ವೈದ್ಯಕೀಯ ಸ್ನಾತಕೋತ್ತರ ಪದವಿ, 4 ಫೆಲೋಶಿಪ್, 205 ಎಂ.ಬಿ.ಬಿ.ಎಸ್., 13 ಬಿ.ಎಸ್.ಸಿ. (ಎಂ.ಐ.ಟಿ.), 3 ಎಂ.ಎಸ್.ಸಿ. ಹಾಗೂ 1 ಎಂ.ಎಚ್.ಎ. ಅಲೈಡ್ ಹೆಲ್ತ್ ಸೈನ್ಸ್ನ ಸ್ನಾತಕೋತ್ತರ ಪದವಿಗಳು ಒಳಗೊಂಡಿವೆ. ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನಗಳನ್ನು ವಿತರಿಸಲಾಗುವುದು.
ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಶೃದ್ಧಾ ಹಾಗೂ ಡಾ. ಕೀರ್ತನಾ ತಲಾ ಒಂದು ಚಿನ್ನದ ಪದಕ, ಎಂ.ಬಿ.ಬಿ.ಎಸ್. ವಿಭಾಗದಲ್ಲಿ ಡಾ.ಮಯಾಂಕ್ ಅರೋರ 4 ಚಿನ್ನದ ಪದಕಗಳು ಹಾಗೂ ನಗದು ಬಹುಮಾನ, ಡಾ. ಅರೀಬಾ ಅಹಮದ್ 3 ಚಿನ್ನದ ಪದಕಗಳು, ಡಾ.ಅನಘಾ ಕೃಷ್ಣನ್ 2 ಚಿನ್ನದ ಪದಕಗಳು ಹಾಗೂ ಡಾ.ಶುಭಂ ಸುಪ್ರಿಯಾ ಒಂದು ಚಿನ್ನದ ಪದಕದೊಂದಿಗೆ ನಗದು ಬಹುಮಾನ, ಡಾ.ಜ್ಯೋತಿ ಶರ್ಮ, ಡಾ.ಆಯೇಷಾ ಸಿದ್ದಿಕಿ, ಡಾ.ರಾಜನ್ ಕುಮಾರ, ಡಾ.ನೂಪುರ ದಹಿಯಾ ತಲಾ ಒಂದು ಚಿನ್ನದ ಪದಕವನ್ನು ಮತ್ತು ಡಾ. ಶಕ್ತಿಸ್ವರೂಪ ಮಿಶ್ರ ಇವರು ನಗದು ಬಹುಮಾನವನ್ನು ಪಡೆಯಲಿದ್ದಾರೆ ಎಂದು ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್. ಎಸ್. ದೇವರಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment