ಸಿಂದಗಿಯಲ್ಲಿ ನಡೆದ ಎಂ.ಸಿ.ಮನಗೂಳಿ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನನ್ನ ನಿಲುವು ಸ್ಪಷ್ಟ. ನನ್ನ ಪಾಲಿಗೆ ದೇವರು ಎರಡನೇ ಸ್ಥಾನ, ಶಾಲಾ ಮಕ್ಕಳೇ ಪ್ರಥಮ. ಮಕ್ಕಳನ್ನು ದೇವರ ಸ್ಥಾನದಲ್ಲಿಟ್ಟು ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವುದೇ ನನ್ನ ಗುರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಿಂದಗಿ ಪಟ್ಟಣದ ಬಸವ ನಗರದಲ್ಲಿರುವ ಸರಕಾರಿ ಕನ್ಯಾ ಪ್ರೌಢಶಾಲಾ ಆವರಣದಲ್ಲಿ ಎಂ.ಸಿ.ಮನಗೂಳಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಸಿಂದಗಿ ಮತಕ್ಷೇತ್ರದ ಪ್ರಥಮ ಹಂತದ ೫೨ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನಾ ಮತ್ತು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಈ ಮೊದಲು ೨೦೦ ಕೆಪಿಎಸ್ಸಿ ಶಾಲೆಗಳಿದ್ದವು ಪ್ರಸ್ತುತ ೩೦೯ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ ಆದರೆ ನಮ್ಮ ಗುರಿ ೯೦೦ ಶಾಲೆಗಳನ್ನು ಏಕ ಕಾಲದಲ್ಲಿ ಪ್ರಾರಂಭಿಸುವ ಗುರಿಯನ್ನು ಹೊಂದಿದ್ದೇವೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪಿಯುಸಿ ಹಂತದ ಮಕ್ಕಳಿಗೆ ಪಠ್ಯ ಪುಸ್ತಕ, ಟೆಸ್ಟ್ ಬುಕ್ ಹಾಗೂ ಬಿಸಿ ಊಟದ ಯೋಜನೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಲಾಗಿದೆ. ದೇಶ ಅಭಿವೃದ್ದಿಯಾಗಬೇಕಾದರೆ ಎಲ್ಲಾ ಮಕ್ಕಳಿಗೆ ಸಮಾನ ಶಿಕ್ಷಣದ ವ್ಯವಸ್ಥೆ ಜಾರಿಯಾಗಬೇಕು ಆ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಯೋಜನೆ ಪ್ರಾರಂಭಿಸಲು ಮುಂದಾಗಿದೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ ಆದರೆ ಜೂನ ತಿಂಗಳ ಒಳಗೆ ಪೂರ್ಣಾವಧಿ ಶಿಕ್ಷಕರ ನೇಮಕಾತಿ ಮಾಡಲಾಗುವುದು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ತ ವ್ಯವಸ್ಥೆ ಮಾಡಲಾಗಿದೆ ಇದರಿಂದ ಮಕ್ಕಳ ಕಲಿಕೆ ವೈಜ್ಞಾನಿಕವಾಗಿ ಸಾಗತ್ತಿದೆ. ವಿಜಯಪುರ ಜಿಲ್ಲೆ ನಕಲು ಮುಕ್ತ ಜಿಲ್ಲೆಯಾಗಬೇಕು ಆ ನಿಟ್ಟಿನಲ್ಲಿ ಶಿಕ್ಷಕರು ಜಾಗೃಕತೆಯಿಂದ ತಮ್ಮ ಕಾರ್ಯ ನಿರ್ವಹಣೆ ಮಾಡಬೇಕು. ಕಲಿಕೆಯಿಂದ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ಶಿಕ್ಷಕರು ತಗೆದುಕೊಳ್ಳಬೇಕು. ಬೇರೆ ಬೇರೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಪಾಸಾಗಲು ೩೦ ಅಂಕಗಳ ನಿಗದಿ ಇದೆ ಈ ಬಾರಿ ನಮ್ಮ ರಾಜ್ಯದಲ್ಲಿಯೂ ೩೩ ಅಂಕ ಪಡೆದರೆ ಸಾಕು ಇದು ನಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಈ ಉದ್ದೇಶದಿಂದ ಈ ಬಾರಿ ಆದೇಶ ಮಾಡಲಾಗಿದೆ. ದೈಹಿಕ ಶಿಕ್ಷಕರು ಸೇರಿದಂತೆ ಈ ಬಾರಿ ೧೧ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಸಿಂದಗಿ ತಾಲೂಕಿನ ಕೋರಳ್ಳಿ ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿ ಕಾಲೇಜು ಮಂಜೂರಾತಿ ನೀಡಲಾಗಿದೆ. ಕೆಪಿಎಸ್ಸಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಲು ಕ್ರಮ ಮುಂದಿನ ದಿನಮಾನಗಳಲ್ಲಿ ಜರುಗಿಸುತ್ತೇವೆ ಎಂದ ಅವರು ರಾಜ್ಯದ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ ಮಾತನಾಡಿ, ದಿ.ಎಮ್.ಸಿ.ಮನಗೂಳಿ ಪ್ರತಿಷ್ಠಾನದಿಂದ ಮತಕ್ಷೇತ್ರದ ೩೧೪ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸುಸಜ್ಜಿತವಾದ ಶುದ್ದ ಕುಡಿಯುವ ನೀರಿನ ಘಟಕವನ್ನು ವಿತರಿಸುವ ಕನಸು ಹೊಂದಿದ್ದೇವೆ. ಪ್ರಸ್ತುತ ಮೊದಲ ಹಂತದಲ್ಲಿ ೫೨ ಶುದ್ದ ಕುಡಿಯುವ ನೀರಿನ ಘಟಕವನ್ನು ವಿತರಿಸಲಾಗಿದೆ ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಶಾಲೆಗಳಿಗೆ ಈ ಯೋಜನೆ ಮುಟ್ಟಲಿದೆ. ದಿ.ಎಮ್.ಸಿ.ಮನಗೂಳಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ನೀಡಿದ್ದಾರೆ ಅವರ ಹೆಜ್ಜೆಯಲ್ಲಿ ನಾನು ಸಹ ಶಾಶ್ವತ ಕಾರ್ಯಗಳನ್ನು ಮಾಡಲು ಮುಂದಾಗುತ್ತಿದ್ದೇನೆ. ಪ್ರತಿಷ್ಠಾನ ಸಮಾಜೋಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅವರ ಹೆಸರನ್ನು ಅಜರಾಮರವಾಗಿ ಉಳಿಯುವಂತೆ ಮಾಡಲು ಮುಂದಾಗಿದ್ದೇವೆ ಎಂದರು.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಆಲಮೇಲ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಊರನ ಹಿರಿಯಮಠದ ಶಿವಾನಂದ ಶಿವಾಚಾರ್ಯರು, ಅರಕೇರಿ ಮೂಲಪೀಠ ಮುಮ್ಮಟಗುಡ್ಡದ ಅವಧೂತಸಿದ್ಧ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶರಣಪ್ಪ ವಾರದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ವಿ.ಸಾಲಿಮಠ, ಡಾ.ಸಿ.ಕೆ.ಹೊಸಮನಿ, ಬಿಇಒ ಎಂ.ಬಿ.ಯಡ್ರಾಮಿ, ಪ್ರತಿಷ್ಠಾನದ ಕಾರ್ಯದರ್ಶಿ ಸೋಮನಗೌಡ ಬಿರಾದಾರ, ಸದಸ್ಯರಾದ ವಿ.ಬಿ.ಕುರಡಿ, ಸಿ.ವಿ.ಪಟ್ಟಣಶೆಟ್ಟಿ, ಬಿ.ಎ.ಬಿರಾದಾರ, ಆರ್.ಎ.ಕೋಳಕುರ, ಬಿ.ಆರ್.ಕಾಂಬಳೆ, ಬಿ.ಎಸ್.ಹಿಂಚಗೇರಿ, ಎಲ್.ಬಿ.ಗುಗ್ಗರಿ, ಎಂ.ಎ.ಸುಲ್ಪಿ, ಎಸ್.ಎಸ್.ಪಾಟೀಲ, ಎಸ್.ಎಸ್.ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಸಿದ್ದಮ್ಮಗೌಡತಿ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಕ.ರಾ.ಪ್ರಾ.ಶಾ ಶಿಕ್ಷಕರ ಸಂಘ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಗುರಣ್ಣಗೌಡ ಬಿರಾದಾರ ನಾಗಾವಿ, ಶರಣಬಸವ ಲಂಗೋಟಿ ಸೇರಿದಂತೆ ಇತರರು ಇದ್ದರು.

