ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ಬಜೆಟ್ನಲ್ಲಿ ವಿಜಯಪುರ ಮಹಾನಗರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತು ಸದಸ್ಯ ಕೇಶವ ಪ್ರಸಾದ್ ಎಸ್. ಆರೋಪಿಸಿದ್ದಾರೆ.
ಶುಕ್ರವಾರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಹುನಿರೀಕ್ಷಿತ ವಿಮಾನ ನಿಲ್ದಾಣವನ್ನು ಯಾವಾಗ ಪ್ರಾರಂಭಮಾಡಲಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ವಿಶೇಷವಾಗಿ ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ನಿರ್ದಿಷ್ಟವಾದ ಅನುದಾನವನ್ನು ಒದಗಿಸಿಲ್ಲ. ಕಳೆದ ಬಜೆಟ್ನಲ್ಲಿ ಘೋಷಿಸಲಾದ ಫುಡ್ಪಾರ್ಕ್ ಹಾಗೂ ದ್ರಾಕ್ಷಿ ಬೆಳೆಗಾರರ ಕೋಲ್ಡ್ ಸ್ಟೋರೇಜ್ ಪ್ರಗತಿಯಾಗಿಲ್ಲ, ಈ ಬಜೆಟ್ನಲ್ಲಿ ಯಾವುದೇ ಪ್ರಸ್ಥಾಪವಿಲ್ಲ. ಉತ್ತರ ಕರ್ನಾಟಕ ಭಾಗದ ಕ್ರೀಡೆಯ ಪ್ರೋತ್ಸಾಹಕ್ಕೆ ವಿಜಯಪುರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಹುಉಪಯೋಗಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದೆಂದು ಆಶಿಸಲಾಗಿತ್ತು, ಅದರ ಬಗ್ಗೆ ಈ ಬಜೆಟ್ನಲ್ಲಿ ಚಕಾರವಿಲ್ಲ. ಶ್ರೀ ಲಿಂ. ಶ್ರೀ ಸಿದ್ದೇಶ್ವರ ಶ್ರೀಗಳ ಅಧ್ಯಯನ ಕೇಂದ್ರ ಸ್ಥಾಪಿಸುವ ಯಾವುದೇ ಪ್ರಸ್ಥಾಪವಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ವರ್ಷದಲ್ಲಿ ತರಗತಿ ಪ್ರಾರಂಭಿಸಲಾಗುವುದೆಂದು ಆಶಿಸಲಾಗಿತ್ತು. ವಿಜಯಪುರ ಮಹಾನಗರವು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನದ ಬಗ್ಗೆ ಪ್ರಸ್ಥಾಪವಿಲ್ಲದೆ ನಿರಾಸೆಯಾಗಿದೆ. ಜಿಲ್ಲೆಯಲ್ಲಿ ಉತ್ಕೃಷ್ಟ ಮಟ್ಟದ ದ್ರಾಕ್ಷಿ ಹಾಗೂ ಹತ್ತಿಯನ್ನು ಬೆಳೆಯಲಾಗುತ್ತಿದ್ದು, ವೈನ್ ಪಾರ್ಕ್ ಹಾಗೂ ಜವಳಿ ಪಾರ್ಕ್ ಸ್ಥಾಪನೆಯ ಬಗ್ಗೆ ಇದ್ದ ಕನಸುಗಳು ಬತ್ತಿಹೋಗಿವೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅನುದಾನವನ್ನು ನೀಡಿ ಮಹಿಳಾ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಠಿಸಿಲ್ಲ. ಲಿಂಬೆ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿದ ವಿಚಾರಗಳಿಗೆ ವಿಶೇಷ ಮಾರುಕಟ್ಟೆ ಸ್ಥಾಪನೆಯ ಬಗ್ಗೆ ಪ್ರಸ್ಥಾಪವಿಲ್ಲ ಎಂದು ಎಂಎಲ್ಸಿ ಕೇಶವಪ್ರಸಾದ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

