ಬಸವನಬಾಗೇವಾಡಿ: ಬರದ ನಾಡು ಎಂದು ಕುಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಗೆ ಈಗ ಕರೆಂಟಿಗೂ ಬರ ಬಂದೊದಗಿದೆ. ಈ ವರ್ಷ ಬೀಕರ ಬರಗಾಲ ಆವರಿಸಿ ಮುಂಗಾರು ಬೆಳೆ ಹಾಳಾಗುತ್ತಿದ್ದರೂ ಸಹ ಸಮರ್ಪಕ ವಿದ್ಯುತ್ ಕೊಡದೆ ಸರಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕೂಡಲೆ ಹೊರರಾಜ್ಯದಿಂದಾದರೂ ಖರೀದಿಸಿ ಕೃಷಿಗೆ ನೀರುಣಿಸಲು ಸಮರ್ಪಕ ವಿದ್ಯುತ್ ಒದಗಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರಾಜ್ಯ ಸರಕಾರದ ವಿರುದ್ದ ಹರಿ ಹಾಯ್ದಿದ್ದಾರೆ.
ಮನಗೂಳಿ ಹೆಸ್ಕಾಂ ಇಲಾಖೆಗೆ ರೈತರೊಂದಿಗೆ ತೆರಳಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ವ್ಹಿ.ಸಂಪನ್ನವರ ಇವರಿಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗ ಕಾಲುವೆಗಳಿಗೆ ನೀರು ಹರಿಸಲು ಐ.ಸಿ.ಸಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ರವರು ಎಲ್ಲಾ ಕಾಲುವೆಗಳಿಗೆ ನೀರು ಹರಿಸಲು ವಾರಬಂದಿ ಬದಲಾಯಿಸಿ ಒಂದು ಕಡೆ ಆದೇಶ ನೀಡಿದ್ದಾರೆ. ಇನ್ನೊಂದು ಕಡೆ ಮಸೂತಿ ಜಾಕವೇಲ್ ಬಳಿ ವಿದ್ಯುತ್ ಸರಬರಾಜು ಮಾಡುವ ಸಿಟಿ ಉಪಕರಣ ಸುಟ್ಟಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಒಬ್ಬೊಬ್ಬ ಅಧಿಕಾರಿಗಳು ಒಂದೊಂದು ತರಹ ಹೇಳಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಒಟ್ಟಾರೆ ಸರಕಾರ ಒಂದು ಕಡೆ ನೀರು ಕೊಡದ ಹಾಗೆ ನಾಟಕ ಮಾಡುತ್ತಾ, ಇತ್ತ ಕಡೆ ಕರೆಂಟು ಕೂಡಾ ಕೊಡದೆ ನೀರಿನಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ರಾಜ್ಯ ಸರಕಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಸರಕಾರ ಸರಿಯಾಗಿ ವಿದ್ಯುತ್ ಪೂರೈಸುವ ಮೂಲಕ ರೈತರ ಬೆಳೆಗಳಿಗೆ ನೀರುಣಿಸಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ. ಬಸವರಾಜ ತೊರವಿ. ಈರಣ್ಣ ಶಿರೂರ. ಶರಣು ಇಟಗಿ, ಮಲ್ಲಯ್ಯ ಹಿರೇಮಠ, ಈರಪ್ಪ ಗುಳೇದ, ಮಲ್ಲಿಕಾರ್ಜುನ ಮಳ್ಳಿ, ಸಿದ್ದಪ್ಪ ವಿವೇಕಿ, ಮುದಕಪ್ಪ ಹಿಟ್ನಳ್ಳಿ, ಸಂಗಪ್ಪ ಗಾಣಿಗೇರ, ಮಲ್ಲು ಹುಣಶ್ಯಾಳ, ಸುಭಾಷ ಹಣಮಗೊಂಡ, ರಮೇಶ ಬೆಲ್ಲದ, ಅಪ್ಪುಗೌಡ ಪಾಟೀಲ, ಬಸವರಾಜ ಬ್ಯಾಕೋಡ, ಶಿವಾನಂದ ಜಾಡರ, ಪ್ರಕಾಶ ದಿನ್ನಿ, ಶಂಕ್ರೆಪ್ಪ ಜಾಲಗೇರಿ ಇದ್ದರು.
Related Posts
Add A Comment