ರಾಜ್ಯಮಟ್ಟದ ಪ್ರಥಮ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷರಾದ ಹ.ಮ.ಪೂಜಾರಿ ಗುರುಗಳ ಕುರಿತ ವಿಶೇಷ ಲೇಖನ
“ಬನ್ನಿ ನಮ್ಮ ಮಕ್ಕಳಿಗಾಗಿ ಜೀವಿಸಿ” ಎಂಬ ಪ್ರೋಬೆಲ್ ಅವರ ಮಾತನ್ನು ಅಕ್ಷರಶಃ ಅರಿತು ಆಚರಣೆಯಲ್ಲಿ ತಂದ ಅಪರೂಪದ ಆದರ್ಶ ಶಿಕ್ಷಕ ಸಾಹಿತಿ ಹ.ಮ. ಪೂಜಾರ ಗುರುಗಳು ಶಿಕ್ಷಕ ವೃತ್ತಿಯ ಶಿಖರ, ಸಾಹಿತಿಗಳ ತೊಟ್ಟಿಲು ವಿಜಯಪುರದ ಹಿರಿಯ ತಲೆಮಾರಿನ ಮಕ್ಕಳ ಸಾಹಿತಿಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಹ.ಮ. ಪೂಜಾರ ಗುರುಗಳು ವೃತ್ತಿಯಿಂದ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದು, ಪ್ರವೃತ್ತಿಯಿಂದ ಸಾಹಿತಿಯಾಗಿ ಅವಿಶ್ರಾಂತವಾಗಿ ಅಮೂಲ್ಯ ಕೃತಿಗಳನ್ನು ನೀಡುತ್ತಿದ್ದಾರೆ. ಇದೇ ಅಕ್ಟೋಬರ್-೧೨ ರಂದು ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಲಿರುವ ರಾಜ್ಯಮಟ್ಟದ ಪ್ರಥಮ ಶಿಕ್ಷಕ ಸಾಹಿತಿಗಳ ಸಮ್ಮೇಳನದ ಸರ್ವಾಧ್ಯಕ್ಷರ ಗೌರವ ಸ್ಥಾನ ಸಿಂದಗಿಯ ರಾಷ್ಟçಪ್ರಶಸ್ತಿ ಪುರಸ್ಕೃತ ಆದರ್ಶ ಶಿಕ್ಷಕ ಹ.ಮ. ಪೂಜಾರ ಗುರುಗಳಿಗೆ ಒಲಿದು ಬಂದಿದ್ದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದು ಅವರ ಶಿಕ್ಷಣ ಮತ್ತು ಸಾಹಿತ್ಯ ಸಾಧನೆಗೆ ಸಂದ ಗೌರವವಾಗಿದೆ. ಸೂಕ್ತ, ಸಮರ್ಥ ವ್ಯಕ್ತಿಯಾದ ಹ.ಮ. ಪೂಜಾರ ಗುರುಗಳನ್ನು ಮೊದಲ ರಾಜ್ಯಮಟ್ಟದ ಶಿಕ್ಷಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಾಗಲಕೋಟೆಯ ಸಾಹಿತ್ಯ ಬಳಗ ಅಭಿನಂದನಾರ್ಹರು. ತನ್ನಿಮತ್ತ ಹ.ಮ. ಪೂಜಾರ ಗುರುಗಳನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಆಶಯವಾಗಿದೆ.
ಹ.ಮ. ಪೂಜಾರ ಅವರ ಪೂರ್ಣ ಹೆಸರು ಹಣಮಂತ್ರಾಯ .ಮನ್ನಪ್ಪ. ಪೂಜಾರ, ಅವರು ಮನ್ನಪ್ಪ ಮತ್ತು ಗುರುಬಾಯಿ ಅವರ ಪುಣ್ಯ ಉದರದಲ್ಲಿ ೩ನೇ ಮಾರ್ಚ ೧೯೪೩ ರಂದು ಸಿಂದಗಿ ತಾಲೂಕಿನ ಬಮ್ಮನಹಳ್ಳಿಯಲ್ಲಿ ಜನಿಸಿದರು. ತಂದೆ ಮನ್ನಪ್ಪ ಪೂಜಾರ ಅವರು ಆಲಮೇಲದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರಿಂದ ಹ.ಮ. ಪೂಜಾರ ಅವರ ಆರಂಭಿಕ ಶಿಕ್ಷಣ ಆಲಮೇಲದಲ್ಲಿಯೇ ಮುಗಿಸಿ ಮಾಧ್ಯಮಿಕ ಶಿಕ್ಷಣ ಸಿಂದಗಿಯಲ್ಲಿ ಪೂರ್ಣಗೊಳಿಸಿ ನಂತರ ಬಿ.ಎ, ಬಿ.ಈಡಿ ಪದವಿ ಪಡೆದು ೧೯೬೧ ರಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೯೩ ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿ ೨೦೦೧ ರ ವರೆಗೆ ಪ್ರೌಢ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗಿದ ಆದರ್ಶ ಶಿಕ್ಷಕ ಹ.ಮ. ಪೂಜಾರ ಗುರುಗಳು ಶಿಕ್ಷಕ ವೃತ್ತಿ ನಿರತ ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ.
ಶಿಕ್ಷಕರಿಗೆ ಕಲಿಸುವ ವಿಷಯದಲ್ಲಿ ಪ್ರಭುತ್ವ, ವೃತ್ತಿಯ ಬಗ್ಗೆ ಬದ್ಧತೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ ಅಗತ್ಯ ಎನ್ನುವ ಹ.ಮ. ಪೂಜಾರ ಗುರುಗಳು ಈ ಮೂರು ಗುಣಗಳನ್ನು ತಮ್ಮ ವೃತ್ತಿ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಾಳಿದವರು. ಮಕ್ಕಳೇ ದೇವರು, ಶಾಲೆಯೇ ದೇವಾಲಯ, ಶಿಕ್ಷಕರೇ ಪೂಜಾರಿಗಳೆಂಬ ಬಂಥನಾಳ ಶಿವಯೋಗಿಗಳ ವಾಣಿಯನ್ನು ಅಕ್ಷರಶಃ ಅರಿತು ಮಕ್ಕಳ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ತಮ್ಮ ಬೋಧನೆಯಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಂಡು ಸೃಜನಾತ್ಮಕವಾಗಿ ಸಮರ್ಥ ಬೋಧನೆಗೈದು ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು. ತಮ್ಮ ವೃತ್ತಿ ಜೀವನದುದ್ದಕ್ಕೂ ನಿರಂತರ ವ್ಯಾಪಕ ಮೌಲ್ಯಮಾಪನದ ಮೂಲಕ ಮಕ್ಕಳ ಕಲಿಕಾ ದೋಷಗಳನ್ನು ಗುರ್ತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ಮಕ್ಕಳನ್ನು ಪರಿಪೂರ್ಣರನ್ನಾಗಿಸಿದ್ದಾರೆ. ಅವರು ಮುಖ್ಯಾಧ್ಯಾಪಕರಾಗಿದ್ದಾಗ ಪಾಠೋಪಕರಣಗಳನ್ನು ಬಳಸಿಕೊಂಡು ಪರಿಣಾಮಕಾರಿ ಬೋಧನೆ ಮಾಡುವಂತಹ ಶಿಕ್ಷಕರನ್ನು ಗುರ್ತಿಸಿ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ. ಪ್ರತಿ ತಿಂಗಳ ಕೊನೆಯ ದಿನ ಶಿಕ್ಷಕರಿಂದ ಮಾದರಿ ಪಾಠಕೊಡಿಸಿ ಬೋಧನೆಯನ್ನು ಪುನಃಶ್ಚೇತನಗೊಳಿಸಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ನಿರಂತರವಾಗಿ ಮಕ್ಕಳ ಪ್ರತಿಭಾ ಪ್ರದರ್ಶನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ‘ಓದಿ ಕಲಿ ಹಾಡಿ ನಲಿ’ ಎಂಬ ಕಾರ್ಯಕ್ರಮದ ಮೂಲಕ ಕೃತಿಯ ಲೇಖಕರೊಂದಿಗೆ ಮುಕ್ತ ಸಂವಾದಕ್ಕೆ ಅವಕಾಶ ನೀಡಿ, ಮಕ್ಕಳಲ್ಲಿ ಸಂವಹನಾ ಕೌಶಲ್ಯ, ವೇದಿಕೆ ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಿದ್ದಾರೆ. ವಿದ್ಯಾರ್ಥಿಗಳು ಪಠ್ಯೇತರ ಮೌಲ್ಯಾಧಾರಿತ ಕೃತಿಗಳನ್ನು ಓದಬೇಕೆಂಬ ಸದುದ್ದೇಶದಿಂದ ‘ಪುಸ್ತಕ ಸಂಸ್ಕೃತಿ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ‘ಹವ್ಯಾಸಿ ಓದುಗ’ ಪ್ರಶಸ್ತಿಯನ್ನು ೨೦೧೫ ರಿಂದ ಪ್ರತಿ ವರ್ಷ ನೀಡಿ ಪ್ರೋತ್ಸಾಹಿಸಿದ್ದಾರೆ. ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಗುಣಮಟ್ಟ ಹೆಚ್ಚಿಸುವುದು ಅಗತ್ಯವೆಂದು ಭಾವಿಸಿದ ಹ.ಮ. ಪೂಜಾರ ಗುರುಗಳು ಸೇವಾ ನಿರತ ಶಿಕ್ಷಕರಿಗಾಗಿ ಮತ್ತು ಭಾವಿ ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳಿಗೆ ‘ಶೈಕ್ಷಣಿಕ ಉಪನ್ಯಾಸ ಮಾಲೆ’ ಮತ್ತು ಶೈಕ್ಷಣಿಕ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ.
ಮಕ್ಳಳ ಸರ್ವಾಂಗೀಣ ಅಭಿವೃದ್ಧಿಗಾಗಿ ೧೯೭೬ ರಲ್ಲಿ ‘ಮಕ್ಕಳ ಬಳಗ’ವನ್ನು ಹುಟ್ಟು ಹಾಕಿದ ಹ.ಮ. ಪೂಜಾರ ಗುರುಗಳು ವೈವಿಧ್ಯಮಯ ಕಾರ್ಯಕ್ರಮಗಳಾದ ಮನೆಯಂಗಳದಲಿ ಚಿಲಿ ಪಿಲಿ, ಶಾಲಾ ಆವರಣದಲ್ಲಿ ಮಕ್ಕಳ ಕಲರವ, ಚಿಣ್ಣರ ನುಡಿಸಿರಿ, ಮಕ್ಕಳ ಹಬ್ಬ, ಮಕ್ಕಳ ಮೇಳ, ವಿಜ್ಞಾನ ಮೇಳ, ಮಕ್ಕಳ ಸಮ್ಮೇಳನ, ಬಿಡುವಿನ ಮನೆ, ವ್ಯಕ್ತಿತ್ವ ವಿಕಸನ ಶಿಬಿರ ಮುಂತಾದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಸನಗೊಳಿಸಿದ್ದಾರೆ. ಮಕ್ಕಳಿಂದ, ಮಕ್ಕಳ, ಮಕ್ಕಳಿಗೋಸ್ಕರ ಹಮ್ಮಿಕೊಂಡ ಅವರ ಎಲ್ಲ ಕಾರ್ಯಕ್ರಮಗಳ ಕೇಂದ್ರ ಬಿಂದು ಮಕ್ಕಳೇ ಎಂಬುದು ವಿಶೇಷ. ತನ್ಮೂಲಕ ಪೂಜಾರ ಗುರುಗಳು, ಮಕ್ಕಳ ಭಾಗವಹಿಸುವ ಮತ್ತು ಅಭಿವ್ಯಕ್ತಪಡಿಸುವ ಹಕ್ಕಿನ ಅವಕಾಶವನ್ನು ಮಕ್ಕಳಿಗೆ ಒದಗಿಸುವುದರ ಮೂಲಕ ಮಕ್ಕಳ ಹಕ್ಕುಗಳ ಜಾಗೃತಿಯನ್ನುಂಟು ಮಾಡಿದ್ದಾರೆ.
ವೃತ್ತಿಯಿಂದ ಆದರ್ಶ ಶಿಕ್ಷಕರಾದ ಹ.ಮ. ಪೂಜಾರ ಗುರುಗಳು ಪ್ರವೃತ್ತಿಯಿಂದ ಖ್ಯಾತ ಮಕ್ಕಳ ಸಾಹಿತಿಗಳಾಗಿದ್ದಾರೆ. ವಿದ್ಯಾಚೇತನ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದಕ್ಕಾಗಿ ಅನೇಕ ಮೌಲಿಕ ಕೃತಿಗಳನ್ನು ಸ್ವತಃ ಬರೆದು ಪ್ರಕಟಿಸಿದ್ದಾರೆ. ಅವರು ಬರೆದ ಪ್ರಮುಖ ಕೃತಿಗಳೆಂದರೆ, ನೀತಿಯ ಬದುಕು, ಪರೋಪಕಾರ, ತುಂಟಮಂಗ, ಮಕ್ಕಳ ಧಾಮ, ಯಾರು ಜಾಣರು?, ಚತುರ ಚಿಣ್ಣರು, ಅವರ ಪ್ರಮುಖ ಕಥಾ ಸಂಕಲನಗಳಾದರೆ, ಪರಿಸರ, ಗುಬ್ಬಚ್ಚಿ, ಮಕ್ಕಳ ಕವನ ಸಂಕಲನಗಳಾಗಿವೆ. ನಮಸ್ಕಾರ ಪುನಃ ಬನ್ನಿ, ಮತ್ತು ಕೆಮ್ಮಿನ ಔಷಧಿ ಉಚಿತ, ಇವು ಅವರ ನಗೆ ಹನಿಗಳ ಸಂಕಲನಗಳಾಗಿವೆ. ಕಾಯಕಯೋಗಿ ಶ್ರೀ ಚೆನ್ನವೀರ ಸ್ವಾಮೀಜಿ, ಗೋಲಗೇರಿಯ ಗೊಲ್ಲಾಳೇಶ್ವರ ಇವು ಅವರು ರಚಿಸಿದ ಜೀವನ ಚರಿತ್ರೆಗಳಾಗಿವೆ. ಚಿಣ್ಣರ ಚೇತನ, ಅಜ್ಜನ ಮನೆಯ ಅಂಗಳದಲ್ಲಿ ಅವರ ಮಕ್ಕಳ ಕಾದಂಬರಿಗಳಾಗಿವೆ. ರಸಕಿರಣ, ವಿಜಯವಾಣಿ, ಚಿಣ್ಣರ ಚೇತನ, ಪಂಚಾಕ್ಷರಿ ಪ್ರಭೆ, ಪುಟ್ಟ ಕಾಣಿಕೆ, ಸುವರ್ಣ ಸಂಭ್ರಮ, ಮಕ್ಕಳ ಸಾಹಿತ್ಯ ಚಿಂತನ ಇವು ಪೂಜಾರ ಗುರುಗಳ ಸಂಪಾದಿತ ಕೃತಿಗಳಾಗಿವೆ. ಹೀಗೆ ಹ.ಮ. ಪೂಜಾರ ಗುರುಗಳು ಮಕ್ಕಳಿಗಾಗಿ ಕಥೆ, ಕವನ, ಕಾದಂಬರಿ, ಹಾಸ್ಯ, ಜೀವನ ಚರಿತ್ರೆ, ಸಂಪಾದನೆಗಳಲ್ಲಿ ಮಕ್ಕಳ ಸಾಹಿತ್ಯದ ಕೃಷಿಗೈದು ಮಕ್ಕಳ ಸಾಹಿತ್ಯವೂ ಸಹ ಪ್ರೌಢ ಸಾಹಿತ್ಯದಂತೆ ಸಮೃದ್ಧಿ ಮತ್ತು ವೈವಿಧ್ಯತೆ ಹೊಂದಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಶ್ರೀಯುತರ ಅನೇಕ ಕವನಗಳು ಮತ್ತು ಕಥೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಕನ್ನಡ ಪಠ್ಯಪುಸ್ತಕದಲ್ಲಿ ಪ್ರಕಟಗೊಂಡಿರುವುದು ಹ.ಮ. ಪೂಜಾರ ಅವರ ಗುಣಾತ್ಮಕ ಮಕ್ಕಳ ಸಾಹಿತ್ಯಕ್ಕೆ ಸಾಕ್ಷಿಯಾಗಿದೆ.
ಹ.ಮ. ಪೂಜಾರ ಗುರುಗಳ ಅನುಭವ ಮತ್ತು ಅಮೂಲ್ಯ ಸೇವೆಯನ್ನು ಪರಿಗಣಿಸಿ ಅವರನ್ನು ಸಾಕ್ಷರತಾ ಪಠ್ಯರಚನಾ ಸಮಿತಿಯ ಸದಸ್ಯರನ್ನಾಗಿ, ೬ನೇ ತರಗತಿಯ ದ್ವಿತೀಯ ಭಾಷಾ ಕನ್ನಡ ಪಠ್ಯ ರಚನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗೌರವ ವನ್ಯಜೀವಿ ಪರಿಪಾಲಕರಾಗಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ, ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ನಮ್ಮೂರು ಮಕ್ಕಳ ಧಾಮ’ದ ಮಹಾಪೋಷಕರಾಗಿ ಮಕ್ಕಳ ಸೇವೆಗೈಯುತ್ತಿದ್ದಾರೆ.
ಹ.ಮ. ಪೂಜಾರ ಗುರುಗಳು ಪ್ರಶಸ್ತಿ ಪುರಸ್ಕಾರಗಳಿಗಾಗಿ ಎಂದೂ ಲಾಭಿ ಮಾಡಿದವರಲ್ಲ. ಅವರ ಮಕ್ಕಳ ಸಾಹಿತ್ಯ ಸೇವೆಯ ಫಲದಿಂದ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸರಕಾರವು ೧೯೯೮ ರಲ್ಲಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಭಾರತ ಸರಕಾರವು ೨೦೦೦ ರಲ್ಲಿ ಆದರ್ಶ ಶಿಕ್ಷಕ ರಾಷ್ಟ್ರಪ್ರಶಸ್ತಿಯನ್ನು ನೀಡಿ ಗೌರವಿಸಿವೆ. ಕರ್ನಾಟಕ ಸರಕಾರವು ೨೦೧೪ ರಲ್ಲಿ ಹಿರಿಯ ನಾಗರಿಕ ಪ್ರಶಸ್ತಿ ಮತ್ತು ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿವೆ.

ಹ.ಮ. ಪೂಜಾರ ಗುರುಗಳಿಗೆ ಸದ್ಯಕ್ಕೆ ೮೧ ವರ್ಷಗಳಾಗಿವೆ. ಆದರೂ ೧೮ರ ಯುವಕರಂತೆ ಅತ್ಯಂತ ಕ್ರಿಯಾಶೀಲರಾಗಿ ಮಕ್ಕಳ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ದೇಹಕ್ಕೆ ವಯಸ್ಸಾಗಿದೆ ವಿನಃ ಮನಸ್ಸು ಉತ್ಸಾಹದ ಚಿಲುಮೆಯಾಗಿದೆ. ಇಂದಿನ ಶಿಕ್ಷಕರು ಸರಳತೆಯನ್ನು ಮೈಗೂಡಿಸಿಕೊಂಡು ಶಿಕ್ಷಕ ವೃತ್ತಿಯನ್ನು ಸಾರ್ಥಕ ಪಡಿಸಿಕೊಳ್ಳುತ್ತ ಹ.ಮ. ಪೂಜಾರ ಗುರುಗಳ ಜೀವನವೇ ಒಂದು ಸಂದೇಶವಾಗಿದೆ ಎಂದರೆ ತಪ್ಪಾಗಲಾರದು. ಬಾಗಲಕೋಟೆಯಲ್ಲಿ ಇದೇ ೧೨ ರಂದು ಜರುಗಲಿರುವ ರಾಜ್ಯಮಟ್ಟದ ಶಿಕ್ಷಕ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಮಕ್ಕಳ ಸಾಹಿತ್ಯ ಸಮುದಾಯಕ್ಕೆ ಸಂದ ಗೌರವವಾಗಿದೆ.
– ಪ್ರಾ.ಎ.ಆರ್. ಹೆಗ್ಗನದೊಡ್ಡಿ
ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ, ವಿಜಯಪುರ.