ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಭಾಷೆ ಪಸರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರಷೋತ್ತಮ ಬಿಳಿಮಲೆ ಹೇಳಿದರು.
ಗುರುವಾರ ನಗರದ ಸಾಯಿ ಪಾರ್ಕನಲ್ಲಿರುವ ಚಾಣಕ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಮಲಾದೇವಿ ಪಾಟೀಲ ಮೆಮೋರಿಯಲ್ ಎಜ್ಯುಕೇಷನಲ್ ಅಸೋಸಿಯೇಷನ್ ಹಾಗೂ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಾಡು-ನುಡಿ ಚಿಂತನ ಒಂದು ದಿನ ರಾಜ್ಯಮಟ್ಟದ ವಿಚಾರ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ರಾಷ್ಟ್ರೀಕರಣ, ವ್ಯಾಪಾರೀಕಣದ ಹಿನ್ನೆಲೆಯಲ್ಲಿ ಇಂದು ನಾವು ತಂತ್ರಜ್ಞಾನವನ್ನು ಹೆಚ್ಚು ಬಳಕೆ ಮಾಡುತ್ತಿದ್ದೇವೆ. ಡಾ.ಬಿ.ಆರ್ ಅಂಬೇಡ್ಕರ ಅವರು ದೇಶದ ಎಲ್ಲ ಬಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣಕ್ಕೆ ಅನುಗುಣವಾಗಿ ಸಂವಿಧಾನ ರಚಿಸಿದ್ದಾರೆ.ಈ ದೇಶದ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ದೊರೆತು ಮನೆ- ಮನಗಳಲ್ಲಿ ಗೋಚರಿಸುತ್ತಿದೆ ಎಂದು ಅವರು ಹೇಳಿದರು.
ಕಲ್ಯಾಣದ ಚಾಲುಕ್ಯರು ಆಳುವ ದಿನಗಳಂದು ಇಂದಿನ ವಿಜಯಪುರ ವಿದ್ಯೆಗೆ ಪ್ರಧಾನವಾಗಿ ಹೆಮ್ಮರವಾಗಿ ಬೆಳೆದು ವಿದ್ಯಯಪುರ ಎಂಬ ಹೆಗ್ಗಳಿಕೆ ಗಳಿಸಿತ್ತು. ಇದಕ್ಕೆ ಕಾಲಕ್ರಮೇಣ ಬಿಜಾಪುರ ಎಂಬ ಹೆಸರಿನಿಂದ ಕರೆಯಲಾಯಿತು. ದೇಶದ ರಾಮಾಯಣ ಹಾಗೂ ಮಹಾಭಾರತದಂತಹ ಮಹಾ ಕಾವ್ಯಗಳು ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದು ಈ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ಪರಂಪರೆಗಳು ಬಿಂಬಿಸುವಂತವುಗಳಾಗಿವೆ. ಇವುಗಳನ್ನು ಉಳಿಸಿಕೊಂಡು ಹೋಗುವ ಜವಾಬ್ಧಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ.
ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು, ಅಗಾಧವಾದ ಜ್ಞಾನ ಪಡೆಯಲು ಪುಸ್ತಕಗಳನ್ನು ಆಶ್ರಯಿಸಬೇಕು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಅವರು ತಿಳಿಸಿದರು. ಕನ್ನಡ ಭಾಷಾ ಬೆಳೆವಣಿಗೆ ನಾವೆಲ್ಲರೂ ಬದ್ಧತೆಯಿಂದ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು.
ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷರಾದ ಡಾ.ಎಚ್.ಆರ್. ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫ.ಗು ಹಳಕಟ್ಟಿ ಅವರು ಶಿಕ್ಷಣದ ಕ್ರಾಂತಿಯನ್ನೇ ಮಾಡಿದರು. ವಚನ ಸಾಹಿತ್ಯವನ್ನು ರಚಿಸಿ, ರಕ್ಷಿಸಿ ಇಡೀ ವಿಶ್ವಕ್ಕೆ ಪರಿಚಯಸಿದ ಮಹಾನ ವ್ಯಕ್ತಿಗಳು. ಸಿಂಪಿ ಲಿಂಗಣ್ಣ, ಕೃಷ್ಣಮೂರ್ತಿ ಪುರಾಣಿಕ, ರಾವ್ ಬಹಾದ್ದೂರ, ಸತ್ಯಕಾಮ, ಮಧುರ ಚೆನ್ನರು, ಕಂದಗಲ್ಲ ಹನಮಂತರಾಯರು, ಡಾ.ಎಂ.ಎಂ ಕಲಬುರ್ಗಿ ಅವರುಗಳೆಲ್ಲ ಸಮೃದ್ಧ ಹಾಗೂ ಧೀಮಂತ ಕನ್ನಡ ಬಾಷೆಗಾಗಿ ನಿರಂತರ ಶ್ರಮ ವಹಿಸಿದವರು. ಕನ್ನಡಕ್ಕಾಗಿ ಅವರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೋಗಿ ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ, ಸಾರಿಗೆ ಇಲಾಖೆಯ ನಿವೃತ್ತ ಅಧೀಕ್ಷಕರಾದ ಹಾಗೂ ಸಂಶೋಧಕ ರಿಯಾಜ್ಅಹ್ಮದ್ ಬೋಡೆ ಆದಿಲ್ಷಾಹಿ ಸಾಹಿತ್ಯ – ಕನ್ನಡ ಅನುವಾದ ಕುರಿತು ಉಪನ್ಯಾಸ ಮಂಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ, ಪ್ರಾಚಾರ್ಯ ಡಾ.ಎಸ್.ಟಿ. ಮೇರವಾಡೆ, ವ್ಹಿ.ಎಸ್. ಸುರಪುರ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

