ಲೇಖನ
– ರಶ್ಮಿ ಕೆ. ವಿಶ್ವನಾಥ್,
ಮೈಸೂರು
ಉದಯರಶ್ಮಿ ದಿನಪತ್ರಿಕೆ
‘ಅಂದ, ಆರೋಗ್ಯ ಎರಡರಲ್ಲಿ ಯಾವುದು ಬೇಕು?’ ಎಂದು ಯಾರಾದರು ಬುದ್ಧಿವಂತರನ್ನ ಕೇಳಿದರೆ. ‘ಆನಂದ ಬೇಕು’ ಎನ್ನುತ್ತಾರೆ.
‘ಕವಿರತ್ನ ಕಾಳಿದಾಸನ ಎದುರಿಗೆ ಸರಸ್ವತಿ ಪ್ರತ್ಯಕ್ಷಳಾಗಿ ಹಾಲು & ಮೊಸರು ಎರಡು ಬಟ್ಟಲನ್ನು ಅವನ ಎದುರಿಗೆ ಹಿಡಿದು, “ಯಾವುದು ಬೇಕೋ ಆರಿಸಿಕೊ” ಎಂದು ಹೇಳಿದಾಗ. ಕಾಳಿದಾಸ ಎರಡನ್ನು ಒಟ್ಟಿಗೆ ತೆಗೆದುಕೊಂಡು ಕುಡಿದುಬಿಟ್ಟ’ ಎಂಬುದೊಂದು ಕಥೆ ಇದೆಯಲ್ಲ ಹಾಗೆ..
ಅಂದದಿಂದ ಆರೋಗ್ಯದಿಂದ ಎರಡರಿಂದಲೂ ಆನಂದ ಸಿಗುತ್ತೆ ಎಂದಮೇಲೆ ‘ಆನಂದವನ್ನ’ ಕೇಳುವುದೇ ಜಾಣತನ ಅಲ್ವೇ?
ಆದರೆ ಅದು ಸಾಧ್ಯವೆ..?
ಸಾಧ್ಯವಿತ್ತು. ಮೊದಲಿಗೆ. ಇವಾಗ.. ಸ್ವಲ್ಪ ಎಂದು ಹೇಳಲಾಗುವುದಿಲ್ಲ. ಜಾಸ್ತಿಯೇ ಕಷ್ಟ.
ನಮ್ಮ ಭಾರತಿಯರಿಗೆ ಚರ್ಮದ ಬಣ್ಣ ಬಿಳಿ ಇರಬೇಕು, ಕೂದಲ ಬಣ್ಣ ಕಪ್ಪುಇರಬೇಕು ಎಂಬುದಷ್ಟೇ ಬಯಕೆ.
ಅಂದುಕೊಂಡಂಗೆ ಆಗಿಬಿಟ್ಟರೆ ಅದರ ಜಾಯಮಾನಕ್ಕೆ ಅವಮಾನ. ಹಾಗಾಗಿ ಈವಾಗಿನ ದಿನಗಳಲ್ಲಿ ಅದು ಉಲ್ಟಾನೇ ಆಗ್ತಾಹೋಗ್ತಾ ಇದೆ.
ಅದಕ್ಕಾಗಿ ನಾವುಗಳು ನಾಯಿಬಾಲಕ್ಕೆ ದಬ್ಬೆ ಕಟ್ಟುವ ಕೆಲಸ ಮಾಡ್ತಾ ಇದ್ದೇವೆ.
ಬಿಳಿಯದಾಗುತ್ತಾ ಬರುವ ಕೂದಲಿಗೆ ಕಪ್ಪುಬಣ್ಣ ಬಳಿಯೋದು, ಕಪ್ಪಗಾಗುವ ಮುಖಕ್ಕೆ ಬಿಳಿಗಾಗೊ ಕ್ರೀಮು ಬಳಿಯೋದು. ಈ ಅಪಾರ್ಟ್ಮೆಂಟ್ ವಾಸಿಗಳು ಜೀವನಪೂರಾ maintainance charges ಕಟ್ಟುತ್ತಾರಲ್ಲ ಹಾಗೆ ಮೇಂಟೈನ್ ಮಾಡಿಕೊಂಡೆ ಹೋಗೋದು. ವಯಸ್ಸು ಇರೋತನಕ ಮೇಕ್ ಅಪ್ ಮಾಡ್ಸೋದು, ವಯಸ್ಸಾದಮೇಲೆ ಚೆಕ್ ಅಪ್ ಮಾಡ್ಸೋದು. ಹಾಗೋ ಹೀಗೋ ಹೇಗೋ ಒಟ್ಟಿನಲ್ಲಿ ಎಲ್ಲವೂ ಚಂದ ಇರ್ಬೇಕು ಎಂಬ ಆಸೆ.
ಆದರೆ ಅದು ಸಾಧ್ಯವೇ..?

ನಾಲಿಗೆಗೆ ಸಿಹಿ ಉದರಕ್ಕೆ ಕಹಿ
ಹೆಣ್ಣುಚಂದ ಕಣ್ಣುಕುಂಡ ಎನ್ನುವಂತೆ, ನೋಡಲೇನೋ ಚಂದ, ಆದರೆ ದೇಹದೊಳಗೆ ಆ ಕೆಮಿಕಲ್ ತನ್ನ ಕೆಲಸವನ್ನ ಮಾಡಲಾರಂಭಿಸಿರುತ್ತದೆ.
ಅದೇ ಕಾರಣದಿಂದಲೇ ನನಗೆ ತಿಳಿದ ಒಬ್ಬರು ಮೇಡಂ, ತಮ್ಮ ಕೂದಲಿಗೆ ಬಣ್ಣ ಬಳಿಯದೆ ಹಾಗೆ ಬಿಟ್ಟುಬಿಡೋಣ ಎಂದುಕೊಂಡು ಬಿಟ್ಟರು. ಅಬ್ಬಾ ನೋಡಲಾಗಲಿಲ್ಲ.
ಅವರ ತಂದೆ, ತಾಯಿ, ಪತಿ ಎಲ್ಲರೂ ಬಣ್ಣ ಹಚ್ಚುವಂತೆ ಬೇಡಲಾರಂಭಿಸಿದರು. ಯಾವುದಕ್ಕೂ ಒಪ್ಪದ ಅವರನ್ನ, ಗೆಳತಿಯರು ಮನೆಯವರು ಎಲ್ಲರೂ ಸೇರಿ ಕೊನೆಗೆ ಅವರ ಕೂದಲಿಗೆ ಕಪ್ಪುಬಣ್ಣ ಬಳಿಯುವಂತೆ ಮನವೊಲಿಸಿದರು.
ಬಣ್ಣವಿಲ್ಲದಿದ್ದಾಗ 75 ರಂತೆ ಕಾಣುತ್ತಿದ್ದ ಅವರು ಇವಾಗ 25ರಂತೆ ಕಾಣುತ್ತಿದ್ದಾರೆ. ಅದು ಬಣ್ಣದ ತಾಕತ್ತು.
ಇಂತಹ ಸಂದರ್ಭಗಳನ್ನು ನೋಡಿದಾಗ, ನಾವು ಪ್ರಧಾನ್ಯತೆ ಕೊಡಬೇಕಾದದ್ದು ಅಂದಕ್ಕಾ ಅರೋಗ್ಯಕ್ಕ ಎಂಬುದು ತಿಳಿಯುವುದೇ ಇಲ್ಲ.
ಮೊನ್ನೆ ಒಂದು ಡೆಂಟಲ್ ಕ್ಲಿನಿಕ್ ಹೋಗಿದ್ದೆ. ಆ ಡಾಕ್ಟರ್ ಪುಟಾಣಿ ಹುಡುಗನ ಹಾಗೆ ಪಟ ಪಟ ಅಂತ ಹುರಳಿ ಹುರಿದಂಗೆ ಮಾತಾಡ್ತಾ ಇದ್ರು. ಸುಮ್ಮನೆ ಗಮನಿಸಿದೆ. ಇನ್ನಾ ಚಿಕ್ಕ ವಯಸ್ಸಿನ ಬಿಳಿಮುಖ, ಕೂದಲು ಸಹ ಬಿಳಿಯೆ. 90% ಬೆಳ್ಳಗಾಗಿದ್ದ ಕೂದಲು, ಆ ಮುಖದ ಅಂದವನ್ನ ಮುಚ್ಚಿಡುವ ಹುನ್ನಾರ ಮಾಡಿತ್ತು. ಸೊಂಟದ ಮೇಲೆ ಪ್ಯಾಂಟು ನಿಲ್ಲದಿದ್ದರೂ ಸಹ ಆ ಹುಡುಗ ಅದಕ್ಕೊಂದು ಬೆಲ್ಟನ್ನೂ ಹಾಕಿರಲಿಲ್ಲ. ಅವಾಗ ಅಂದುಕೊಂಡೆ ‘ಓ ಇಯ್ಯಪ್ಪನಿಗೆ ಹೆಲ್ತ್ ಕಾನ್ಸಿಯಸ್ ಜಾಸ್ತಿ’ ಅಂತ.
‘ತಪ್ಪಿಲ್ಲ. ಆ ಹಲ್ಲಿನ ಡಾಕ್ಟರ್ ಗೆ ಇರಬೇಕಾದ ಜ್ಞಾನ & ಮಾತಿನ ಜಾಣತನ ಚೆನ್ನಾಗಿಯೇ ಇದೆ. ಮತ್ತದು ಸೌಂದರ್ಯವನ್ನ ಬೇಡ್ತಾ ಇಲ್ಲ. ಅವರ ಆತ್ಮವಿಶ್ವಾಸ ಉಳಿದಿದ್ದೆಲ್ಲವನ್ನ ಪಕ್ಕಕ್ಕೆ ಸರಿಸ್ತಾ ಇದೆ’ ಎಂಬುದು ಎದ್ದು ಕಾಣ್ತಾ ಇತ್ತು. ಹೀಗೂ ಇರಬಹುದು ಅಲ್ವಾ ಎನ್ನಿಸಿತು.
ಮೇಲಿನ ಎರಡು ಉದಾಹರಣೆಗಳಲ್ಲಿ ಒಂದು ಅಂದಕ್ಕೆ, ಮತ್ತೊಂದು ಆರೋಗ್ಯಕ್ಕೆ ಒತ್ತುಕೊಟ್ಟವು.
ಆದರೆ.. ಮತ್ತೊಂದು.. ಅದೊಂದು..
ನನ್ನನ್ನ ಗೊಂದಲದಲ್ಲಿಯೇ ಬಿಟ್ಟಿತು.
ಸ್ನೇಹಿತೆಯೊಬ್ಬರಿಗೆ ಕ್ಯಾನ್ಸರ್ ಆಗಿದ್ದರಿಂದ ಮಾತಾಡಿಸಿಬರೋಣವೆಂದು ಹೋಗಿದ್ದೆ.
ಮಿಲ್ಟ್ರಿ ಮಹಿಳೆಯಂತಿದ್ದ ಆಕೆ ಕಡ್ಡಿಯಂತಾಗಿಬಿಟ್ಟಿದ್ದಾರೆ.
ನನಗೇನು ಅನ್ನಿಸಲಿಲ್ಲ. ಯಾಕೆ ಅಂದ್ರೆ ನಾವು ಫೋನಿನಲ್ಲಿ ಮಾತಾಡುವಾಗಲೇ ಅವರ ಅನಾರೋಗ್ಯದ ತೀವ್ರತೆಯ ಅರಿವು ನನಗಾಗಿತ್ತು.
ಅವರು ಮಾತಿನ ಮಧ್ಯದಲ್ಲಿ ಬೆಳ್ಳಿಯ ಎಳೆಗಳಂತಿದ್ದ ತಮ್ಮ ಕೂದಲನ್ನು ತೋರಿಸುತ್ತಾ ಹೇಳಿದರು “ನಾನು ಕಲರ್ ಮಾಡೇ ಇಲ್ಲ ರಶ್ಮಿ. ಹಾಗೆ ಬಿಟ್ಟುಬಿಟ್ಟಿದ್ದೀನಿ”
ಹೆಚ್ಚು ಕಡಿಮೆ 4 ವರ್ಷಗಳಿಂದ ಕ್ಯಾನ್ಸರ್, ಕ್ಷಯ ಅಂತ ಒಂದೇಸಮನೆ ನರಳಿದ ಆಕೆಗೆ ತನ್ನ ಸೌಂದರ್ಯ ಏನಾದರೂ ಆಗಲಿ ಆರೋಗ್ಯ ಸರಿಹೋದರೆ ಸಾಕು ಎಂದು ಮರುಗುತ್ತಿದ್ದ ಆಕೆಗೆ ನನ್ನ ಮುಂದೆ ಹಾಗೆ ಇರಲು ತುಸು ನಾಚಿಕೆ ಆಗಿರಬೇಕು.
ನಾನೇ ಮುಂದುವರೆದು ಹೇಳಿದೆ “ನೋಡಿ ಮೊದಲಿಗೆ ನಾವು, ನಂತರ ಉಳಿದದ್ದು. ಆರೋಗ್ಯ ಚೆನ್ನಾಗಿ ಆದರೆ ನಂತರ ಏನುಬೇಕಾದ್ರು ಸ್ಟೈಲ್ ಮಾಡಬಹುದು. ಅದೂ ಅಲ್ಲದೆ ನೀವು ವರ್ಕಿಂಗ್ ಇಲ್ಲ, ಸಾಧ್ಯಕ್ಕೆ ಎಲ್ಲೂ ಹೊರಗಡೆ ಫಂಕ್ಷನ್ ಗಳಿಗೆ ಹೋಗಬೇಡಿ, ನಿಮ್ಮ ಹೆಲ್ತ್ ಇನ್ನೇನೋ ರಿಕವರ್ ಆಗ್ತಾ ಇದೆ. ಪೂರಾ ಹುಷಾರಾದ ನಂತರ ಏನುಬೇಕಾದ್ರು ಮಾಡಬಹುದು. ನಿಮಗೆ ಗೊತ್ತಲ್ವಾ..
ಹೇರ್ ಕಲರ್, ಪೀರಿಯಡ್ಸ್ ಪ್ಯಾಡ್ಸ್ ಇದೆಲ್ಲ ಕ್ಯಾನ್ಸರ್ ಕಾರಕಗಳೇ. ಪ್ಯಾಡ್ ಬದಲಿಗೆ ಮೆನ್ಟ್ರುಯಲ್ ಕಪ್ ಬಳಸಬಹುದು. ಆದರೆ ಹೇರ್ ಕಲರ್ ಬದಲಿಗೆ.. ” ಎನ್ನುವಾಗಲೇ ಅವರು ಭಯಪಟ್ಟರು “ಹೌದು ರಶ್ಮಿ. ಊಟ ತರಿಸುವ ಪಾರ್ಸೆಲ್ ಕವರ್ಸ್ ಸಹ ಅದೇ..” ಹೀಗೆ ಮಾತು ಮುಂದುವರೆಯುತ್ತಾ ಹೋಯಿತು. ನನ್ನ ಮನಸು ಮಾತ್ರ ಒಳಗೇ ಮಾತಾಡುತ್ತಿತ್ತು ‘ಎಲ್ಲಕ್ಕಿನ್ನ ಹೆಚ್ಚಾಗಿ ಅರೋಗ್ಯ ಬೇಕೇ ಬೇಕು ಎಂಬುದು ಎಲ್ಲರಿಗೂ ಗೊತ್ತಿದ್ದರೂ ಸಹ, ತಾನು ಚಂದ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತೆ.
‘ಕೋಡಗಾನ ಕೋಳಿ ನುಂಗಿತ್ತಾ.. ತಾಯಿ.. ‘ಅರೋಗ್ಯಾನ ಅಂದದಾಸೆ ನುಂಗಿತ್ತಾ..


